ಕೇಂದ್ರ ಸರ್ಕಾರದಲ್ಲಿ 20 ಮಂದಿ ದಲಿತರಿಗೆ ಸಚಿವ ಸ್ಥಾನ – ಎ.ನಾರಾಯಣಸ್ವಾಮಿ

 ಶಿರಾ :

      ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಯೋಜನೆಗಳು ಮಹತ್ವದ ಯೋಜನೆಗಳಾಗಿದ್ದು, ಎಲ್ಲಾ ವರ್ಗದ ಜನತೆಗೆ ಈ ಯೋಜನೆಗಳು ಸಾಕಾರಗೊಂಡಿವೆ. ಕೇಂದ್ರದ ಸಚಿವ ಸಂಪುಟದಲ್ಲಿ 20 ಮಂದಿ ದಲಿತರಿಗೆ ಸಚಿವ ಸ್ಥಾನ ನೀಡಿದ ಸರ್ಕಾರಗಳು ಈ ಹಿಂದೆ ಇರಲಿಲ್ಲ ಎಂದು ಕೇಂದ್ರ ಸಚಿವ ಹಾಗೂ ಚಿತ್ರದುರ್ಗ ಸಂಸದ ಎ.ನಾರಾಯಣಸ್ವಾಮಿ ತಿಳಿಸಿದರು.

      ನಗರದ ಸೋಮೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಬಿ.ಜೆ.ಪಿ. ಪಕ್ಷದ ಜನಾಶೀರ್ವಾದ ಯಾತ್ರೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

      ದೇಶದಲ್ಲಿ ದಲಿತರನ್ನು, ಹಿಂದುಳಿದ ವರ್ಗಗಳ ರಾಜಕೀಯ ಮುತ್ಸದ್ಧಿಗಳಿಗೆ ಸ್ಥಾನಮಾನಗಳನ್ನು ಕಲ್ಪಿಸಿಕೊಟ್ಟ ಪ್ರಕರಣಗಳು ತುಂಬಾ ಕಡಿಮೆಯಾಗಿದ್ದು, ಇದೀಗ ಮೋದಿ ಸರ್ಕಾರದಲ್ಲಿ 20 ಮಂದಿ ದಲಿತ ಸಚಿವರು ಹಾಗೂ 27 ಮಂದಿ ಹಿಂದುಳಿದ ವರ್ಗದ ಸಚಿವರು ಸ್ಥಾನಮಾನಗಳನ್ನು ಪಡೆಯುವಂತಾಗಿರುವುದು ನಿಜಕ್ಕೂ ಶ್ಲಾಘನೀಯ ಸಂಗತಿ ಎಂದರು.

      ಕಳೆದ ಎರಡು ಅವಧಿಯಲ್ಲೂ ಕೂಡ ಕೇಂದ್ರ ಸರ್ಕಾರ ದೇಶದ ಅಭಿವೃದ್ಧಿಗೆ ತನ್ನದೇ ಆದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ. ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದ ಪರಿಣಾಮ ತುಳಿತಕ್ಕೊಳಗಾದವರು ಕೂಡ ಆರ್ಥಿಕವಾಗಿ ಚೇತರಿಸಿಕೊಳ್ಳುವಂತಾಗಿದೆ ಎಂದರು.

     ಕಳೆದ ಎರಡು ವರ್ಷಗಳಲ್ಲಿ ಕೋವಿಡ್ ಮಹಾಮಾರಿ ನಮ್ಮನ್ನು ಕಾಡುತ್ತಿದ್ದರೂ ಕೂಡ ಸಂತ್ರಸ್ತ ಕುಟುಂಬಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರಾಮಾಣಿಕವಾಗಿ ಸ್ಪಂದಿಸಿವೆ. ಪಕ್ಷದ ಕಾರ್ಯಕರ್ತರು ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಚರ್ಚಿಸಿ ಜನತೆಗೆ ತಲುಪಿಸುವ ಉದ್ದೇಶದಿಂದ ಈ ಜನಾಶೀರ್ವಾದ ಯಾತ್ರೆಯನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

      ಮದಲೂರು ಕೆರೆಗೆ ಹೇಮಾವತಿ ನೀರನ್ನು ಹರಿಸುವ ಸಂಬಂಧ ಈಗಲೂ ಯಡಿಯೂರಪ್ಪ ಅವರು ನೀಡಿದ ಭರವಸೆಯನ್ನು ಈಡೇರಿಸಿಯೇ ತೀರುತ್ತೇವೆ. ಕಳೆದ ಬಾರಿ ಮದಲೂರಿಗೆ ಅಲ್ಪ ಪ್ರಮಾಣದ ನೀರನ್ನು ಹರಿಸಿದ್ದೆವು. ಪ್ರಸಕ್ತ ವರ್ಷವೂ ನೀರು ಹರಿಸುವುದು ಖಚಿತವಲ್ಲದೆ ಮದಲೂರು ಕೆರೆಗೆ ಶಾಶ್ವತ ಪರಿಹಾರ ದೊರಕಿಸವುದು ಖಚಿತ ಎಂದು ನಾರಾಯಣಸ್ವಾಮಿ ಹೇಳಿದರು.

      ಶಾಸಕ ಡಾ.ಸಿ.ಎಂ.ರಾಜೇಶ್‍ಗೌಡ ಮಾತನಾಡಿ, ಸಂಸದ ನಾರಾಯಣಸ್ವಾಮಿ ಅವರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಲಭಿಸಿರುವುದು ನಮ್ಮೆಲ್ಲರ ಹೆಮ್ಮೆಯಾಗಿದೆ. ಶಿರಾ ಕ್ಷೇತ್ರದ ಅಭಿವೃದ್ಧಿಗೆ ಇದರಿಂದ ಮತ್ತಷ್ಟು ಶಕ್ತಿ ಲಭಿಸಿದಂತಾಗಿದೆ ಎಂದರು.
ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಮಾತನಾಡಿ, ಶಿರಾ ಕ್ಷೇತ್ರದ ಸಮಗ್ರ ಅಭಿವೃದ್ಧಿ ನಮ್ಮೆಲ್ಲರ ಕರ್ತವ್ಯವಾಗಿದ್ದು, ಬಿ.ಜೆ.ಪಿ. ಪಕ್ಷದ ಸರ್ಕಾರ ದೇಶದ ಅಭಿವೃದ್ಧಿಗೆ ಬದ್ಧವಾಗಿದೆ ಎಂಬುದಕ್ಕೆ ಮೋದಿ ಅವರ ಪರಿಕಲ್ಪನೆಗಳೆ ಜ್ವಲಂತ ಸಾಕ್ಷಿ ಎಂದರು. (ಪುಟ2ಕ್ಕೆ)

ಅದ್ದೂರಿ ಸ್ವಾಗತ:

      ನೂತನ ಕೇಂದ್ರ ಸಚಿವರಾದ ನಂತರ ಮೊದಲಿಗೆ ಶಿರಾ ನಗರಕ್ಕೆ ಆಗಮಿಸಿದ ಸಚಿವ ನಾರಾಯಣಸ್ವಾಮಿ ಅವರನ್ನು ಬಿ.ಜೆ.ಪಿ. ಪಕ್ಷದ ಕಾರ್ಯಕರ್ತರು ದರ್ಗಾ ವೃತ್ತದಲ್ಲಿ ಸ್ವಾಗತಿಸಿದ ನಂತರ ಸೋಮೇಶ್ವರ ಕಲ್ಯಾಣ ಮಂಟಪಕ್ಕೆ ಮೆರವಣಿಗೆಯಲ್ಲಿ ತೆರಳಿದರು.
ರೇಷ್ಮೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಆರ್.ಗೌಡ, ತೆಂಗು ಮತ್ತು ನಾರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಕೆ.ಮಂಜುನಾಥ್, ನಗರ ಬಿ.ಜೆ.ಪಿ. ಅಧ್ಯಕ್ಷ ವಿಜಯರಾಜ್, ಗ್ರಾಮಾಂತರ ಅಧ್ಯಕ್ಷ ರಂಗಸ್ವಾಮಿ, ಶಿರಾ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಈರಣ್ಣ, ಮದಲೂರು ನರಸಿಂಹಮೂರ್ತಿ, ಶ್ರೀರಂಗಪ್ಪ ಯಾದವ್, ಸಂತೇಪೇಟೆ ನಟರಾಜ್, ಮುದಿಮಡು ಮಂಜುನಾಥ್, ಚಂಗಾವರ ಮಾರಣ್ಣ, ಸಂತೆಪೇಟೆ ರಮೇಶ್ ಸೇರಿದಂತೆ ಅನೇಕ ಪ್ರಮುಖರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link