ಬೆಳಗಾವಿ:
ಈ ನಡುವೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ರಾಜಕೀಯ ಕಿತ್ತಾಟಕ್ಕೆ ಸಂತೋಷ್ ಬಲಿಯಾದರೇ ಎಂಬ ವಿಚಾರವೂ ಚರ್ಚೆಯಾಗುತ್ತಿದೆ. ಸಂತೋಷ ಪಾಟೀಲ್ನಿಂದ ಉಪಗುತ್ತಿಗೆ ಪಡೆದ ಗುತ್ತಿಗೆದಾರರು ರಮೇಶ್ ಜಾರಕಿಹೊಳಿ ಭೇಟಿಯಾದ ಅಂಶವನ್ನೂ ಕೆಲವರು ಪ್ರಸ್ತಾಪಿಸುತ್ತಿದ್ದಾರೆ.
ಹಿಂಡಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಮನ್ನೋಳಕರ್ ನೇತೃತ್ವದಲ್ಲಿ ಈಚೆಗೆ ಉಪಗುತ್ತಿಗೆದಾರರು ರಮೇಶ್ ಜಾರಕಿಹೊಳಿ ಅವರನ್ನು ಭೇಟಿಯಾಗಿದ್ದರು. ಉಡುಪಿ ಪೊಲೀಸರ ವಿಚಾರಣೆಗೆ ಹಾಜರಾಗದ ಇವರು ರಮೇಶ್ ಜಾರಕಿಹೊಳಿ ಅವರನ್ನು ಭೇಟಿಯಾಗಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿನಿಧಿಸುವ ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿಂಡಲಗಾ ಗ್ರಾಮದಲ್ಲಿ ಸಂತೋಷ್ ಪಾಟೀಲ ಹಲವು ಕಾಮಗಾರಿಗಳನ್ನು ಮಾಡಿಸಿದ್ದರು.
ಕಾಮಗಾರಿ ಮಂಜೂರಾತಿ ಪಡೆಯುವ ವೇಳೆ ರಮೇಶ್ ಜಾರಕಿಹೊಳಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಮನ್ನೋಳಕರ್ ಲೆಟರ್ ಹೆಡ್ ಮೂಲಕವೇ ಮೃತ ಸಂತೋಷ್ ಪಾಟೀಲ ಕಾಮಗಾರಿಯ ವಿವರಗಳನ್ನು ಈಶ್ವರಪ್ಪ ಅವರಿಗೆ ಒದಗಿಸಿ, ಅನುದಾನ ಬಿಡುಗಡೆಗೆ ಮನವಿ ಮಾಡಿದ್ದರು. ಆಗ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಈಶ್ವರಪ್ಪ ಮೌಖಿಕ ಸೂಚನೆ ಮೇರೆಗೆ ₹ 4.12 ಕೋಟಿ ವೆಚ್ಚದಲ್ಲಿ 108 ಕಾಮಗಾರಿ ಮಾಡಿಸಿದ್ದೇನೆ ಎಂದು ಸಂತೋಷ ಪಾಟೀಲ್ ಹೇಳಿದ್ದರು.
ಕಾಮಗಾರಿ ನಿರ್ವಹಿಸಲು 12 ಉಪಗುತ್ತಿಗೆದಾರರಿಗೆ ಕೆಲಸ ಹಂಚಿದ್ದರು. ಸಂತೋಷ ಪಾಟೀಲ್ ಮತ್ತು ಗ್ರಾಪಂ ಅಧ್ಯಕ್ಷ ನಾಗೇಶ್ ಮನ್ನೋಳಕರ್ ಹೇಳಿದ್ದಕ್ಕೆ ಕೆಲಸ ಮಾಡಿದೆವು ಎಂದು ಇಂದಿಗೂ ಉಪಗುತ್ತಿಗೆದಾರರು ಹೇಳುತ್ತಿದ್ದಾರೆ. ಸ್ಥಳೀಯ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಗಮನಕ್ಕೂ ತಾರದೆ ಹಿಂಡಲಗಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಾಮಗಾರಿ ನಡೆದಿದೆ. ಕಾಮಗಾರಿ ಬಳಿಕ ಬಿಲ್ ಮಂಜೂರಾತಿಯಲ್ಲಿ ರಾಜಕೀಯ ನಡೆದಿರುವ ಶಂಕೆ ವ್ಯಕ್ತವಾಗುತ್ತಿದೆ.
ಸಂತೋಷ್ ಮನೆಗೆ ಡಿಕೆಶಿ ಭೇಟಿ
ಇತ್ತೀಚೆಗೆ ಅತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಂತೋಷ ಪಾಟೀಲ್ ಮನೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದು ಭೇಟಿ ನೀಡಲಿದ್ದಾರೆ. ಮುಂಬೈನಿಂದ ಮಧ್ಯಾಹ್ನ 2.25ಕ್ಕೆ ಬೆಳಗಾವಿ ಸಾಂಬ್ರಾ ನಿಲ್ದಾಣಕ್ಕೆ ಆಗಮಿಸಲಿರುವ ಡಿಕೆಶಿ, ಬೆಳಗಾವಿ ತಾಲೂಕಿನ ಬಡಸ ಗ್ರಾಮದಲ್ಲಿರುವ ಸಂತೋಷ ಅವರ ನಿವಾಸಕ್ಕೆ ತೆರಳಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಲಿದ್ದಾರೆ. ಇದೇ ವೇಳೆ ಕೆಪಿಸಿಸಿ ವತಿಯಿಂದ ಸಂತೋಷ ಕುಟುಂಬಸ್ಥರಿಗೆ ₹ 11 ಲಕ್ಷದ ಪರಿಹಾರ ಚೆಕ್ ವಿತರಿಸಲಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2022/04/Capture-197.jpg)