ಹುಬ್ಬಳ್ಳಿ:
ಐಪಿಎಲ್ ಬೆಟ್ಟಿಂಗ್ ಕಂಪನಿ, ಫ್ರಾಡ್ ಮಾಡುವ ಕಂಪನಿ ಹಾಗೂ ಗೋ ಮಾಂಸ ಸಾಗಣೆ ಮಾಡುವ ಕಂಪನಿಗಳ ಚಂದಾ ಹಣದಿಂದ ಬಿಜೆಪಿ ತನ್ನ ಪಕ್ಷ ಕಟ್ಟಿದೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.ಕುಂದಗೋಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಪೂರ್ವದಲ್ಲಿ ಇಲೆಕ್ಟ್ರೊ ಬಾಂಡ್ ಪ್ರಕರಣದ ಹಣ ಹಾಗೂ ಪ್ರಧಾನಮಂತ್ರಿ ಕೇರ್ ಹಣ ಎಲ್ಲಿ ಹೋಗಿದೆ ಎಂಬುದರ ಬಗ್ಗೆ ಮಾಧ್ಯಮಗಳಲ್ಲಿ ಚರ್ಚೆಗಳಾಗಲಿ ಎಂದರು.
ಬಳ್ಳಾರಿಯಲ್ಲಿ ಇಡಿ ದಾಳಿಯಾಗಿದ್ದು, ತನಿಖೆಯಾಗಲಿದೆ. ಅದನ್ನು ನಾನು ಟೀಕೆ ಮಾಡುವುದಿಲ್ಲ. ಆದರೆ, ಶೇ. ೯೯ರಷ್ಟು ಇಡಿ ದಾಳಿಯಾಗಿರುವುದು ಬಿಜೆಪಿ ಆಡಳಿತ ಇಲ್ಲದ ರಾಜ್ಯಗಳಲ್ಲಿ ಹಾಗೂ ವಿರೋಧ ಪಕ್ಷಗಳ ನಾಯಕರ ಮೇಲೆ ಆಗಿದೆ. ಇನ್ನೂ ವಾಲ್ಮೀಕಿ ಹಗರಣದ ಹಣವನ್ನು ಚುನಾವಣೆಗೆ ಬಳಕೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಇದರ ಬಗ್ಗೆ ತನಿಖೆಯಾಗುತ್ತದೆ. ಕಳೆದ ಹನ್ನೊಂದು ವರ್ಷಗಳಲ್ಲಿ ಸುಮಾರು ನಾಲ್ಕು ಸಾವಿರ ಇಡಿ ದಾಳಿ ಪ್ರಕರಣಗಳಾಗಿವೆ. ಅವುಗಳಲ್ಲಿ ಜಾಸ್ತಿ ಆಗಿರುವುದೇ ಬಿಜೆಪಿಯೇತರ ಆಡಳಿತ ಇರುವ ರಾಜ್ಯಗಳಲ್ಲಿ ಎಂದು ಹೇಳಿದರು.
ಅಹಮದಾಬಾದ್ ವಿಮಾನ ಪತನದಲ್ಲಿ ಸಾಕಷ್ಟು ಜನ ಸಾವನ್ನಪ್ಪಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ವಿಮಾನ ಪತನಕ್ಕೆ ಕಾರಣ ಏನು ಎಂಬುದು ನನಗೆ ಗೊತ್ತಿಲ್ಲ. ಪ್ರಾಥಮಿಕ ವರದಿ ಪ್ರಕಾರ ವಿಮಾನದ ಎರಡು ಇಂಜಿನ್ಗಳು ವೈಫಲ್ಯವಾಗಿದ್ದು ಎಂಬುದು ತಿಳಿದಿದೆ ಎಂದರು.
