ಮಂಡ್ಯ
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಈ ಬಾರಿ ಸಕ್ಕರಿನಗರಿ ಮಂಡ್ಯದಲ್ಲಿ ನಡೆಯುತ್ತಿದೆ. ಈ ನುಡಿಜಾತ್ರೆಯನ್ನು ಮತ್ತಷ್ಟು ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಆಚರಣೆ ಮಾಡಲು, ಮಂಡ್ಯ ಜಿಲ್ಲಾಡಳಿತ ತಯಾರಿ ಮಾಡಿಕೊಂಡಿದೆ. ಈ ಮಧ್ಯೆ ತಾಂತ್ರಿಕ ಸಮಿತಿಯ ವರದಿಯ ಆಧರಿಸಿ, ನಗರದ ಹೊರವಲಯದ 60 ಎಕರೆ ಪ್ರದೇಶದಲ್ಲಿ ನುಡಿಜಾತ್ರೆಗೆ ಈಗಿನಿಂದಲೇ ತಯಾರಿ ಶುರುವಾಗಿದೆ. ಈ ಕುರಿತ ಒಂದು ವರದಿ ಇಲ್ಲಿದೆ.
ಈ ಬಾರಿ ಸಕ್ಕರಿನಗರಿ ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಡಿಸೆಂಬರ್ 20, 21 ಮತ್ತು 22 ರಂದು ಮೂರು ದಿನಗಳ ಕಾಲ ನಡೆಲಿದೆ. ಅಂದಹಾಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಂದರೆ ಅದು ಕನ್ನಡ ಹಬ್ಬ. ಕನ್ನಡ ಐಕ್ಯತೆ, ಸಾಂಸ್ಕೃತಿಕ ಸಾಹಿತ್ಯಕ ಹಬ್ಬ. ಈ ನಾಡು ನುಡಿಯನ್ನ ಬಿಂಬಿಸುವ ಕನ್ನಡ ಐಕ್ಯತೆ ಸಾರುವ ಹಬ್ಬ ನಮಗೆಲ್ಲ. ಈ ಇಂತಹ ನುಡಿಜಾತ್ರೆ ಈ ಬಾರಿ ಅತೀ ಹೆಚ್ಚು ಕನ್ನಡವನ್ನೇ ಮಾತನಾಡುವ ಸಕ್ಕರಿನಗರಿ ಮಂಡ್ಯದಲ್ಲಿ ಆಯೋಜನೆ ಮಾಡಲಾಗಿದೆ.
ಈ ನುಡಿಜಾತ್ರೆಯನ್ನ ಅರ್ಥಪೂರ್ಣವಾಗಿ ನಡೆಸಲು ರಾಜ್ಯ ಸರ್ಕಾರ, ಕನ್ನಡ ಸಾಹಿತ್ಯ ಪರಿಷತ್ ಮತ್ತು ಮಂಡ್ಯ ಜಿಲ್ಲಾಡಳಿತ ಈಗಾಗಲೇ ಎಲ್ಲ ರೀತಿಯ ತಯಾರಿ ಮಾಡಿಕೊಂಡಿದೆ. ಈಗಾಗಲೇ ಸಾಕಷ್ಟು ಸಮಿತಿಗಳನ್ನ ರಚನೆ ಕೂಡ ಮಾಡಲಾಗಿದೆ. ಈ ನಡುವೆ ಸ್ಥಳದ ಬಗ್ಗೆ ಸಾಕಷ್ಟು ಗೊಂದಲವಿತ್ತು. ಅದು ಕೂಡ ನಿವಾರಣೆಯಾಗಿದ್ದು, ತಾಂತ್ರಿಕ ಸಮಿತಿ ವರದಿ ಅನ್ವಯ ಮಂಡ್ಯ ಹೊರವಲಯದ ಶ್ರೀನಿವಾಸ್ ಪುರದ ಬಳಿ ಸುಮಾರು 60 ಎಕರೆ ಪ್ರದೇಶದಲ್ಲಿ ನುಡಿಹಬ್ಬವನ್ನ ಆಚರಣೆ ಮಾಡಲು ತಯಾರಿ ಕೂಡ ನಡೆದಿದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ್ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಪ್ರಾರಂಭದಲ್ಲಿ ಮಂಡ್ಯ ಜಿಲ್ಲೆಯ ಯಾವ ಸ್ಥಳದಲ್ಲಿ ಸಮ್ಮೇಳನ ಮಾಡಬೇಕು ಎಂಬ ಗೊಂದಲವಿತ್ತು. ಈ ನಿಟ್ಟಿನಲ್ಲಿ ನಾಲ್ಕರಿಂದ ಐದು ಜಾಗವನ್ನ ಗುರುತು ಮಾಡಲಾಗಿತ್ತು. ಸಾಕಷ್ಟು ಸಾಹಿತಿಗಳು, ಹಲವು ಸಂಘಟನೆಗಳು ಮಂಡ್ಯ ನಗರದಲ್ಲಿಯೇ ಸಮ್ಮೇಳನ ಮಾಡುವಂತೆ ಮನವಿ ಮಾಡಿದ್ದರು. ನಗರದಲ್ಲಿ ಆದರೆ ಹೆಚ್ಚು ಜನರು ಕೂಡ ಬರುತ್ತಾರೆ ಎಂದು ಮನವಿ ಮಾಡಿದ್ದರು. ಆದರೆ ಸಮ್ಮೆಳನ ನಡೆಸುವಷ್ಟು ಜಾಗ ನಗರ ಪ್ರದೇಶದ ಒಳಗೆ ಸಿಗದ ಹಿನ್ನೆಲೆಯಲ್ಲಿ, ಹಾವೇರಿ ಸೇರಿದಂತೆ ಈ ಹಿಂದೆ ನಡೆದ ಸಮ್ಮೆಳನದ ಸ್ಥಳವನ್ನ ಪರಿಶೀಲನೆ ಮಾಡಿ, ಸಮ್ಮೇಳನ ಮಾಡಲು 50 ರಿಂದ 100 ಎಕರೆ ಪ್ರದೇಶ ಬೇಕಾಗುತ್ತದೆ ಎಂದು ವಿರೋಧದ ನಡುವೆ ಮಂಡ್ಯ ಹೊರಭಾಗದಲ್ಲಿ ಸಮ್ಮೇಳನ ನಡೆಸಲು ತೀರ್ಮಾನ ಮಾಡಲಾಗಿದೆ.
ಕನ್ನಡದ ಐಕ್ಯತೆಯನ್ನ ಬಿಂಬಿಸುವ ನುಡಿಜಾತ್ರೆಗೆ ಈಗಾಗಲೇ ಜಾಗ ನಿಗದಿ ಮಾಡಲಾಗಿದೆ. ಅಲ್ಲದೆ ಈಗಿನಿಂದಲೇ ಅರ್ಥಪೂರ್ಣವಾಗಿ ಆಚರಣೆ ಮಾಡಲು ತಯಾರಿ ಕೂಡ ಪ್ರಾರಂಭವಾಗಿದೆ.
