ನ್ಮಾರ್, ಥೈಲ್ಯಾಂಡ್ ನಲ್ಲಿ ಭೂಕಂಪ : ಭಾರತದಿಂದ ಅಗತ್ಯ ಪರಿಹಾರ ಸಾಮಗ್ರಿಗಳ ರವಾನೆ

ಬ್ಯಾಂಕಾಕ್:

    ಮ್ಯಾನ್ಮಾರ್ ಮತ್ತು ನೆರೆಯ ಥೈಲ್ಯಾಂಡ್‌ನಲ್ಲಿ ನಿನ್ನೆ ಶುಕ್ರವಾರ ಮಧ್ಯಾಹ್ನ ಹೊತ್ತಿಗೆ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಕಟ್ಟಡಗಳು, ಸೇತುವೆಗಳು, ರಸ್ತೆಗಳು, ಸಾರ್ವಜನಿಕ ಆಸ್ತಿಪಾಸ್ತಿಗಳು ನಾಶವಾಗಿದೆ. ಅನೇಕ ಸಾವು-ನೋವುಗಳು ವರದಿಯಾಗಿವೆ. ಭೂಕಂಪಕ್ಕೆ ಸಂಬಂಧಪಟ್ಟ ಫೋಟೋ-ವಿಡಿಯೊಗಳು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದ್ದು, ದೃಶ್ಯಗಳು ಭಯಾನಕವಾಗಿವೆ.

    ಮ್ಯಾನ್ಮಾರ್‌ನಲ್ಲಿ ಭೂಕಂಪಕ್ಕೆ ಮೃತಪಟ್ಟವರ ಸಂಖ್ಯೆ 150ಕ್ಕೆ ಏರಿಕೆಯಾಗಿದೆ. ಮ್ಯಾನ್ಮಾರ್ ನ ಎರಡು ನಗರಗಳು ತೀವ್ರ ಹಾನಿಗೀಡಾಗಿವೆ. ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್ ನಲ್ಲಿ ನಿರ್ಮಾಣ ಹಂತದಲ್ಲಿದ್ದ ಎತ್ತರದ ಕಟ್ಟಡ ಕುಸಿದು ಕನಿಷ್ಠ 10 ಜನರು ಮೃತಪಟ್ಟಿದ್ದಾರೆ. ಸಾವು-ನೋವು ಗಾಯ ಮತ್ತು ವಿನಾಶದ ಸಂಪೂರ್ಣ ಪ್ರಮಾಣವು ತಕ್ಷಣಕ್ಕೆ ಸಿಕ್ಕಿಲ್ಲ. ವಿಶ್ವದ ಅತ್ಯಂತ ಬಡ ದೇಶಗಳಲ್ಲಿ ಒಂದಾದ ಮ್ಯಾನ್ಮಾರ್‌ ಈಗಾಗಲೇ ಅಂತರ್ಯುದ್ಧದಿಂದ ಸಿಲುಕಿಹಾಕಿಕೊಂಡಿದ್ದು, ಪ್ರಕೃತಿ ವಿಕೋಪ ಮತ್ತಷ್ಟು ಕಷ್ಟಕ್ಕೆ ಸಿಲುಕಿಸಿದೆ.

    ಭೂಕಂಪದಿಂದ ಜನರ ಸಾವಿನ ಸಂಖ್ಯೆ ಮತ್ತು ಗಾಯದ ಪ್ರಮಾಣಗಳು ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಮ್ಯಾನ್ಮಾರ್‌ನ ಮಿಲಿಟರಿ ಸರ್ಕಾರದ ಮುಖ್ಯಸ್ಥ, ಹಿರಿಯ ಜನರಲ್ ಮಿನ್ ಆಂಗ್ ಹ್ಲೈಂಗ್ ಅವರು ಸರ್ಕಾರಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಮ್ಯಾನ್ಮಾರ್ ನಲ್ಲಿ ಮೃತಪಟ್ಟವರ ಸಂಖ್ಯೆ 150ಕ್ಕೆ ಏರಿಕೆಯಾಗಿದ್ದು, 730 ಜನರು ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.  ಥೈಲ್ಯಾಂಡ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಬ್ಯಾಂಕಾಕ್ ಮತ್ತು ಥೈಲ್ಯಾಂಡ್‌ನ ಇತರ ಭಾಗಗಳಲ್ಲಿ ಪ್ರಬಲ ಭೂಕಂಪನಗಳು ದಾಖಲಾದ ನಂತರ, ಥಾಯ್ ಅಧಿಕಾರಿಗಳ ಸಮನ್ವಯದೊಂದಿಗೆ ರಾಯಭಾರ ಕಚೇರಿಯು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ.

   ಇಲ್ಲಿಯವರೆಗೆ, ಯಾವುದೇ ಭಾರತೀಯ ನಾಗರಿಕರಿಗೆ ತೊಂದರೆಯಾದ ಬಗ್ಗೆ ವರದಿಯಾಗಿಲ್ಲ. ಯಾವುದೇ ತುರ್ತು ಸಂದರ್ಭದಲ್ಲಿ, ಥೈಲ್ಯಾಂಡ್‌ನಲ್ಲಿರುವ ಭಾರತೀಯ ಪ್ರಜೆಗಳು ತುರ್ತು ಸಂಖ್ಯೆ +66 618819218 ನ್ನು ಸಂಪರ್ಕಿಸಲು ಸೂಚಿಸಲಾಗಿದೆ. ಬ್ಯಾಂಕಾಕ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ಚಿಯಾಂಗ್ ಮಾಯ್‌ನಲ್ಲಿರುವ ದೂತಾವಾಸದ ಎಲ್ಲಾ ಸದಸ್ಯರು ಸುರಕ್ಷಿತವಾಗಿದ್ದಾರೆ ಎಂದು ರಾಯಭಾರ ಕಚೇರಿ ಎಕ್ಸ್ ಖಾತೆಯಲ್ಲಿ ತಿಳಿಸಿದೆ. 

   ಮ್ಯಾನ್ಮಾರ್ ಮತ್ತು ಥೈಲ್ಯಾಂಡ್‌ ನಲ್ಲಿ ಪ್ರಕೃತಿ ವಿಕೋಪಕ್ಕೆ ಉಂಟಾದ ನಷ್ಟ ಮತ್ತು ತೊಂದರೆಗೆ ಸಾಧ್ಯವಾದ ಎಲ್ಲಾ ರೀತಿಯ ಸಹಾಯ ನೀಡಲು ಭಾರತ ಸಿದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಅಲ್ಲಿನ ನಾಗರಿಕರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತೇನೆ. ಭಾರತ ಸಾಧ್ಯವಿರುವ ಎಲ್ಲಾ ಸಹಾಯವನ್ನು ನೀಡಲು ಸಿದ್ಧವಾಗಿದೆ. ಈ ನಿಟ್ಟಿನಲ್ಲಿ, ನಮ್ಮ ಅಧಿಕಾರಿಗಳನ್ನು ಸನ್ನದ್ಧರಾಗಿರಲು ಕೇಳಿಕೊಂಡಿದ್ದೇನೆ ಎಂದು ಎಕ್ಸ್ ಮಾಧ್ಯಮದಲ್ಲಿ ಪ್ರಧಾನಿ ಮೋದಿ ತಿಳಿಸಿದ್ದಾರೆ. 

   ಭೂಕಂಪಪೀಡಿತ ಮ್ಯಾನ್ಮಾರ್ ಗೆ ಭಾರತೀಯ ವಾಯುಪಡೆಯ ಸಿ-130ಜೆ ವಿಮಾನದಲ್ಲಿ 15 ಟನ್ ಪರಿಹಾರ ಸಾಮಗ್ರಿಗಳನ್ನು ಕಳುಹಿಸಲಾಗುತ್ತಿದೆ. ಇಂದು ಬೆಳಗ್ಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಸಿಬ್ಬಂದಿ ಪರಿಹಾರ ಸಾಮಗ್ರಿಗಳನ್ನು ಕಳುಹಿಸಿದ್ದಾರೆ.

   ಪರಿಹಾರ ಸಾಮಗ್ರಿಗಳಲ್ಲಿ ಟೆಂಟ್ ಗಳು, ನಿದ್ದೆಮಾಡುವ ಬ್ಯಾಗ್ ಗಳು, ಬ್ಲಾಂಕೆಟ್, ತಕ್ಷಣ ಸೇವನೆಗೆ ಸಿದ್ಧವಿರುವ ಆಹಾರ ಸಾಮಗ್ರಿಗಳು, ನೀರು, ಸ್ವಚ್ಛತಾ ಕಿಟ್ ಗಳು, ಸೋಲಾರ್ ಲ್ಯಾಂಪ್ಸ್, ಜನರೇಟರ್ ಸೆಟ್ ಗಳು, ಅಗತ್ಯ ಔಷದೋಪಚಾರ ಸಾಮಗ್ರಿಗಳು, ಗ್ಲೌಸ್, ಬ್ಯಾಂಡೇಜ್ ಗಳು ಸೇರಿಕೊಂಡಿವೆ.

Recent Articles

spot_img

Related Stories

Share via
Copy link