ಉಡುಪಿ:
ಕುಂದಾಪುರ ತಾಲೂಕಿನ ಸಿದ್ದಾಪುರ, ಹೊಸಂಗಡಿ ಭಾಗದಲ್ಲಿ ಕಾಡಾನೆಯೊಂದು ಕಳೆದ ಎರಡು ದಿನಗಳಿಂದ ಸಂಚರಿಸುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ.ಸಿದ್ದಾಪುರ ಹೊಸಂಗಡಿ ಮತ್ತು ಕಮಲಶಿಲೆ ಗ್ರಾಮಗಳ ವ್ಯಾಪ್ತಿಯ ಎಲ್ಲಾ ಅಂಗನವಾಡಿ ಕೇಂದ್ರಗಳು ಮತ್ತು ಪೌಢಶಾಲೆಗಳಿಗೆ ಜೂನ್ 4ರಂದು ಬುಧವಾರ ರಜೆ ಘೋಷಿಸಲಾಗಿದೆ. ಬುಧವಾರ ನಡೆಯಬೇಕಾಗಿದ್ದ ವಾರದ ಸಿದ್ದಾಪುರ ಸಂತೆಯನ್ನು ಮುಂಜಾಗ್ರತಾ ಕ್ರಮವಾಗಿ ರದ್ದು ಮಾಡಲಾಗಿದೆ.
ಆಗುಂಬೆಯಿಂದ 30 ಕಿ.ಮೀ. ದೂರದಲ್ಲಿರುವ ಪ್ರದೇಶ ಇದಾಗಿದ್ದು, ಕಳೆದ 2 ದಿನಗಳಿಂದ ಆನೆ ಸಂಚರಿಸುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬಂದಿ ಬೀಡುಬಿಟ್ಟಿದ್ದಾರೆ. ಹೆಚ್ಚಿನ ಕಾರ್ಯಾಚರಣೆಗೆ ಕುಮ್ಕಿ ಆನೆಗಳನ್ನು ತರಿಸಿ ಸೆರೆಹಿಡಿಯಲು ತಯಾರಿ ನಡೆಸಲಾಗಿದೆ. ಕಂದಾಯ ಇಲಾಖೆ, ಕುಂದಾಪುರ ತಾಲೂಕು ಆಡಳಿತ ಕಾಡಾನೆ ವಿಚಾರದಲ್ಲಿ ಸಾರ್ವಜನಿಕರು ಭಯಭೀತರಾಗದೆ ಜಾಗರೂಕತೆಯಿಂದ ಓಡಾಡಬೇಕಾಗಿ ಸೂಚನೆ ನೀಡಿದೆ.
ಉಡುಪಿ– ಶಿವಮೊಗ್ಗ ಜಿಲ್ಲೆಯ ಗಡಿಭಾಗವಾದ ಬಾಳೆಬರೆ ಘಾಟಿ ರಸ್ತೆಯಲ್ಲಿ ಗಂಡು ಕಾಡಾನೆ ದಾರಿತಪ್ಪಿ ರಾಜ್ಯ ಹೆದ್ದಾರಿಯಲ್ಲಿ ನಡೆದು ಮಂಗಳವಾರ ಸಂಜೆ ಕುಂದಾಪುರ ತಾಲೂಕಿನ ಹೊಸಂಗಡಿ ಕಡೆಗೆ ಬಂದಿದೆ. ಹಾಸನ ಕಾಡಿನ ಆನೆ ಕಾರಿಡಾರ್ ನಲ್ಲಿ ಒಂಟಿಯಾಗಿ ಸಂಚರಿಸುತ್ತಿದ್ದ ಸುಮಾರು 12 ವರ್ಷ ಪ್ರಾಯದ ಗಂಡು ಕಾಡಾನೆ ದಾರಿ ತಪ್ಪಿ ವಾರದ ಹಿಂದೆ ಕೊಪ್ಪ ಮೂಲಕ ಶಿವಮೊಗ್ಗ ಜಿಲ್ಲೆಗೆ ಬಂದಿದೆ ಎಂದು ಹೇಳಲಾಗಿದೆ.
ಮಂಗಳವಾರ ಸಂಜೆ ವೇಳೆ ಒಂಟಿ ಆನೆಯೊಂದು ಮಾಸ್ತಿಕಟ್ಟೆ ಆಸುಪಾಸಿನಲ್ಲಿ ಓಡಾಡಿದ್ದು ಬಹುತೇಕ ಸಿದ್ದಾಪುರ ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ಸಂಚರಿಸುತ್ತಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಘಾಟಿ ಪ್ರದೇಶದಿಂದ ಆನೆ ಹೊರಬಂದಿದ್ದರೆ ಸ್ಥಳೀಯವಾಗಿ ಹಲವಷ್ಟು ಮನೆಗಳು ಇರುವ ಕಾರಣ ಆತಂಕವಿದೆ. ಹೊಸಂಗಡಿ, ಕೆಪಿಸಿ, ಭಾಗಿಮನೆ ಸೇರಿದಂತೆ ಅಮಾಸೆಬೈಲು, ತೊಂಬಟ್ಟು ಭಾಗದ ನಿವಾಸಿಗಳು ಹಾಗೂ ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ಆನೆ ಸಂಚಾರವನ್ನು ಮಾಸ್ತಿಕಟ್ಟೆ ಅರಣ್ಯ ಚೆಕ್ ಪೋಸ್ಟ್ ನ ಸಿಬಂದಿ ಹಾಗೂ ವಾಹನ ಸವಾರರು ತಮ್ಮ ಮೊಬೈಲ್ ನಲ್ಲಿ ವೀಡಿಯೋ ಚಿತ್ರೀಕರಿಸಿದ್ದಾರೆ. ಈ ಆನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ಈಗಾಗಾಲೇ ಆನೆ ತಡೆ ಪಡೆ (ಎಲಿಫೆಂಟ್ ಟಾಸ್ಕ್ ಪೋರ್ಸ್), ಅರಣ್ಯ ಇಲಾಖೆ, ವನ್ಯಜೀವಿ ವಲಯದ ಅಧಿಕಾರಿ, ಸಿಬ್ಬಂದಿಗಳು ಜಿಪಿಎಸ್ ತಂತ್ರಜ್ಞಾನದ ಮೂಲಕ ಕಾಡಾನೆ ಸಂಚಾರದ ಮಾಹಿತಿ ಪಡೆಯುತ್ತಿ ದ್ದಾರೆ. ಘಾಟಿಯ ಚಂಡಿಕಾಂಬ ದೇವಸ್ಥಾನದ ಬಳಿ ಸಂಜೆ ವೇಳೆಗೆ ಕೊನೆಯ ಲೊಕೇಶನ್ ಸಿಕ್ಕಿದೆ. ಆಸುಪಾಸಿನ ಗ್ರಾಮದ ಜನರು ಎಚ್ಚರಿಕೆಯಿಂದ ಇರಬೇಕು. ರಾತ್ರಿ ವೇಳೆ ಮನೆಯಿಂದ ಹೊರಗೆ ಓಡಾಟ ಬೇಡ. ಆನೆ ಸಂಚಾರ ಕಂಡುಬಂದಲ್ಲಿ ಇಲಾಖೆಗೆ ಮಾಹಿತಿ ನೀಡಿ. ವಾಹನ ಸವಾರರು ಎಚ್ಚರಿಕೆ ಯಿಂದಿರಬೇಕು. ಯಾವುದೇ ಕಾರಣಕ್ಕೂ ಜನರು ಕಾಡಾನೆಗೆ ಪ್ರಚೋದಿಸಬೇಡಿ ಎಂದು ಕುದುರೆಮುಖ ವನ್ಯಜೀವಿ ವಿಭಾಗ ಡಿಸಿಎಫ್.ಒ ಶಿವರಾಂ ಬಾಬು ತಿಳಿಸಿದ್ದಾರೆ.
