ಬೆಂಗಳೂರು:
ಪ್ಯಾನ್ ಇಂಡಿಯಾ ಸಿನಿಮಾ ಕಾಂತಾರ ಪ್ರೀಕ್ವೆಲ್ ಶೂಟಿಂಗ್ ಪೂರ್ಣಗೊಂಡು ಪೋಸ್ಟ್ ಪ್ರೊಡಕ್ಷನ್ ಕಾರ್ಯದಲ್ಲಿ ಬ್ಯುಸಿಯಾಗಿರುವ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಸಿನಿಪ್ರಿಯರಿಗೆ ಗುಡ್ನ್ಯೂಸ್ ಕೊಟ್ಟಿದ್ದಾರೆ. ಇದು ಅವರು ಕಾಂತಾರ ಸಿನಿಮಾದ ಬಗ್ಗೆ ಅಲ್ಲ. ಬದಲಾಗಿ ತಮ್ಮ ಮುಂದಿನ ಚಿತ್ರದ ಬಗ್ಗೆ ಬಿಗ್ ಅಪ್ಡೇಟ್ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕಾಂತಾರದ ನಂತರ ರಿಷಬ್ ಯಾವೆಲ್ಲಾ ಚಿತ್ರಗಳಲ್ಲಿ ನಟಿಸುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಅದಕ್ಕೆ ಪೂರಕ ಎಂಬಂತೆ ಈ ಹಿಂದೆ ಅವರು ಛತ್ರಪತಿ ಶಿವಾಜಿ ಹಾಗೂ ಶ್ರೀಕೃಷ್ಣ ದೇವರಾಯರ ಬಯೋಪಿಕ್ನಲ್ಲಿ ನಟಿಸುವುದಾಗಿ ಘೋಷಿಸಿದ್ದರು. ಅಲ್ಲದೇ ಅದಕ್ಕೆ ಸಂಬಂಧಿಸಿದ ಪೋಸ್ಟರ್ಗಳು ಕೂಡ ರಿಲೀಸ್ ಆಗಿದ್ದವು. ಇದೀಗ ಮತ್ತೊಂದು ಐತಿಹಾಸಿಕ ಕಥಾಹಂದರವುಳ್ಳ ಸಿನಿಮಾದಲ್ಲಿ ನಟಿಸುತ್ತಿರುವುದಾಗಿ ರಿಷಬ್ ಪೋಸ್ಟರ್ವೊಂದನ್ನು ಶೇರ್ ಮಾಡಿದ್ದಾರೆ.
ಕನ್ನಡ-ತೆಲುಗು ಸೇರಿದಂತೆ ಬಹುಭಾಷೆಗಳಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಚಿತ್ರವನ್ನು ನಾಗ ವಂಶಿ ಅವರ ಸಿತಾರಾ ಎಂಟರ್ಟೈನ್ಮೆಂಟ್ಸ್ ನಿರ್ಮಿಸಲಿದೆ. ಯುವ ಚಲನಚಿತ್ರ ನಿರ್ಮಾಪಕ ಅಶ್ವಿನ್ ಗಂಗರಾಜು ನಿರ್ದೇಶಿಸಲಿದ್ದಾರೆ. ಇದೊಂದು 18 ನೇ ಶತಮಾನದ ಹಿನ್ನೆಲೆಯನ್ನು ಹೊಂದಿರುವ ಇನ್ನೂ ಹೆಸರಿಡದ ಕಾಲ್ಪನಿಕ ಐತಿಹಾಸಿಕ ಆಕ್ಷನ್ ಡ್ರಾಮ. ತೆಲುಗು ಮತ್ತು ಕನ್ನಡದಲ್ಲಿ ಏಕಕಾಲದಲ್ಲಿ ನಿರ್ಮಿಸಲಾಗುತ್ತಿರುವ ಈ ಚಿತ್ರವು ಹಿಂದಿ, ತಮಿಳು ಮತ್ತು ಮಲಯಾಳಂ ಆವೃತ್ತಿಗಳಲ್ಲಿ ಬಿಡುಗಡೆಯಾಗಲಿದೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಹಂಚಿಕೊಂಡಿರುವ ರಿಷಬ್, ನನ್ನ ಮುಂದಿನ ಚಿತ್ರ, ನಿಮ್ಮ ಆಶೀರ್ವಾದ ಎಂದಿನಂತೆ ಸದಾ ಇರಲಿ ಎಂದಿದ್ದಾರೆ. ಎಲ್ಲಾ ಬಂಡುಕೋರರು ಯುದ್ಧದಲ್ಲಿ ಹುಟ್ಟಿಕೊಳ್ಳುವುದಿಲ್ಲ. ಕೆಲವರನ್ನು ವಿಧಿ ಆಯ್ಕೆ ಮಾಡುತ್ತದೆ ಮತ್ತು ಇದು ಬಂಡಾಯ ಹೋರಾಟಗಾರನ ಕಥೆ ಎಂದು ಬರೆದುಕೊಂಡಿದ್ದಾರೆ.
ಇನ್ನು ರಿಷಬ್ ರಿಲೀಸ್ ಮಾಡಿರುವ ಪೋಸ್ಟರ್ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಯುದ್ಧಕ್ಕೆ ಸಜ್ಜಾಗಿ ನಿಂತಿರುವ ಬಂಡಾಯ ಹೋರಾಟಗಾರರ ಹಿಂದೆ ಶಸ್ತ್ರ ಸಜ್ಜಿತ ಯೋಧನೋರ್ವ ನಿಂತಿರುವುದು ಮತ್ತು ಅವರನ್ನು ಗುರಿಯಾಗಿಸಿ ನೆಟ್ಟಿರುವ ನೂರಾರು ಬಂದೂಕುಗಳು, ಫಿರಂಗಿಗಳನ್ನು ಕಾಣಬಹುದು. ಪೋಸ್ಟರ್ ಮೇಲೆ ಭೂಮಿ ಹೊತ್ತಿ ಉರಿಯಿತು, ಬಂಡಾಯ ಹೋರಾಟಗಾರ ಹುಟ್ಟಿಕೊಂಡ ಎಂದು ಬರೆದಿದೆ. ಒಟ್ಟಿನಲ್ಲಿ ಇದೊಂದು ಸ್ವತಂತ್ರ್ಯ ಪೂರ್ವದ ಬಂಡಾಯ ಹೋರಾಟಗಾರನೋರ್ವ ಕಥೆ ಎಂಬುದು ಸ್ಪಷ್ಟವಾಗುತ್ತದೆ.








