ಮಂಗಳೂರು:
ಸೌಜನ್ಯಾ ಹೆಸರಿನಲ್ಲಿ ಹೆಲ್ಪ್ಲೈನ್ ತೆರೆದು ಲಕ್ಷ ಲಕ್ಷ ರೂಪಾಯಿ ವಂಚನೆ ಮಾಡಿದ ಆರೋಪದಲ್ಲಿ ಬೆಂಗಳೂರಿನ ಸಂಧ್ಯಾ ಪವಿತ್ರ ನಾಗರಾಜ್ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳ್ತಂಗಡಿ ತಾಲೂಕಿನ ಮಡಂತ್ಯಾರ್ನ ಮಾಲಾಡಿ ನಿವಾಸಿ ಕೆ.ರಾಜೇಶ್ ಎಂಬುವವರು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಾಗಿದೆ.
ದೂರುದಾರ ರಾಜೇಶ್ ಗಾಯಕರಾಗಿದ್ದು, ಫೇಸ್ಬುಕ್ ಪೇಜ್ನಲ್ಲಿ ಲೈವ್ ಸಂಗೀತ ಕಾರ್ಯಕ್ರಮ ನೀಡುತ್ತಿದ್ದರು. ರಾಜೇಶ್ ಅವರಿಗೆ ಸಂಧ್ಯಾ 2024ರಲ್ಲಿ ಫೇಸ್ಬುಕ್ ಮೂಲಕ ಪರಿಚಯವಾಗಿದ್ದಾಳೆ. ಸೌಜನ್ಯಾ ಹೆಲ್ಪ್ಲೈನ್ ಹೆಸರಿನಲ್ಲಿ ವಂಚನೆಗೊಳಗಾದವರಿಗೆ ನೆರವು ನೆರವಾಗುತ್ತಿದ್ದೇನೆ. ಅಮಾಯಕರ ಮೇಲೆ ದಾಖಲಾಗಿದ್ದ ಪ್ರಕರಣಗಳನ್ನು ಬಗೆಹರಿಸಿದ್ದೇನೆ ಅಂತ ರಾಜೇಶ್ ಅವರಿಗೆ ನಂಬಿಸಿದ್ದಾಳೆ.ಆಗ, ರಾಜೇಶ್ ಅವರು ಬಂಟ್ವಾಳ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ಬಗ್ಗೆ ತಿಳಿಸಿದ್ದಾರೆ.
ಹೈಕೋರ್ಟ್ನಲ್ಲಿ ಕೇಸ್ ಬಗೆಹರಿಸುತ್ತೇನೆ ಎಂದು ಹೇಳಿದ್ದ ಮಹಿಳೆ, ಬೆಂಗಳೂರಿನ ಜೆಪಿ ನಗರದ ನಿವಾಸಕ್ಕೆ ಕರೆಸಿ, ದಾಖಲೆಗಳನ್ನು ಪಡೆದಿದ್ದಳು. ಬಳಿಕ ಪ್ರಕರಣ ಬಗೆಹರಿಸಲು ಸ್ವಲ್ಪ ಖರ್ಚು ಇದೆ ಎಂದು, ರಾಜೇಶ್ ಅವರಿಂದ ಹಂತ ಹಂತವಾಗಿ 3.20 ಲಕ್ಷ ರೂ. ಪಡೆದಿದ್ದಾಳೆ. ಹಣ ನೀಡಿದ ನಂತರವೂ ಸಮಸ್ಯೆ ಬಗೆಹರಿಯದ ಕಾರಣ ರಾಜೇಶ್ ಅವರು ಸಂಧ್ಯಾಗೆ ಪ್ರಶ್ನಸಿದ್ದಾರೆ.
ಸಂಧ್ಯಾ ಇನ್ನೂ ಹೆಚ್ಚಿನ ಹಣ ನೀಡುವಂತೆ ಹೇಳಿದ್ದಾಳೆ. ಸಂಧ್ಯಾ ಮಾತು ಕೇಳಿ ಸಂಶಯಗೊಂಡ ರಾಜೇಶ್ ಅವರು ಕೋರ್ಟ್ಗೆ ಸಲ್ಲಿಸಿರುವ ದಾಖಲೆಗಳ ಬಗ್ಗೆ ಕೇಳಿದ್ದಾರೆ. ಈ ವೇಳೆ ಮನೆಗೆ ಹೆಂಗಸರನ್ನು ಕರೆದುಕೊಂಡು ಬಂದು ಕೈಕಾಲು ಮುರಿಸುವುದಾಗಿ ಸಂಧ್ಯಾ ಬೆದರಿಕೆ ಹಾಕಿದ್ದಾಳೆ. ಬಳಿಕ ರಾಜೇಶ್ ಈ ಬಗ್ಗೆ ಪುಂಜಾಲಕಟ್ಟೆ ಠಾಣೆಯಲ್ಲಿ ದೂರು ದಾಖಸಿದ್ದಾರೆ. ಬಿಎನ್ಎಸ್ ಕಾಯ್ದೆ 318(4) ಮತ್ತು 351(2) ಸೆಕ್ಷನ್ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.








