ಶಿರಾ :
ಸಮಾಜದಲ್ಲಿ ಅತಿ ಹೆಚ್ಚು ಶ್ರಮಜೀವಿಗಳು, ಕಾರ್ಮಿಕರು ಇದ್ದು ಇಂತಹ ಕಾರ್ಮಿಕರ ಸಮಸ್ಯೆಗಳಿಗೆ ಕಾರ್ಮಿಕ ಇಲಾಖೆ ಪ್ರಾಮಾಣಿಕವಾಗಿ ಸ್ಪಂದಿಸುವಂತಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಮಹೇಶ್ ಹೇಳಿದರು.
ನಗರದ ಜೆ.ಎಂ.ಎಫ್.ಸಿ. ನ್ಯಾಯಾಲಯದ ಆವರಣದಲ್ಲಿ ನಡೆದ ಕಾರ್ಮಿಕ ಅದಾಲತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈಗಾಗಲೇ ಕಂದಾಯ ಇಲಾಖೆಯಿಂದ ನಡೆಸಲಾಗುವ ಲೋಕ ಅದಾಲತ್ ಕಾರ್ಯಕ್ರಮ ಯಶಸ್ವಿಯಾಗಿದ್ದು, ಇದೀಗ ಕಾರ್ಮಿಕ ಇಲಾಖೆ ನಡೆಸುವ ಕಾರ್ಮಿಕ ಅದಾಲತ್ ಕಾರ್ಯಕ್ರಮ ಕೂಡ ಯಶಸ್ವಿಯಾಗಬೇಕು. ಕಾರ್ಮಿಕರು ತಮ್ಮ ಸಣ್ಣಪುಟ್ಟ ಸಮಸ್ಯೆಗಳನ್ನು ಬಗೆ ಹರಿಸಿಕೊಳ್ಳುವ ಮೂಲಕ ಕಾನೂನಿನ ಬಗ್ಗೆ ತಿಳಿವಳಿಕೆಯನ್ನೂ ಮೂಡಿಸಿಕೊಳ್ಳಬೇಕಿದೆ.
ಅನೇಕ ಕಾರ್ಮಿಕರಿಗೆ ತಮ್ಮ ಸಮಸ್ಯೆಗಳನ್ನು ಎಲ್ಲಿ ಪರಿಹರಿಸಿಕೊಳ್ಳಬೇಕೆಂಬ ಅರಿವು ಕೂಡ ಇರುವುದಿಲ್ಲ. ಅಂತಹವರಲ್ಲಿ ಅರಿವು ಮೂಡಿಸುವ ಕೆಲಸವಾಗಬೇಕು. ಕಾರ್ಮಿಕರಿಗೆ ಸರ್ಕಾರದಿಂದ ಅನೇಕ ಸೌಲಭ್ಯಗಳು ಲಭ್ಯವಾಗುತ್ತಿದ್ದು ಅಂತಹ ಸೌಲಭ್ಯಗಳ ಬಗ್ಗೆ ಕಾರ್ಮಿಕ ಇಲಾಖೆ ತಿಳಿಹೇಳಬೇಕು. ಕರ್ತವ್ಯ ನಿರತರಾದ ಕಾರ್ಮಿಕರಿಗೆ ಸಮಸ್ಯೆ ಉಂಟಾದಲ್ಲಿ ಕೂಡಲೇ ಅಧಿಕಾರಿಗಳನ್ನು ಸಂಪರ್ಕಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಎಸ್.ಮಹೇಶ್ ತಿಳಿಸಿದರು.
ನ್ಯಾಯಾಧೀಶರಾದ ಕು.ಕೆ.ಎಸ್.ಆಶಾ, ವಕೀಲರ ಸಂಘದ ಅಧ್ಯಕ್ಷ ಧರಣೇಶ್ಗೌಡ, ಉಪಾಧ್ಯಕ್ಷ ವೈ.ಟಿ.ರಾಮಚಂದ್ರಪ್ಪ, ಖಜಾಂಚಿ ಎಚ್.ಗುರುಮೂರ್ತಿ, ಕಾರ್ಮಿಕ ನಿರೀಕ್ಷಕ ಅಬ್ದುಲ್ ರವೂಫ್, ನಗರ ಠಾಣಾ ಪಿ.ಎಸ್.ಐ. ಸಿದ್ಧಾರ್ಥ ಮುಂತಾದವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2021/09/sira-photo-number-65.9.2021-e1630911336151.jpg)