ಶಿರಾ :
ತಾಲ್ಲೂಕಿನ ಬಹುತೇಕ ಅಂಗನವಾಡಿ ಕಟ್ಟಡಗಳಿಗೆ ಹಣ ಮಂಜೂರಾತಿಯ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಆರಂಭಿಕ ಹಂತವಾಗಿ ತಾಲ್ಲೂಕಿನ ಗಂಜಲಗುಂಟೆ ಗ್ರಾಮದ ಅಂಗನವಾಡಿ ಕಟ್ಟಡದ ದುರಸ್ತಿಗೆ 10 ಲಕ್ಷ ರೂ. ಗಳನ್ನು ಮಂಜೂರು ಮಾಡಲಾಗುವುದು ಎಂದು ಶಾಸಕ ಡಾ.ಸಿ.ಎಂ.ರಾಜೇಶ್ಗೌಡ ಹೇಳಿದರು.
ಬುಧವಾರ ತಾಲ್ಲೂಕಿನ ಕಳ್ಳಂಬೆಳ್ಳ ಹೋಬಳಿಯ ತರೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿ, ಅವರು ಸುದ್ದಿಗಾರರೊಂದಿಗೆ ಮಾತನಾಡಿ ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಶಾಲೆಯು ಮಕ್ಕಳ ಕಲಿಕೆಯ ಗೂಡು. ಮಕ್ಕಳ ಭವಿಷ್ಯ ಆರಂಭಗೊಳ್ಳುವುದೇ ಅಂಗನವಾಡಿ ಕೇಂದ್ರಗಳಿಂದ. ಅತ್ಯಂತ ಕಡು ಬಡ ಕುಟುಂಬದ ಮಕ್ಕಳು ಅತಿ ಹೆಚ್ಚಾಗಿ ಅಂಗನವಾಡಿ ಕೇಂದ್ರದಿಂದಲೆ ಕಲಿಕೆ ಆರಂಭಿಸುತ್ತಾರೆ. ಈ ದೆಸೆಯಲ್ಲಿ ತಾಲ್ಲೂಕಿನ ಅಂಗನವಾಡಿ ಕಟ್ಟಡಗಳ ಬಗ್ಗೆ ಅತಿ ಹೆಚ್ಚಿನ ನಿಗಾ ವಹಿಸಲಾಗುವುದು ಎಂದು ಶಾಸಕರು ತಿಳಿಸಿದರು.
ಹೊಸಮಲ್ಲನಹಳ್ಳಿ ಗ್ರಾಮದ ನಿರಾಶ್ರಿತ 15 ಬಡ ಕುಟುಂಬಗಳಿಗೆ ನಿರಂತರ ಜ್ಯೋತಿ ಯೋಜನೆ ಕಲ್ಪಿಸಲು ಬೆಸ್ಕಾಂ ಇಲಾಖೆಗೆ ಸೂಚನೆ ನೀಡಲಾಗಿದೆ. ತರೂರು ಸರ್ಕಾರಿ ಶಾಲೆಯ ಕೆಲ ಕೊಠಡಿಗಳು ಮೇಲ್ಛಾವಣಿ ಇಲ್ಲವಾದ್ದರಿಂದ ಅವುಗಳ ದುರಸ್ತಿಗೂ ಅನುದಾನ ನೀಡಲು ಕ್ರಮ ಕೈಗೊಳ್ಳಲಾಗಿದೆ. ಇದೇ ತರೂರು ಗ್ರಾಮದ ಪರಿಶಿಷ್ಟ ಜಾತಿ ಕಾಲನಿಯ ಅರ್ಹ ಕುಟುಂಬಗಳಿಗೆ ನಿವೇಶನ ಒದಗಿಸಲು ಸ್ಥಳ ಪರಿಶೀಲನೆ ನಡೆಸಲು ತಾಪಂ ಇ.ಓ. ಮತ್ತು ಪಿ.ಡಿ.ಓ.ಗಳಿಗೆ ಸೂಚನೆ ನೀಡಲಾಗಿದೆ ಎಂದು ಶಾಸಕರು ತಿಳಿಸಿದರು.
ಗ್ರಾಪಂ ಸದಸ್ಯ ಗಂಗಣ್ಣ, ಪುಟ್ಟಲಕ್ಷ್ಮೀ, ಪುಟ್ಟರಾಜು, ಬಸವರಾಜು, ರಮೇಶ್ ಬಾಬು, ದೇವರಾಜು, ಚೆನ್ನಬಸವಣ್ಣ, ಅಣ್ಣಪ್ಪ, ಪುಟ್ಟರಾಮು, ಹೊನ್ನೇಶ್ಗೌಡ, ಮಾಲಿ ಸಿ.ಎಲ್.ಗೌಡ, ಕದಿರೇಹಳ್ಳಿ ಮೂರ್ತಿ ಮುಂತಾದವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
