ಬೆಂಗಳೂರು:
ನಗರದ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ್ದ ಕಾಲ್ತುಳಿತದ ಪ್ರಕರಣದಲ್ಲಿ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ನಾಲ್ವರ ಅಮಾನತು ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆದುಕೊಂಡಿದೆ. ಇದರ ಬೆನ್ನಲ್ಲೇ ಇದೀಗ ಅಮಾನತು ರದ್ದಾದ ಐಪಿಎಸ್ ಅಧಿಕಾರಿಗಳಿಗೆ ಸ್ಥಳ ನಿಯೋಜನೆ ಮಾಡಿ ಆದೇಶ ಹೊರಡಿಸಿದೆ. ಈ ಹಿಂದೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಬಿ.ದಯಾನಂದ್ ಅವರನ್ನ ಕಾರಾಗೃಹ ಮತ್ತು ಸುಧಾರಣಾ ಇಲಾಖೆ ಎಡಿಜಿಪಿಯಾಗಿ ಸ್ಥಳ ನಿಯೋಜನೆ ಮಾಡಿದ್ದರೆ, ಇನ್ನೋರ್ವ ಐಪಿಎಸ್ ಶೇಖರ್ ಹೆಚ್.ಟಿ ಅವರಿಗೆ ಗುಪ್ತಚರ ಇಲಾಖೆಯ ಎಸ್ಪಿ ಹುದ್ದೆ ನೀಡಲಾಗಿದೆ.
ಚಿನ್ನಸ್ವಾಮಿ ಕ್ರೀಡಾಂಗಣ ಕಾಲ್ತುಳಿತ ದುರಂತಕ್ಕೆ ಪೊಲೀಸ್ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸರಕಾರ ಹೇಳಿತ್ತು. ಇದರಿಂದ ರಾಜ್ಯ ಸರ್ಕಾರ, ಅಂದಿನ ಬೆಂಗಳೂರು ಪೊಲೀಸ್ ಕಮಿಷನರ್ ಆಗಿದ್ದ ಬಿ.ದಯಾನಂದ್, ಡಿಸಿಪಿ ಶೇಖರ್ ಹೆಚ್.ಟಿ., ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ASI ಬಾಲಕೃಷ್ಣ ಹಾಗೂ ಇನ್ಸ್ಪೆಕ್ಟರ್ ಗಿರೀಶ್ ಅವರನ್ನು ಅಮಾನತು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಇದೀಗ ರಾಜ್ಯ ಸರ್ಕಾರ ಯು ಟರ್ನ್ ಹೊಡೆದಿದ್ದು, ಪೊಲಿಸ್ ಅಧಿಕಾರಿಗಳ ಅಮಾನತು ಆದೇಶವನ್ನು ವಾಪಸ್ ಪಡೆದುಕೊಂಡಿದೆ. ಇದರ ಬೆನ್ನಲ್ಲೇ ಇದೀಗ ದಯಾನಂದ್ ಹಾಗೂ ಶೇಖರ್ ಹೆಚ್.ಟಿ ಅವರಿಗೆ ಹುದ್ದೆ ನೀಡಲಾಗಿದೆ.
ಬಿ. ದಯಾನಂದ್ ಅವರಿಗೆ ಬಹಳ ದೊಡ್ಡ ಜವಾಬ್ದಾರಿ ನೀಡಲಾಗಿದೆ. ಈ ಹಿಂದೆ ಬೆಂಗಳೂರು ಪೊಲೀಸ್ ಕಮಿಷನರ್ ಆಗಿದ್ದಾಗ ಇವರ ಮೇಲೆ ಮಹಾನಿರ್ದೇಶಕರು ಇದ್ದರು. ಆದರೆ ಈಗ ಅವರನ್ನು ಕಾರಾಗೃಹ ಮತ್ತು ಸುಧಾರಣಾ ಎಡಿಜಿಪಿಯಾಗಿ ಮಾಡಲಾಗಿದೆ. ಹೀಗಾಗಿ ದಯಾನಂದ್ ಅವರೇ ವಿಭಾಗ ಮುಖ್ಯಸ್ಥರಾಗಿದ್ದು, ನೇರವಾಗಿ ಗೃಹ ಸಚಿವರಿಗೆ ರಿಪೋರ್ಟ್ ಮಾಡಿಕೊಳ್ಳಲಿದ್ದಾರೆ. ಇದರಿಂದ ದಯಾನಂದ್ ಅವರಿಗೆ ನೀಡಿರುವುದು ದೊಡ್ಡ ಹುದ್ದೆಯಾಗಿದೆ.
ಇತ್ತೀಚೆಗೆ ರಾಜ್ಯದ ವಿವಿಧ ಕಾರಾಗೃಹದಲ್ಲಿ ಹೊರಗಿನಿಂದ ಮೊಬೈಲ್, ಗುಟ್ಕಾ, ಸಿಗರೇಟ್ ಗಾಂಜಾ ಸಪ್ಲೈ ಆಗುತ್ತಿರುವುದು ಕಂಡುಬಂದಿದೆ. ಇದರ ನಡುವೆ ಇದೀಗ ದಯಾನಂದ್ ಅವರಿಗೆ ಕಾರಾಗೃಹ ಸುಧಾರಣಾ ಇಲಾಖೆ ಮುಖ್ಯಸ್ಥರನ್ನಾಗಿ ಮಾಡಲಾಗಿದೆ. ಕಾರಾಗೃಹಗಳಲ್ಲಿ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕುವುದು ಒಂದು ದೊಡ್ಡ ಚಾಲೆಂಜ್ ಆಗಿದ್ದು, ಇದನ್ನು ಹೇಗೆ ನಿಭಾಯಿಸಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.
