ಹುಬ್ಬಳ್ಳಿ
ಚುನಾವಣಾ ಕಾರ್ಯದಲ್ಲಿರುವ ರಾಜಕೀಯ ಪಕ್ಷಗಳು ಪರಸ್ಪರ ಆರೋಪ ಪ್ರತ್ಯಾರೋಪ, ತಿರುಗೇಟು ಕೊಡುವುದು ಸಾಮಾನ್ಯ. ಆದರೆ ಹುಬ್ಬಳ್ಳಿಯ ಕಾರ್ಯಕ್ರಮವೊಂದಲ್ಲಿ ದೇಶ ವಿಭಜನೆಯ ಇತಿಹಾಸ ನೆನಪಿಸಿ, ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕ ಸಂತೋಷ್ ಲಾಡ್ ವಾಗ್ದಾಳಿ ನಡೆಸಿದ್ದು ಕಂಡು ಬಂತು.
ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ದೇಶ ವಿಭಜನೆ ಆದಾಗ ಮುಸ್ಲಿಮರು ಭಾರತ ಬಿಟ್ಟು ಹೋಗದಿದ್ದರೆ, ಈ ದೇಶದಲ್ಲಿ ಹಿಂದೂ ಬಾವುಟ ಹಾರುತ್ತಿರಲಿಲ್ಲ ಎಂದು ಅವರು ಹೇಳಿಕೆ ನೀಡಿದ್ದಾರೆ.
ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಮತ್ತು ಬಸವಣ್ಣ ಜಯಂತಿ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು. ಭಾರತದ ವಿಭಜನೆ ಸಂದರ್ಭದಲ್ಲಿ ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಲಿ, ದೇಶ ಒಡೆಯಲು ನೆಹರೂ ಕಾರಣ ಎಂದು ಬಿಜೆಪಿಗರು ಪದೇಪದೆ ಹೇಳುತ್ತಾರೆ.
ಅಲ್ಲದೇ ಆಗಾಗ ಮಹಾತ್ಮ ಗಾಂಧೀಜಿ ಅವರನ್ನು ಸಹ ಬೈಯ್ಯುತ್ತಿರುತ್ತಾರೆ. ಸ್ವಾತಂತ್ರ ಸಿಕ್ಕ ಸಂದರ್ಭದಲ್ಲಿ ದೇಶ ವಿಭಜನೆಯಾದಾಗ ಪಾಕಿಸ್ತಾನ ಮುಸ್ಲಿಂ ರಾಷ್ಟ್ರವಾಗಿ ಗುರುತಿಸಿಕೊಂಡಿತು. ಆಗ ಭಾರತದಲ್ಲಿದ್ದ ಮುಸಲ್ಮಾನರು ಅಲ್ಲಿಗೆ ತೆರಳಿದರು. ಅಲ್ಲಿಗೆ ಅವರು ಹೋದರೆ ನಿಮಗೇನು ತೊಂದರೆ’ ಎಂದು ಸಂತೋಷ್ ಲಾಡ್ ಬಿಜೆಪಿಗೆ ಪ್ರಶ್ನಿಸಿದರು.
ಚುನಾವಣೆಗಳು ಎದುರಾದ ಸಂದರ್ಭದಲ್ಲಿ ಮುಸ್ಲಿಮರ ಬಗ್ಗೆ, ಶ್ರೀರಾಮನ ಬಗ್ಗೆ ಮಾತನಾಡಿ ಮತ ಯಾಚಿಸಬೇಡಿ. ಮಾಡಿರುವ ಅಭಿವೃದ್ಧಿ ಕಾರ್ಯಗಳೇನು? ಎಂಬುದನ್ನು ದೇಶದ ಮತದಾರರ ಮುಂದೆ ಇಟ್ಟು ಮತಯಾಚಿರಬೇಕು ಎಂದರು.
ಇನ್ನೂ ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ವೀಸ್ ಬ್ಯಾಂಕ್ನಲ್ಲಿ ಇಟ್ಟಿದ್ದ ಹಣ ತರುತ್ತೇವೆ. ಬಡವರ ಖಾತೆಗೆ ರೂಪಾಯಿ 15 ಲಕ್ಷ ಜಮಾ ಮಾಡುತ್ತೇವೆ. ದೇಶದಲ್ಲಿ ನಿರುದ್ಯೋಗ ಹೋಗಲಾಡಿಸಲು ಉದ್ಯೋಗ ಸೃಷ್ಟಿಸುತ್ತೇವೆ ಎಂದೆಲ್ಲ ಬಿಜೆಪಿಯವರು ಆಶ್ವಾಸನೇ ನೀಡಿದ್ದೀರಿ. ಅವೆಲ್ಲವು ಏನಾಯಿತು?. ಪ್ರಧಾನಿ ನರೇಂದ್ರ ಮೋದಿಯವರೇ ಇನ್ನು ಮುಂದಾದರೂ ಸುಳ್ಳು ಹೇಳುವುದನ್ನು ಬಿಡಿ’ ಎಂದು ಅವರು ಒತ್ತಾಯಿಸಿದರು.
ನಗರದಲ್ಲಿ ನಡೆದ ವಿಶ್ವ ಮಾನವರ ದಿನಾಚರಣೆಯಲ್ಲಿ ಮಾತನಾಡಿದ ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯಾ ಅವರು, ಸಂವಿಧಾನ ಮುಟ್ಟಿದರೆ ನೀವು ಸುಟ್ಟು ಭಸ್ಮ ಆಗುತ್ತೀರಿ ಎಂದು ಬಿಜೆಪಿಗೆ ಎಚ್ಚರಿಕೆ ನೀಡಿದರು.
ಕೆಲವೊಬ್ಬರು ಬರೀ ಸಂವಿಧಾನ ಬದಲಾಯಿಸುವ ಕುರಿತು ಮಾತಾಡುತ್ತಿದ್ದಾರೆ. ಆದರೆ, ಸಂವಿಧಾನ ಬದಲಾವಣೆ ಸಾಧ್ಯವೇ ಇಲ್ಲ. ಒಂದು ವೇಳೆ ಸಂವಿಧಾನ ಬದಲಾವಣೆಗೆ ಕೈಹಾಕಿದರೆ ಸುಟ್ಟು ಭಸ್ಮ ಆಗುತ್ತಾರೆ ಎಂದು ಅವರು ಪುನರುಚ್ಚರಿಸಿದರು.
ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರು ಶೋಷಿತ ಜನಾಂಗಕ್ಕೆ ಜೀವನ ಮುಡುಪಾಗಿಟ್ಟಿದ್ದರು. ಸಂವಿಧಾನ ಬದಲಾಯಿಸ್ತೇವೆ ಎನ್ನುವ ಭೂಪರಿಗೆ ತಕ್ಕ ಉತ್ತರ ಕೊಡಬೇಕು. ಸಂವಿಧಾನ ವಿರೋಧಿ ಹೇಳಿಕೆ ಕೊಡುವವರನ್ನು ಸಂತೋಷ್ ಲಾಡ್ ನಾಶ ಮಾಡುತ್ತಾರೆ ಎಂದರು.
ಕಾರ್ಮಿಕ ಸಚಿವ ಸಂತೋಷ್ ಲಾಡ್ ಗುಡುಗು ಮಿಂಚಿನ ರೀತಿಯಲ್ಲಿ ಓಡಾಡುತ್ತಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್, ವಾಲ್ಮೀಕಿ ಫೋಟೋ ಹೊರಗೆ ಹಾಕಲಾಗಿದೆ. ಬಿಜೆಪಿ ಮತ್ತು ಆರ್ಎಸ್ಎಸ್ ಮನಸ್ಥಿತಿ ಏನು ಎಂದು ಇದರಿಂದಲೇ ಗೊತ್ತಾಗುತ್ತದೆ. ಸಂವಿಧಾನ ಉಳಿಯಬೇಕಾದ್ರೆ ವಿನೋದ್ ಅಸೂಟಿಯಂಥವರು ಗೆಲ್ಲಬೇಕು ಎಂದು ಅವರು ಮತದಾರರಲ್ಲಿ ಮನವಿ ಮಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ
