ಯಾದಗಿರಿ:
ಮಹಿಂದ್ರಾ ಬುಲೆರೊ ಹಾಗೂ ಸಾರಿಗೆ ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿರುವಂತಹ ಘಟನೆ ನಡೆದಿದೆ.ಜಿಲ್ಲೆಯ ಶಹಾಪುರ ತಾಲೂಕಿನ ಮದ್ದರಕಿ ಬಳಿಯ ರಾಷ್ಟ್ರೀಯ ಹೆದ್ದಾರಿ 150ಎ ನಲ್ಲಿ ನಿನ್ನೆ ರಾತ್ರಿ ನಡೆದಿದೆ. ಯಾದಗಿರಿ ತಾಲೂಕಿನ ವರ್ಕನಹಳ್ಳಿ ಗ್ರಾಮದವರಾದ ಬುಲೆರೊ ಚಾಲಕ ಶರಣಪ್ಪ, ಸುನೀತಾ, ಸೋಮವ್ವ ಮತ್ತು ತಂಗಮ್ಮ ಮೃತ ದುರ್ದೈವಿಗಳು.
ಮಹಿಂದ್ರಾ ಬೊಲೇರೊದಲ್ಲಿದ್ದವರು ಶಹಾಪುರದಿಂದ ಕಲಬುರಗಿಯ ಘತ್ತರಕಿಯ ದೇವಸ್ಥಾನಕ್ಕೆ ತೆರಳುತ್ತಿದ್ದರು ಎಂದು ತಿಳಿದುಬಂದಿದೆ. ಸಾರಿಗೆ ಬಸ್ ಕಲಬುರಗಿಯಿಂದ ಆಗಮಿಸುತ್ತಿತ್ತು ಎನ್ನಲಾಗಿದೆ. ಈ ಅಪಘಾತದಲ್ಲಿ ಇತರ 12 ಮಂದಿ ಗಾಯಗೊಂಡಿದ್ದು, ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭೀಮರಾಯನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
