ಶಿರಾ :
ಶುಕ್ರವಾರ ರಾತ್ರಿಯಿಂದ ಸೋಮವಾರ ಬೆಳಗ್ಗೆವರೆಗೂ ಅಂಗಡಿ ಮುಂಗಟ್ಟು ಮತ್ತು ವಾಣಿಜ್ಯ ಮಳಿಗೆಗಳು, ಮಾಲ್ಗಳನ್ನು ಮುಚ್ಚುವಂತೆ ಸರ್ಕಾರ ಆದೇಶ ನೀಡಿತ್ತಾದರೂ ದಿಢೀರನೆ ಶಿರಾ ನಗರದಲ್ಲಿ ಗುರುವಾರ ಬೆಳಗ್ಗೆಯೇ ಸಾರ್ವಜನಿಕರಿಗೆ ಮಾಹಿತಿಯನ್ನೂ ನೀಡಿ, ಏಕಾಏಕಿ ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಅಂಗಡಿ-ಮುಂಗಟ್ಟುಗಳನ್ನು ಆರಕ್ಷಕ ಸಿಬ್ಬಂದಿ ಮುಚ್ಚಿಸಿದ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ವ್ಯಾಪಕ ವಿರೋಧ ವ್ಯಕ್ತವಾಯಿತು.
ಬೆಳಗ್ಗೆ 11.30ಕ್ಕೆ ದಿಢೀರನೆ ರೋಡಿಗಿಳಿದ ಶಿರಾ ಪೊಲೀಸರು ಜವಳಿ ಅಂಗಡಿ, ಜ್ಯುವೆಲರ್ಸ್ ಅಂಗಡಿ, ಎಲೆಕ್ಟ್ರಾನಿಕ್ಸ್, ಮೊಬೈಲ್ ಅಂಗಡಿ, ರಸ್ತೆ ಬದಿಯ ಟೀ ಅಂಗಡಿಗಳು, ರಸ್ತೆ ಬದಿಯ ವಿವಿಧ ವ್ಯಾಪಾರಿಗಳ ಅಂಗಡಿಗಳನ್ನು ಮುಚ್ಚಿಸಿ ಶಾಕ್ ನೀಡಿದರು. ಮೊದ ಮೊದಲು ಹೋಟೆಲ್ಗಳ ಬಾಗಿಲುಗಳನ್ನು ಮುಚ್ಚಿಸಿದರಾದರೂ ಯಾವುದೇ ಸೂಚನೆಯನ್ನೂ ನೀಡದೆ ಹೋಟೆಲ್ ಮಾಲೀಕರಿಗೆ ಶಾಕ್ ನೀಡಿದ ಪರಿಣಾಮ ಕುಪಿತಗೊಂಡ ಅದೆಷ್ಟೋ ಹೋಟೆಲ್ಗಳ ಮಾಲೀಕರು ಹೋಟೆಲ್ಗಳಲ್ಲಿ ಊಟ, ತಿಂಡಿ ವಿತರಿಸದೆ ಪಾರ್ಸೆಲ್ಗೂ ಅವಕಾಶ ನೀಡದಿರುವ ಬಗ್ಗೆ ಕುಪಿತಗೊಂಡಾಗ ಆರಕ್ಷಕ ಸಿಬ್ಬಂದಿ ಹೋಟೆಲ್ಗಳಿಗೆ ಪಾರ್ಸೆಲ್ಗೆ ಮಾತ್ರ ಅವಕಾಶ ನೀಡಿದರು.
ಬುಧವಾರ ರಾಜ್ಯ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದ್ದರ ಹಿನ್ನೆಲೆಯಲ್ಲಿ ವ್ಯಾಪಾರಗಳಿಗೆ ತೊಂದರೆ ಇಲ್ಲವೆಂದು, ಸಣ್ಣ ಪುಟ್ಟ ಟೀ ಅಂಗಡಿಗಳವರು ಹತ್ತಾರು ಲೀಟರ್ಗಟ್ಟಲೆ ಕೊಂಡು ತಂದಿದ್ದ ಹಾಲಿನ ಹಣಕ್ಕೂ ಕುತ್ತು ಬಿದ್ದಿದ್ದು ನಿಜಕ್ಕೂ ವಿಪರ್ಯಾಸವೇ ಸರಿ. ಜಿಲ್ಲಾಡಳಿತದ ಸೂಚನೆಯಂತೆ ಯಾವ ಅಂಗಡಿಗಳ ಬಾಗಿಲು ಮುಚ್ಚಿಸಬೇಕು? ಯಾವ ಅಂಗಡಿಗಳ ಬಾಗಿಲು ಮುಚ್ಚಿಸಬಾರದು ಎಂಬ ಸಾಮಾನ್ಯ ಜ್ಞಾನವೂ ಇಲ್ಲದವರಂತೆ ತಾಲ್ಲೂಕು ಆಡಳಿತ ಮನಸೋ ಇಚ್ಛೆ ಅಂಗಡಿಗಳ ಬಾಗಿಲು ಮುಚ್ಚಿಸಿದ್ದು, ಅಂಗಡಿಗಳ ಮಾಲೀಕರ ಕೋಪಕ್ಕೆ ಕಾರಣವಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2021/04/sira-photo-number-422.4.2021.jpg)