ಹಾಸನ:
ಹಾಸನದ ಕೆಲವು ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಒಟ್ಟು 3 ಶಾಲೆಗಳಲ್ಲಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಸಂದೇಶವುಳ್ಳ ಇ-ಮೇಲ್ ಬಂದಿದೆ. ಹಾಸನದ ವಿಜಯನಗರ ಇಂಡಸ್ಟ್ರಿಯಲ್ ಏರಿಯಾ, ಕೆಆರ್ ಪುರಂದಲ್ಲಿರುವ ವಿದ್ಯಾಸೌಧ ಪಬ್ಲಿಕ್ ಶಾಲೆ, ವಿದ್ಯಾಸೌಧ ಕಿಡ್ಸ್ ಶಾಲೆಗೆ ಇ-ಮೇಲ್ ಬಂದಿದೆ. 1 ಗಂಟೆಗೆ ಕಟ್ಟಡ ಸ್ಫೋಟಿಸುವುದಾಗಿ ದುಷ್ಕರ್ಮಿ ಸಂದೇಶ ಕಳುಹಿಸಿದ್ದಾನೆ. ಈ ಬಗ್ಗೆ ಹಾಸನ ನಗರ, ಗ್ರಾಮಾಂತರ ಠಾಣೆಗೆ ಪ್ರಾಂಶುಪಾಲರು ರಾತ್ರಿಯೇ ದೂರು ನೀಡಿದ್ದರು. ತಡರಾತ್ರಿಯೇ ಸ್ಥಳಕ್ಕೆ ಧಾವಿಸಿರುವ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ವಿದ್ಯಾಸೌಧ ಶಾಲೆ ಹಾಗೂ ಕಿಡ್ಸ್ ಶಾಲೆ ಮಂಜೇಗೌಡ ಎಂಬವರಿಗೆ ಸೇರಿದ್ದಾಗಿದೆ. ಭಾನುವಾರ ರಾತ್ರಿ 10.16 ಕ್ಕೆ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಈ ವಿಷಯವು ಗಂಭೀರ ಕಳವಳಕಾರಿಯಾಗಿರುವುದರಿಂದ, ಈ ಬಗ್ಗೆ ತನಿಖೆ ನಡೆಸಲು ಮತ್ತು ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ದಯವಿಟ್ಟು ತಕ್ಷಣ ಕ್ರಮ ಕೈಗೊಳ್ಳುವಂತೆ ನಾವು ವಿನಂತಿಸುತ್ತೇವೆ. ದಯವಿಟ್ಟು ಭದ್ರತೆಗಾಗಿ ಅಗತ್ಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಮತ್ತು ಸಂಪೂರ್ಣ ತಪಾಸಣೆ ನಡೆಸಿ, ಯಾವುದೇ ಅಹಿತಕರ ಘಟನೆಯನ್ನು ತಡೆಗಟ್ಟಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ಶಾಲೆಯ ಆಡಳಿತ ಮಂಡಳಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಹೆಚ್ಚಿನ ಮಾಹಿತಿಯನ್ನು ಒದಗಿಸಲು ಮತ್ತು ತನಿಖೆಯಲ್ಲಿ ನಿಮ್ಮ ಅಧಿಕಾರಿಗಳೊಂದಿಗೆ ಸಹಕರಿಸಲು ನಾವು ಸಿದ್ಧರಿದ್ದೇವೆ. ದಯವಿಟ್ಟು ಈ ವಿಷಯವನ್ನು ಅತ್ಯಂತ ತುರ್ತು ಮತ್ತು ಗಂಭೀರವಾಗಿ ಪರಿಗಣಿಸಿ. ನಿಮ್ಮ ತ್ವರಿತ ಪ್ರತಿಕ್ರಿಯೆ ಮತ್ತು ಅಗತ್ಯ ಕ್ರಮಕ್ಕಾಗಿ ಎದುರು ನೋಡುತ್ತಿದ್ದೇನೆ ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ. ಇದರ ಬೆನ್ನಲ್ಲೇ ಶಾಲೆಗೆ ಪೊಲೀಸರು ಧಾವಿಸಿದ್ದಾರೆ. ಬಾಂಬ್ ಪತ್ತೆ ದಳವೂ ಕಾರ್ಯಾಚರಣೆ ನಡೆಸಿದೆ. ಆದರೆ, ಸ್ಫೋಟಕಗಳು ಪತ್ತೆಯಾದ ಬಗ್ಗೆ ಈವರೆಗೆ ಪೊಲೀಸರು ದೃಢಪಡಿಸಿಲ್ಲ.
ತಿಂಗಳ ಹಿಂದಷ್ಟೇ ಬೆಂಗಳೂರಿನ ಸೋಲದೇವನಹಳ್ಳಿಯಲ್ಲಿರುವ ಪ್ರತಿಷ್ಠಿತ ಆಚಾರ್ಯ ಕಾಲೇಜಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು. ಜತೆಗೆ, ಪ್ರಾಂಶುಪಾಲರಿಗೆ ಕೊಲೆ ಬೆದರಿಕೆಯನ್ನೂ ಹಾಕಲಾಗಿತ್ತು. ಅದಕ್ಕೂ 2 ದಿನಗಳ ಮೊದಲು, ಅಂದರೆ ಏಪ್ರಿಲ್ 27 ರಂದು ಬೆಂಗಳೂರು ವಾರಾಣಸಿ ಇಂಡಿಗೋ ವಿಮಾನದಲ್ಲಿ ಬಾಂಬ್ ಇದೆ ಎಂಬ ಹುಸಿ ಬೆದರಿಕೆ ಸಂದೇಶ ಬಂದಿತ್ತು.
