ಕಳ್ಳಂಬೆಳ್ಳ ಕೆರೆಯಿಂದ ಮದಲೂರು ಕೆರೆಗೆ ಹೇಮಾವತಿ ನೀರಿಗೆ ಚಾಲನೆ

ಶಿರಾ: 

      ಬಹು ವರ್ಷಗಳ ಶಿರಾ ಭಾಗದ ರೈತರು ಹಾಗೂ ಜನತೆಯ ನಿರೀಕ್ಷೆಯನ್ನು ಈಡೇರಿಸುವ ನಿಟ್ಟಿನಲ್ಲಿ ಕೊನೆಗೂ ರಾಜ್ಯ ಸರ್ಕಾರ ಕಳ್ಳಂಬೆಳ್ಳ ಕೆರೆಯಿಂದ ಮದಲೂರು ಕೆರೆಗೆ ಹೇಮಾವತಿಯ ನೀರನ್ನು ಹರಿಸುವ ಕಾರ್ಯಕ್ಕೆ ಸೋಮವಾರ ಚಾಲನೆ ನೀಡಿದೆ.

      ಉಪ ಚುನಾವಣೆಯ ಸಂಬಂಧವಾಗಿ ಸದರಿ ಕ್ಷೇತ್ರದಲ್ಲಿ ಬಿ.ಜೆ.ಪಿ. ಅಭ್ಯರ್ಥಿಯ ಗೆಲುವಿಗಾಗಿ ಮದಲೂರು ಕೆರೆಗೆ 6 ತಿಂಗಳಲ್ಲಿ ಹೇಮಾವತಿ ನೀರನ್ನು ಹರಿಸುವುದಾಗಿ ಮತದಾರರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಮತ ಪ್ರಚಾರದ ವೇಳೆಭರವಸೆ ನೀಡಿದ ಹಿನ್ನೆಲೆಯಲ್ಲಿ ಕೊನೆಗೂ ಮದಲೂರು ಕೆರೆಯತ್ತ ನೀರನ್ನು ಹರಿಸಲು ಮುಂದಾಗಿದೆ.

      ಸೋಮವಾರ ಬೆಳಿಗ್ಗೆ ಕಳ್ಳಂಬೆಳ್ಳ ಕೆರೆಯಿಂದ ಮದಲೂರು ಕೆರೆಗೆ ಸಾಗುವ ಚಾನಲ್ ಬಳಿ ಕ್ರಸ್ಟ್ ಗೇಟ್‍ಗೆ ಪೂಜೆ ಸಲ್ಲಿಸುವ ಮೂಲಕ ಹೇಮಾವತಿ ನೀರು ಹರಿಸಲು ಚಾಲನೆ ನೀಡಲಾಯಿತು.

      ಶಾಸಕ ಸಿ.ಎಂ.ರಾಜೇಶ್‍ಗೌಡ, ಸಂಸದ ಎ.ನಾರಾಯಣಸ್ವಾಮಿ, ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ, ಶ್ರೀ ಕ್ಷೇತ್ರ ಪ.ನಾ.ಹಳ್ಳಿಯ ಶ್ರೀ ನಂಜಾವಧೂತಸ್ವಾಮೀಜಿ, ನಾರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಕೆ.ಮಂಜುನಾಥ್ ಸೇರಿದಂತೆ ಅನೇಕ ಪ್ರಮುಖರು ನೀರು ಹರಿಸುವ ಮುನ್ನ ಪೂಜೆಯಲ್ಲಿ ಪಾಲ್ಗೊಂಡರು.

      ಕ್ಷೇತ್ರದ ಶಾಸಕ ಡಾ.ಸಿ.ಎಂ.ರಾಜೇಶ್‍ಗೌಡ ಮಾತನಾಡಿ ರಾಜ್ಯದ ಮುಖ್ಯಮಂತ್ರಿಗಳು ಚುನಾವಣೆಯ ಸಂದರ್ಭದಲ್ಲಿ ಮದಲೂರಿಗೆ ಬಂದಾಗ ಕೇವಲ 6 ತಿಂಗಳಲ್ಲಿ ಕೆರೆಗೆ ನೀರು ಹರಿಸುವ ಭರವಸೆಯನ್ನು ನೀಡಿದ್ದರು. ನುಡಿದಂತೆ ನಡೆಯುವುದು ಯಡಿಯೂರಪ್ಪ ಅವರ ಗುಣವಾಗಿದ್ದು ಶಾಸಕನಾಗಿ ನಾನು ಆಯ್ಕೆಗೊಂಡ ಕೇವಲ ಕೆಲವೇ ದಿನಗಳಲ್ಲಿಯೇ ಮದಲೂರು ಕೆರೆಗೆ ನೀರು ಹರಿಸಲಾಗುತ್ತಿದೆ ಎಂದರು.

      ಸಂಸದ ಎ.ನಾರಾಯಣಸ್ವಾಮಿ ಮಾತನಾಡಿ ಶಿರಾ ಕ್ಷೇತ್ರದಲ್ಲಿ ಬಿ.ಜೆ.ಪಿ. ಅಭ್ಯರ್ಥಿ ಎಂದೂ ಕೂಡಾ ಆಯ್ಕೆಯಾಗಿರಲಿಲ್ಲ. ಮದಲೂರು ಕೆರೆಗೆ ನೀರು ಹರಿಸುವ ಸುಳ್ಳು ಭರವಸೆಗಳನ್ನು ನೀಡಿಕೊಂಡೇ ಈ ಕ್ಷೇತ್ರದಲ್ಲಿ ವಿವಿಧ ಪಕ್ಷದ ಅಭ್ಯರ್ಥಿಗಳು ಗೆಲ್ಲುತ್ತಾ ಬಂದಿದ್ದರು. ಆದರೆ ಬಿಜೆಪಿ ಆಗಲ್ಲ. ರಾಜ್ಯದ ಮುಖಮಂತ್ರಿಗಳು ಕೂಡಾ ಈ ಸಂಬಂಧ ನೀಡಿದ ಭರವಸೆಯನ್ನು ಈಡೇರಿಸಿದ್ದಾರೆ ಎಂದರು.
 
      ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಮಾತನಾಡಿ ಹೇಮಾವತಿ ನೀರು ಹರಿಸುವ ಯೋಜನೆ ಶಿರಾ ಭಾಗದ ಜನರ ದಣಿವಾರಿಸುವ ಮಹತ್ವದ ಯೋಜನೆಯಾಗಿದೆ. ಕಳೆದ 15 ವರ್ಷಗಳಿಂದಲೂ ಈ ಭಾಗದ ಜನರಲ್ಲಿ ಇದ್ದ ಮಹತ್ವದ ಆಸೆಯನ್ನು ಮುಖ್ಯಮಂತ್ರಿಗಳು ಈಡೇರಿಸಿರುವುದು ನಿಜಕ್ಕೂ ನಮ್ಮ ಪುಣ್ಯವೇ ಸರಿ. ಭದ್ರಾ ಮೇಲ್ದಂಡೆ ಯೋಜನೆಯು ಕೂಡಾ ಶೀಘ್ರವಾಗಿ ಈ ಭಾಗಕ್ಕೆ ಬಂದಲ್ಲಿ ಬರದ ನಾಡು ಸಮೃದ್ಧಿಯಾಗುವುದು ಖಚಿತ ಎಂದರು.

      ಶ್ರೀ ನಂಜಾವಧೂತಸ್ವಾಮೀಜಿ ಮಾತನಾಡಿ ಮದಲೂರು ಕೆರೆಯ ನೀರಿಗಾಗಿ ನಾವು ಹೋರಾಟವನ್ನೇ ಮಾಡಬೇಕಾಯ್ತು. ಇದೀಗ ಸರ್ಕಾರ ಸ್ಪಂದಿಸಿದೆ. ನಿರಂತರವಾಗಿ ಮದಲೂರು ಕೆರೆಯನ್ನು ತುಂಬಿಸುವ ಕೆಲಸ ಸಾಗಬೇಕು. ಹಾಗೆಯೇ ಭದ್ರಾ ಯೋಜನೆಯ ಕಾಮಗಾರಿ ಕೂಡಾ ತ್ವರಿತ ಗತಿಯಲ್ಲಿ ನಡೆಯಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.

      ರಾಜ್ಯ ನಾರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಕೆ.ಮಂಜುನಾಥ್ ಮಾತನಾಡಿ ಈ ಹಿಂದಿನ ಚುನಾವಣೆಗಳಲ್ಲಿ ಪಕ್ಷದಿಂದ ನಾವು ಅಭ್ಯರ್ಥಿಗಳಾಗಿದ್ದೆವು ನಿಜ ಆದರೆ, ಮದಲೂರು ಕೆರೆಗೆ ನೀರು ಹರಿಸುವ ಸುಳ್ಳನ್ನು ಹೇಳಲು ನಾವು ತಯಾರಿರಲಿಲ್ಲ. ಇದೀಗ ರಾಜ್ಯದಲ್ಲಿ ನಮ್ಮದೇ ಸರ್ಕಾರವಿದ್ದು ನೀರು ಕೊಡುವ ವಿಶ್ವಾಸ ನಮ್ಮಲ್ಲಿತ್ತು ಆದ್ದರಿಂದ ನೀಡಿದ ಭರವಸೆಯನ್ನು ಸರ್ಕಾರ ಈಡೇರಿಸಿದೆ ಎಂದರು.

      ತಾಲ್ಲೂಕು ದಂಡಾಧಿಕಾರಿ ಮಮತಾ, ನಗರಸಭೆಯ ಪೌರಾಯುಕ್ತ ಪರಮೇಶ್ವರಪ್ಪ, ಸಣ್ಣ ನೀರಾವರಿ ಇಲಾಖೆಯ ಎ.ಇ.ಇ. ರವಿಚಂದ್ರ, ನಗರ ಘಟಕದ ಬಿ.ಜೆ.ಪಿ. ಅಧ್ಯಕ್ಷ ವಿಜಯರಾಜ್, ಗ್ರಾ.ಅಧ್ಯಕ್ಷ ರಂಗಸ್ವಾಮಿ, ಮಾಜಿ ಗ್ರಾ.ಘಟಕದ ಅಧ್ಯಕ್ಷ ಮಾಲಿ ಮರಿಯಪ್ಪ, ತರೂರು ಬಸವರಾಜು, ಎಲ್.ಬಿ.ಸುಧಾಕರಗೌಡ, ಶ್ರೀನಿವಾಸ್, ಚಂಗಾವರ ಮಾರಣ್ಣ ಸೇರಿದಂತೆ ಅನೇಕ ಪ್ರಮುಖರು ಹಾಜರಿದ್ದರು.

Recent Articles

spot_img

Related Stories

Share via
Copy link