ಕೊರಟಗೆರೆ :
ಚಿರತೆ ದಾಳಿಯಿಂದ 17 ಕುರಿಗಳನ್ನು ಕಳೆದುಕೊಂಡು ಲಕ್ಷಾಂತರ ರೂ. ನಷ್ಟದಲ್ಲಿದ್ದ ರೈತ ರಾಮಕೃಷ್ಣಯ್ಯನಿಗೆ ಕೊರಟಗೆರೆ ಸಮಾಜ ಸೇವಕ ಎಂಎನ್ಜೆ ಮಂಜುನಾಥ 25 ಸಾವಿರ ಮೌಲ್ಯದ 5 ಕುರಿಗಳನ್ನು ಖರೀದಿಸಿ ಹಸ್ತಾಂತರ ಮಾಡಿ ರೈತನ ಕುಟುಂಬಕ್ಕೆ ಧೈರ್ಯ ತುಂಬಿರುವ ಘಟನೆ ಭಾನುವಾರ ನಡೆದಿದೆ.
ಕೊರಟಗೆರೆ ತಾಲ್ಲೂಕು, ಕಸಬಾ ಹೋಬಳಿ, ವಡ್ಡಗೆರೆ ಗ್ರಾಪಂ ವ್ಯಾಪ್ತಿಯ ಗರಗದೊಡ್ಡಿ ಗ್ರಾಮದ ರೈತ ರಾಮಕೃಷ್ಣಯ್ಯ ಎಂಬಾತನ ತೋಟದ ದೊಡ್ಡಿಯಲ್ಲಿದ್ದ ಕುರಿ-ಮೇಕೆಗಳ ಮೇಲೆ ಚಿರತೆ ದಾಳಿ ನಡೆಸಿ, 17 ಕುರಿ-ಮೇಕೆ ಮೃತಪಟ್ಟಿದ್ದವು. ಈ ಹಿನ್ನೆಲೆಯಲ್ಲಿ ಶಾಸಕ ಡಾ.ಜಿ.ಪರಮೇಶ್ವರ ಸಲಹೆಯಂತೆ ರೈತನಿಗೆ ಆಸರೆ ಆಗಲು 5 ಕುರಿಗಳನ್ನು ವಿತರಿಸಿ, ಮಾನವೀಯತೆ ಮೆರೆದಿದ್ದಾರೆ.
ಕೊರಟಗೆರೆ ಸಮಾಜ ಸೇವಕ ಎಂಎನ್ಜೆ ಮಂಜುನಾಥ ಮಾತನಾಡಿ, ಚಿರತೆ ದಾಳಿಯಿಂದ ಗರಗದೊಡ್ಡಿ ರೈತ ರಾಮಕೃಷ್ಣಯ್ಯನಿಗೆ ಲಕ್ಷಾಂತರ ರೂ. ನಷ್ಟವಾಗಿದೆ. ಶಾಸಕ ಡಾ.ಜಿ.ಪರಮೇಶ್ವರರ ಸಲಹೆಯಂತೆ ರೈತನ ಕುಟುಂಬದ ಆಸರೆಗಾಗಿ ಸಣ್ಣ ಸಹಾಯ ಮಾಡಲಾಗಿದೆ. ಅರಣ್ಯ ಇಲಾಖೆ ತಕ್ಷಣ ಚಿರತೆಯನ್ನು ಸೆರೆ ಹಿಡಿದು ದೂರದ ಅರಣ್ಯಕ್ಕೆ ರವಾನಿಸಬೇಕಿದೆ. ಇಲ್ಲವಾದರೆ ಮತ್ತೆ ಚಿರತೆಯು ರೈತರ ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ ಎಂದು ಮನವಿ ಮಾಡಿದರು.
ಗರಗದೊಡ್ಡಿ ರೈತ ರಾಮಕೃಷ್ಣಯ್ಯ ಮಾತನಾಡಿ, ಚಿರತೆ ದಾಳಿಯ ವೇಳೆ ನಾಯಿ ನನಗೆ ರಕ್ಷಣೆ ನೀಡಿದೆ. ಚಿರತೆಯ ದಾಳಿಗೆ 17 ಕುರಿ-ಮೇಕೆ ಮೃತಪಟ್ಟಿವೆ. ಅರಣ್ಯ ಇಲಾಖೆ ತಕ್ಷಣ ಚಿರತೆಯನ್ನು ಸೆರೆ ಹಿಡಿದು, ರೈತರಿಗೆ ರಕ್ಷಣೆ ನೀಡಬೇಕಿದೆ. ಇಲ್ಲವಾದರೆ ರೈತರಿಗೆ ಮತ್ತೆ ಸಮಸ್ಯೆ ಎದುರಾಗಲಿದೆ. ಎಂಎನ್ಜೆ ಮಂಜುನಾಥ ನಮಗೆ ಸಹಾಯ ಹಸ್ತ ನೀಡಿದ್ದಾರೆ. ಅವರಿಗೆ ಧನ್ಯವಾದಗಳೆಂದರು.
ರೈತನ ಜಮೀನಿಗೆ ಭೇಟಿ ವೇಳೆ ವಡ್ಡಗೆರೆ ಗ್ರಾಪಂ ಅಧ್ಯಕ್ಷ ವಸಂತರಾಜು, ಗ್ರಾಪಂ ಸದಸ್ಯೆ ಸರೋಜಮ್ಮ, ಗುತ್ತಿಗೆದಾರ ವೆಂಕಟೇಶಪ್ಪ, ಮುಖಂಡರಾದ ಅಶ್ವತ್ಥಪ್ಪ, ರಾಜಣ್ಣ, ದೇವರಾಜು, ರಾಮಚಂದ್ರ, ವೀರೇಂದ್ರಪ್ರಸಾದ್, ಮಾವತ್ತೂರು ಕುಮಾರ್, ಭಾನುಪ್ರಕಾಶ್ ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ