ಬೆಳಗಾವಿ
ಯಾವಾಗಲು ಪೊಳ್ಳು ಶಾಸ್ತ್ರ ಮತ್ತು ಮೌಡ್ಯದ ವಿರೋಧಿಯಾಗಿರುವ ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ಅವರು ಶೀಘ್ರವೇ ಕರ್ನಾಟಕ ವಿಧಾನಸಭೆ ಚುನಾವಣೆಗೆ ಪ್ರಚಾರವನ್ನು ಆರಂಭಿಸಲಿದ್ದಾರೆ. ಅವರು ಬೆಳಗಾವಿ ಜಿಲ್ಲೆಯ ಯಮಕನಮರಡಿ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದಾರೆ. ಮಾಢ್ಯಾಚರಣೆಗಳ ಕಡು ವಿರೋಧಿ ಆಗಿರುವ ಸತೀಶ್ ಜಾರಕಿಹೊಳಿ ಅವರು ಚುನಾವಣೆ ಪ್ರಚಾರಕ್ಕೆ ವಿನೂತನವಾಗಿ ಚಾಲನೆ ನೀಡಲಿದ್ದಾರೆ.
ಚುನಾವಣೆ ಪ್ರಚಾರಕ್ಕಾಗಿ ಎರಡು ವಾಹನಗಳನ್ನು ಖರೀದಿಸಿರುವ ಅವರು, ವಾಹನಗಳಿಗೆ ಸ್ಮಶಾನದಲ್ಲಿ ಪೂಜೆ ಸಲ್ಲಿಸಿ ಶೀಘ್ರವೇ ಚುನಾವಣಾ ಪ್ರಚಾರ ಆರಂಭಿಸುವುದಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಭಾನುವಾರ ಹೇಳಿದ್ದಾರೆ.ಅಶುಭ ರಾಹುಕಾಲದಲ್ಲಿ ನಾಮಪತ್ರ ಸಲ್ಲಿಸುತ್ತೀರಾ ಎಂಬ ಪ್ರಶ್ನೆಗೆ ಅವರು ಈ ರೀತಿ ಪ್ರತಿಕ್ರಿಯಿದ್ದಾರೆ.
‘ಪ್ರತಿದಿನ ರಾಹುಕಾಲವಿದೆ. ಏಪ್ರಿಲ್ 13 ರಿಂದ 20 ರ ನಡುವೆ ರಾಹುಕಾಲ ಇದ್ದರೆ, ನಾನು ಖಂಡಿತವಾಗಿಯೂ ನನ್ನ ನಾಮಪತ್ರವನ್ನು ಆವಾಗಲೇ ಸಲ್ಲಿಸುತ್ತೇನೆ’ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
‘ರಾಹುಕಾಲ ಅನ್ನೋದು ಕೇವಲ ಭ್ರಮೆ. ಒಂದು ವರ್ಗದ ಜನರು ನನ್ನನ್ನು ಹಿಂದೂ ವಿರೋಧಿ ಎಂದು ಆರೋಪಿಸುತ್ತಾರೆ. ಇದು ತಪ್ಪು ಎಂದು ಯಾರೂ ಹೇಳುತ್ತಿಲ್ಲ. ರಾಹುಕಾಲದಲ್ಲಿ ಹೊಸ ಪಯಣ ಆರಂಭಿಸುತ್ತೇನೆ. ಸ್ಮಶಾನಕ್ಕೆ ಪೂಜೆ ಸಲ್ಲಿಸುತ್ತಿದ್ದೇನೆ. ಕಳೆದ ಮೂರು ದಶಕಗಳಿಂದ ನಾನು ಅದನ್ನು ಮಾಡುತ್ತಿದ್ದೇನೆ. ಬಸವಣ್ಣ, ಬುದ್ಧ ಮತ್ತು ಅಂಬೇಡ್ಕರ್ ಈ ಮಾರ್ಗವನ್ನು ತೋರಿಸಿದ್ದಾರೆ’ ಎಂದು ಯಮಕನಮರಡಿ ಶಾಸಕ ತಿಳಿಸಿದ್ದಾರೆ.
ಬೆಳಗಾವಿ ಜಿಲ್ಲೆಯ 12 ವಿಧಾನಸಭಾ ಕ್ಷೇತ್ರಗಳ ಪೈಕಿ 10 ಕ್ಷೇತ್ರಗಳನ್ನು ಕಾಂಗ್ರೆಸ್ ಗೆಲ್ಲಲಿದೆ ಎಂದೂ ಸತೀಶ್ ಜಾರಕಿಹೊಳಿ ಭರವಸೆ ವ್ಯಕ್ತಪಡಿಸಿದ್ದಾರೆ. ರಾಜ್ಯದ ಹಲವು ಕ್ಷೇತ್ರಗಳಲ್ಲಿ ಎಸ್ಸಿ / ಎಸ್ಟಿ ಮತದಾರರು ನಿರ್ಣಾಯಕ ಪಾತ್ರ ವಹಿಸುತ್ತಿದ್ದು, ಸಂಪೂರ್ಣ ಹುರುಪಿನಿಂದ ಸಕ್ರಿಯವಾಗಿ ಚುನಾವಣೆ ಎದುರಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಚುನಾವಣಾ ಪೂರ್ವ ಸಿದ್ಧತಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಸತೀಶ್ ಜಾರಕಿಹೊಳಿ, ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಿಸಲು ಎಲ್ಲರೂ ಸಹಕರಿಸಬೇಕು. ಈ ಚುನಾವಣೆಯು ಮೇ 10 ರಂದು ನಡೆಯಲಿದೆ. ಎಸ್ಟಿ ಸಮುದಾಯಕ್ಕೆ ಸಾಮಾಜಿಕ ಭದ್ರತೆಯನ್ನು ಖಾತ್ರಿಪಡಿಸುವುದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದು ಅವರು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
