ಶಿರಾ :
ಬಾರದ ಮಳೆ, ಬೆಂಬಲ ಬೆಲೆ ಲಭ್ಯವಾಗದೆ ರೈತರು ಸದಾ ಪೇಚಿಗೆ ಸಿಲುಕುವಂತಹ ಚಿತ್ರಣ ಸೇರಿದಂತೆ ಕೃಷಿಯ ಕಾಯಕವನ್ನೇ ನೆಚ್ಚಿ ಬದುಕುವ ಮಂದಿಯ ಸ್ಥಿತಿ ಈ ವರ್ಷ ಕೊಂಚ ಗೊಂದಲಕ್ಕೂ ಈಡಾಯಿತು.
ಪ್ರತೀ ವರ್ಷವೂ ಕೃಷಿ ಕಾಯಕ ಮಾಡುತ್ತಾ, ಕೂಲಿನಾಲಿ ಮಾಡಿ ಬದುಕಿನ ಜಟಕಾ ಬಂಡಿಯನ್ನು ಎಳೆಯುತ್ತಿದ್ದ ಕಾರ್ಮಿಕರಿಗೆ ಕೇವಲ ಎರಡೂವರೆ ವರ್ಷದೊಳಗೆ ಎರಡು ಚುನಾವಣೆಗಳನ್ನು ಎದುರಿಸಬೇಕಾಗಿ ಬಂದದ್ದು ನಿಜಕ್ಕೂ ವಿಧಿಯಾಟವೇ ಸರಿ.
ಈ ವರ್ಷ ಹದಕ್ಕೆ ತಕ್ಕಂತೆ ಮಳೆ ಬಂದು ಇನ್ನೇನು ರೈತರು ಸಂತುಷ್ಠಿಯ ಬೆಳೆ ಪಡೆದು ಶೇಂಗಾ ಬೆಳೆ ಕಟಾವು ಮಾಡುವ ಹೊತ್ತಿಗೆ ಸರಿಯಾಗಿ ಉಪ ಚುನಾವಣೆಯೂ ಎದುರಾಗಿ ನಿಜಕ್ಕೂ ರೈತರು ಒಂದಿಷ್ಟು ಕಂಗಾಲಾಗಿದ್ದೂ ಉಂಟು.
ಕ್ಷೇತ್ರದಲ್ಲಿ ಚುನಾವಣೆಯ ಪ್ರಕ್ರಿಯೆ ಆರಂಭಗೊಂಡ ಕೂಡಲೇ ಗ್ರಾಮೀಣ ಭಾಗದಲ್ಲಿ ರೈತರಿಗೆ ಕೂಲಿಕಾರರು ಕೂಡಾ ಕೈಗೆ ಸಿಗದಂತಾದರು. ವಿವಿಧ ಪಕ್ಷಗಳ ದುರೀಣರು ಚುನಾವಣೆ ಹಿನ್ನೆಲೆಯಲ್ಲಿ ಬಹುತೇಕ ಗ್ರಾಮೀಣ ಭಾಗದ ಜನತೆಗೆ ಪ್ರಚಾರಕ್ಕಾಗಿ ಹಣದ ಅಮಿಷ ತೋರಿಸಿದ ಪರಿಣಾಮ ಸ್ಥಳೀಯ ಊರುಗಳಲ್ಲಿ ಕೂಲಿಕಾರರು ಕೂಡಾ ದಕ್ಕದಂತಾದರೂ.
ಅದೇನೋ ಒಂದು ಗಾಧೆ ಮಾತಿದೆ…..ಒಪ್ಪತ್ತಿನ ಊಟಕ್ಕೆ ಹೋಗಿ ವರ್ಷದ ಕೂಳು ಕಳೆದುಕೊಂಡರು ಎಂಬಂತೆ ದಿನವಿಡೀ ಕೂಲಿನಾಲಿ ಮಾಡಿ ಬೆವರು ಸುರಿಸಿ ದುಡಿಯುತ್ತಿದ್ದ ಬಹುತೇಕ ಮಂದಿಯನ್ನು ಒಂದೆರಡು ದಿನಗಳ ಹಿಂದಷ್ಟೆ ನಡೆದ ಉಪ ಚುನಾವಣೆ ನಿಜಕ್ಕೂ ದಿಕ್ಕು ತಪ್ಪಿಸಿತು.
ತಲೆಕೆಡಿಸಿದ ಪ್ರಚಾರದ ಭಕ್ಷೀಸು: ಕಷ್ಟಪಟ್ಟು ದುಡಿದದ್ದೇ ನಮಗಿರುವುದಿಲ್ಲ, ಇನ್ನೂ ಯಾರೋ ಪುಕ್ಕಟೆಯಾಗಿ ಕೊಟ್ಟ ಕಾಂಚಣವಾದರೂ ಎಷ್ಟು ದಿನವಿರಲು ಸಾಧ್ಯ ಎಂಬ ಮಾತು ಬೆರಳಣಿಕೆಯ ಜನರಲ್ಲಿ ಕಂಡು ಬಂದರೂ ದಿನನಿತ್ಯ ಕೂಲಿಯಂತೆ ನೀಡುತ್ತಿದ್ದ ಚುನಾವಣಾ ಪ್ರಚಾರದ ಭಕ್ಷೀಸು ಬಹುತೇಕ ಗ್ರಾಮೀಣರ ತಲೆಯನ್ನೇ ಕೆಡಿಸಿತು.
ಕಷ್ಟಪಟ್ಟು ಬೆವರು ಸುರಿಸಿ ದುಡಿದರೂ ದಕ್ಕದ ಹಣಕ್ಕೆ ಎಂತಹವರೂ ಕೂಡಾ ಮಾರುಹೋಗುವುದು ಸಹಜವೂ ಹೌದು. ಕಾರಣ ಇಷ್ಟೆ ಕಷ್ಟಪಟ್ಟು ದುಡಿದರೂ ಕೂಡಿಡಲಾಗದಂತಹ ಸ್ಥಿತಿಯಲ್ಲಿ ಈ ಭಾಗದ ಜನರಿದ್ದಾರೆ. ಕ್ಷೇತ್ರದ ವಿವಿಧ ಪಕ್ಷಗಳವರು ಈ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದ ಪರಿಣಾಮ ಮುಗ್ದ ಗ್ರಾಮೀಣ ಜನರನ್ನಂತೂ ವಿವಿಧ ಪಕ್ಷಗಳ ದುರೀಣರು ಹಳ್ಳಿ ಹಳ್ಳಿಯನ್ನೂ ಸುತ್ತುವಂತೆ ಮಾಡಿಯೇ ಬಿಟ್ಟರು.
ಪಕ್ಷದ ಬಾವುಟ ಹಿಡಿದು ಅಬ್ಬರಿಸಿ, ಬೊಬ್ಬಿರಿದರು:ನಗರವೂ ಸೇರಿದಂತೆ ಗ್ರಾಮೀಣ ಭಾಗದ ಅನೇಕ ಹಿರಿಯರು, ಯುವಕರು ಎಂದೆಂದೂ ಕೂಡಾ ಪಕ್ಷಗಳ ಬಾವುಟವನ್ನೂ ಹಿಡಿಯದವರು ಅದೇನಾಗುತ್ತೋ ನೋಡಿಯೇ ಬಿಡೋಣ….. ಎಂದು ಅಬ್ಬರಿಸಿ ಬೊಬ್ಬಿರಿದರು. ಹಣದ ಆಸೆಗೋ ಇಲ್ಲವೇ ಆ ಪಕ್ಷದಲ್ಲಿ ದೊರೆಯದ ಸ್ಥಾನನಾನಗಳ ಕೊರತೆಯಿಂದಲೋ ಒಟ್ಟಾರೆ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಪಕ್ಷಾಂತರಗೊಂಡ ಕೆಲವರು ತಾವು ಸೇರ್ಪಡೆಗೊಂಡ ಪಕ್ಷದಲ್ಲಿ ಒಲ್ಲದ ಮನಸ್ಸಿನಿಂದಲೇ ಪ್ರಾಮಾಣಿಕತೆ ಮೆರೆಯುವ ಪ್ರಯತ್ನವನ್ನೂ ಮಾಡಿದರು.
ಕೆಲವು ಮುಖಂಡರಂತೂ ಅಭ್ಯರ್ಥಿಗಳ ಪರವಾಗಿ ಪ್ರಚಾರದಲ್ಲಿ ತೊಡಗಿ ತಮ್ಮ ಕುಟುಂಬವನ್ನೇ ಮರೆತಿದ್ದೂ ಉಂಟು. ಮನೆಗೆ ಬಾರದೆ ಪಕ್ಷದ ಬೆಂಬಲಿಗರೊಟ್ಟಿಗೆ ಸೇರಿಕೊಂಡ ಯಜಮಾನರುಗಳು ಹಾಗೂ ಎಂದೂ ರಾಜಕೀಯದ ಗೋಜಿಗೆ ಹೋಗದ ತಮ್ಮ ಮಕ್ಕಳ ಸ್ಥಿತಿಯನ್ನು ಕಂಡು ರೈತ ಮಹಿಳೆಯರೂ ಕೂಡಾ ಅಭ್ಯರ್ಥಿಗಳನ್ನು, ಪಕ್ಷದ ಮುಖಂಡರನ್ನು ಶಪಿಸಿದ ನಿದರ್ಶನಗಳು ಕೂಡಾ ಉಂಟು.
ಹೆಚ್ಚಾದ ಹೃದಯ ಬಡಿತ: ಮತದಾನ ಅಂತ್ಯಗೊಂಡು ಕೊಡುವವರ ಮತ್ತು ತೆಗೆದುಕೊಳ್ಳುವವರ ಪುಕ್ಕಟೆಯ ಹಣ ಹಂಚಿಕೆಯ ಎಲ್ಲಾ ಪ್ರಕ್ರಿಯೆಗಳೂ ಇದೀಗ ಮುಗಿದು ಹೋಗಿದ್ದು ಅಭ್ಯರ್ಥಿಗಳ ಭವಿಷ್ಯ ಇ.ವಿ.ಎಂ. ಯಂತ್ರಗಳಲ್ಲಿ ಭದ್ರವಾಗಿ ಕೂತುಬಿಟ್ಟದೆ. ಎಲ್ಲರನ್ನೂ ಚುನಾವಣೆಯ ಕ್ರೀಡಾಂಗಣದಲ್ಲಿ ಆಟವಾಡಲುಬಿಟ್ಟು ಗೆಲ್ಲಲೇಬೇಕೆಂಬ ಹಠದಿಂದ ತೋಳು ತಟ್ಟಿ ಚುನಾವಣೆ ನಡೆಸಿದವರೆಲ್ಲರೂ ಅವರವರ ಗೂಡುಗಳನ್ನು ಸೇರಿಕೊಂಡಿದ್ದು ಅಭ್ಯರ್ಥಿಗಳ ಎದೆಯಲ್ಲಿ ಮಾತ್ರಾ ಢವ ಢವ ಹೃದಯ ಬಡಿತ ಹೆಚ್ಚಾಗಿದೆ.
ವಿಶ್ರಾಂತಿ, ಲೆಕ್ಕಾಚಾರಕ್ಕೆ ಮೊರೆ:
ಈ ಕ್ಷೇತ್ರದ ಪ್ರಬಲ ಪಕ್ಷಗಳ ಭ್ಯರ್ಥಿಗಳಾದ ಕಾಂಗ್ರೆಸ್ ಪಕ್ಷದ ಟಿ.ಬಿ.ಜಯಚಂದ್ರ, ಬಿ.ಜೆ.ಪಿ. ಪಕ್ಷದ ಡಾ.ಸಿ.ಎಂ.ರಾಜೇಶ್ಗೌಡ ಹಾಗೂ ಜೆ.ಡಿ.ಎಸ್. ಪಕ್ಷದ ಅಮ್ಮಾಜಮ್ಮ ತಮ್ಮ ಮನೆಗಳಲ್ಲಿ ಕೂತು ಲಭ್ಯವಾಗುವ ಮತಗಳ ಲೆಕ್ಕಾಚಾರ ನಡೆಸುತ್ತಿದ್ದರೆ ಇನ್ನೊಂದೆಡೆ ಪಕ್ಷಗಳ ಕಾರ್ಯಕರ್ತರು ಸೋಲು-ಗೆಲುವಿನ ಲೆಕ್ಕಾಚಾರಗಳಿಗೆ ಸವಾಲು ಹಾಕುವ ಮಾತುಗಳನ್ನಾಡುತ್ತಿದ್ದಾರೆ.
ಜೆ.ಡಿ.ಎಸ್. ಪಕ್ಷದ ಅಮ್ಮಾಜಮ್ಮನಿಗೆ ಇದೊಮದು ಹೊಸ ಅನುಭವ. ಎಂದೂ ಕೂಡಾ ಚುನಾವಣೆಯ ಅಕಾಡದಲ್ಲಿ ಕಾಣಿಸಿಕೊಳ್ಳದ ಅವರು ಪ್ರಚಾರದ ಅಬ್ಬರದಿಂದ ಮುಕ್ತಿಯಾಗಿ ಇದೀಗ ಬೂವನಹಳ್ಳಿ ಗ್ರಾಮದ ತಮ್ಮ ಸ್ವಗೃಹದಲ್ಲಿ ಮೊಮ್ಮಕ್ಕಳೊಂದಿಗೆ ಆಟವಾಡಿಕೊಂಡಿದ್ದಾರೆ.
ಕಾಂಗ್ರೆಸ್ ಪಕ್ಷ ಅಭ್ಯರ್ಥಿ ಟಿ.ಬಿ.ಜಯಚಂದ್ರ ನುರಿತ ರಾಜಕಾರಣಿಯೂ ಹೌದು. ಸೋಲು-ಗೆಲುವಿನ ಲೆಕ್ಕಾಚಾರ ಹಾಇಕೊಂಡ ನಂತರ ಬೆಂಗಳೂರಿನ ತಮ್ಮ ಸ್ವಗೃಹದಲ್ಲಿ ಸಕುಟುಂಬದೊಂದಿಗೆ ವಿಶ್ರಾಂತಿಗೆ ಜರುಗಿದ್ದಾರೆ. ಇನ್ನೊಂದೆಡೆ ಬಿ.ಜೆ.ಪಿ. ಪಕ್ಷದ ಅಭ್ಯರ್ಥಿ ಡಾ.ಸಿ.ಎಂ.ರಾಜೇಶ್ಗೌಡ ಕೂಡಾ ಶುಕ್ರವಾರ ಬೆಂಗಳೂರಲ್ಲಿ ನಡೆದ ಪಕ್ಷದ ಸಭೆಯಲ್ಲಿ ಪಾಲ್ಗೊಂಡ ನಂತರ ಮನೆಯಲ್ಲಿ ಕುಟುಂಬದೊಂದಿಗೆ ವಿಶ್ರಾಂತಿ ಪಡೆಯುತ್ತಿದ್ದಾರೆ. ಎಲ್ಲಾ ಅಭ್ಯರ್ಥಿಗಳು ಕೊಂಚ ವಿಶ್ರಾಂತಿ ಪಡೆಯುತ್ತಿದ್ದರೂ ಕೂಡ ನ:10 ರಂದು ನಡೆಯುವ ಮತ ಎಣಿಕೆಯ ಬಗ್ಗೆ ಆತಂಕದ ಮಡುವಿನಲ್ಲೂ ಇದ್ದಾರೆ.
ಕಟಾವಿಗೆ ಬಂದ ಶೇಂಗಾವನ್ನು ಮರೆತು ಚುನಾವಣೆಗೆ ಧುಮುಕಿದ ಮಂದಿ :
ಅತ್ತ ಶೇಂಗಾ, ರಾಗಿ ಬೆಳೆ ಕಟಾವಿಗೆ ಬಂದು ಕೂತಿದ್ದರೆ, ಇನ್ನೊಂದೆಡೆ ಹಸನು ಮಾಡಿಟ್ಟ ಬೆಳೆಯನ್ನು ಮಾರಲು ಕೂಡಾ ಮಾರುಕಟ್ಟೆಗೆ ಕೊಂಡಯ್ಯಲಾಗದೆ ಅನೇಕ ಮಂದಿ ರೈತರು, ಕೆಲ ಸಣ್ಣಪುಟ್ಟ ವ್ಯಾಪಾರಸ್ಥರು ಕೂಡಾ ಕೂಲಿಯಾಗಿ ಹಣವಾದರೂ ಸಿಗುತ್ತದೆ ಎಂಬ ದೃಷ್ಠಿಯಿಂದ ಪಕ್ಷದ ಮುಖಂಡರೊಟ್ಟಿಗೆ ಕ್ಷೇತ್ರದ ತುಂಬಾ ಬಾಚುಟವಿಡಿದು ಜೈಕಾರಗಳನ್ನು ಕೂಗುತ್ತಾ ಓಡಾಡಿ ಕಾಲು ಸವೆಸಿಕೊಂಡರು.
ಟೆಂಪಲ್ ರನ್:
ಅಭ್ಯರ್ಥಿಗಳಂತೂ ಮತದಾರ ಪ್ರಭುವಿಗೆ ಕೈ ಮುಗಿದು ಸಾಕಾಗಿ ಸಾಕಪ್ಪ ಚುನಾವಣೆಯ ಸಹವಾಸ … ಎಂದು ವಿಶ್ರಾಂತಿಗೆ ಜಾರಿದರೆ ಇತ್ತ ವಿವಿಧ ಪಕ್ಷದ ಮುಖಂಡರು-ಕಾಗೂ ಕೆಲ ಕಾರ್ಯಕರ್ತರು ತಮ್ಮ ಅಭ್ಯರ್ಥಿಯ ಗೆಲುವಿಗಾಗಿ ಟೆಂಪಲ್ ರನ್ ಮಾಡುತ್ತಿದ್ದಾರೆ.
ಜೆ.ಡಿ.ಎಸ್. ಪಕ್ಷದ ಅನೇಕ ಮುಖಂಡರು ಅಮ್ಮಾಜಮ್ಮನವರ ಗೆಲುವಿಗಾಗಿ ವರ ಬೇಡಲು ಶಿರಡಿ ಸತ್ಯಸಾಯಿಬಾಬಾ ಮೊರೆ ಹೊಕ್ಕರೆ ಕಾಂಗ್ರೆಸ್ ಪಕ್ಷದ ಕೆಲ ಮುಖಂಡರು ಧರ್ಮಸ್ಥಳದ ಮಂಜುನಾಥಸ್ವಾಮಿ, ಉಡುಪಿಯ ಶ್ರೀಕೃಷ್ಣನ ಮೊರೆ ಹೊಕ್ಕಿದ್ದಾರೆ. ಬಿ.ಜೆ.ಪಿ. ಪಕ್ಷದ ಕೆಲ ಮುಖಂಡರು ತಿರುಪತಿ ತಿರುಮಲ ಶ್ರೀನಿವಾಸ ಧರ್ಶನ ಮಾಡಲು ಸಜ್ಜಾಗಿದ್ದಾರೆ.
ನಗರವೂ ಸೇರಿದಂತೆ ಗ್ರಾಮೀಣ ಭಾಗದ ಅನೇಕ ಹಿರಿಯರು, ಯುವಕರು ಎಂದೆಂದೂ ಕೂಡಾ ಪಕ್ಷಗಳ ಬಾವುಟವನ್ನೂ ಹಿಡಿಯದವರು ಅದೇನಾಗುತ್ತೋ ನೋಡಿಯೇ ಬಿಡೋಣ….. ಎಂದು ಅಬ್ಬರಿಸಿ ಬೊಬ್ಬಿರಿದರು. ಹಣದ ಆಸೆಗೋ ಇಲ್ಲವೇ ಆ ಪಕ್ಷದಲ್ಲಿ ದೊರೆಯದ ಸ್ಥಾನನಾನಗಳ ಕೊರತೆಯಿಂದಲೋ ಒಟ್ಟಾರೆ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಪಕ್ಷಾಂತರಗೊಂಡ ಕೆಲವರು ತಾವು ಸೇರ್ಪಡೆಗೊಂಡ ಪಕ್ಷದಲ್ಲಿ ಒಲ್ಲದ ಮನಸ್ಸಿನಿಂದಲೇ ಪ್ರಾಮಾಣಿಕತೆ ಮೆರೆಯುವ ಪ್ರಯತ್ನವನ್ನೂ ಮಾಡಿದರು.
ಕಷ್ಟಪಟ್ಟು ದುಡಿದದ್ದೇ ನಮಗಿರುವುದಿಲ್ಲ, ಇನ್ನೂ ಯಾರೋ ಪುಕ್ಕಟೆಯಾಗಿ ಕೊಟ್ಟ ಕಾಂಚಣವಾದರೂ ಎಷ್ಟು ದಿನವಿರಲು ಸಾದ್ಯ ಎಂಬ ಮಾತು ಬೆರಳೆಣಿಕೆಯ ಜನರಲ್ಲಿ ಕಂಡು ಬಂದರೂ ದಿನನಿತ್ಯ ಕೂಲಿಯಂತೆ ನೀಡುತ್ತಿದ್ದ ಚುನಾವಣಾ ಪ್ರಚಾರದ ಭಕ್ಷೀಸು ಬಹುತೇಕ ಗ್ರಾಮೀಣರ ತಲೆಯನ್ನೇ ಕೆಡಿಸಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ