ಬೆಂಗಳೂರು :
ಹಾಸನ ಜೆಡಿಎಸ್ ಟಿಕೆಟ್ ಕಗ್ಗಂಟು ಆಗಿರುವಂತೆಯೇ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕುರಿತು ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಭಾನುವಾರ ವ್ಯಂಗ್ಯವಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಕುಟುಂಬದ ಎಲ್ಲ ಸದಸ್ಯರಿಗೂ ಟಿಕೆಟ್ ಕೊಟ್ಟರೂ ಅವರಲ್ಲಿ ಬಡಿದಾಟ ಸಾಮಾನ್ಯ. ಮೊದಲು ಕುಟುಂಬ ಸರಿ ಮಾಡಿಕೊಳ್ಳಲಿ. ಆಮೇಲೆ ರಾಜ್ಯ ಆಳಲು ಬರಲಿ ಎಂದರು.
ಕುಮಾರಸ್ವಾಮಿ ಅವರು ಮೊದಲು ಮನೆಯನ್ನು ನಿರ್ವಹಿಸಲಿ. ಕುಟುಂಬದ 10-12 ಮಂದಿ ಚುನಾವಣೆಯಲ್ಲಿ ನಿಂತರೂ ಅವರಿಗೆ ಸಮಾಧಾನವಿಲ್ಲ. ಹಾಗಿದ್ದ ಮೇಲೂ ಪರಸ್ಪರ ಬಡಿದಾಡುತ್ತಾರೆ. ಕುಟುಂಬವನ್ನೇ ನಿರ್ವಹಿಸಲಾಗದವರು ರಾಜ್ಯವನ್ನು ಹೇಗೆ ನಿಭಾಯಿಸುತ್ತಾರೆ ಎಂದು ಪ್ರಶ್ನಿಸಿದರು.
ತೃತೀಯ ರಂಗ ರಚನೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಒಂಭತ್ತು ವರ್ಷಗಳಿಂದ ತೃತೀಯ ಶಕ್ತಿ ಒಂದಾಗಿಸುವ ಪ್ರಯತ್ನ ನಡೆಯುತ್ತಿದೆ. ಅವರಲ್ಲಿ ಒಗ್ಗಟ್ಟು ಮತ್ತು ಸ್ಪಷ್ಟ ಉದ್ದೇಶವಿಲ್ಲದ್ದರಿಂದ ಸಾಧ್ಯವಾಗುತ್ತಿಲ್ಲ. ಈ ಸರ್ಕಸ್ಸಿನಲ್ಲಿ ಭಾಗಿಯಾಗಿರುವ ಎಲ್ಲಾ ವಿಪಕ್ಷಗಳ ನಾಯಕರಿಗೆ ‘ನಾನು ಏನಾದರೂ ಮಾಡಿ ಪ್ರಧಾನ ಮಂತ್ರಿ ಆಗಬೇಕು’ ಎಂದ ಸ್ವಾರ್ಥವಿದೆ. ಅದೇ ಉದ್ದೇಶಕ್ಕಾಗಿ ಇವರ ನಡುವೆ ಬಡಿದಾಟ ನಡೆದಿದೆ. ಅದಕ್ಕೇ ತೃತೀಯ ಶಕ್ತಿ ಸಾಧ್ಯವಾಗುತ್ತಿಲ್ಲ. ಹಾಗಾಗಿಯೇ, ತೃತೀಯ ಅಂದರೆ ಥರ್ಡ್ಕ್ಲಾಸ್ ಫ್ರಂಟ್ ಆಗಲಿದೆ ಎಂದು ಜೋಶಿ ವ್ಯಂಗ್ಯವಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








