ಶಿರಸಿ
ಶಿರಸಿ ಕಾ ಮಹಾರಾಜ್ ಎಂದೇ ಕರೆಯಲ್ಪಡುವ ಅಯ್ಯಪ್ಪ ನಗರದ ಗಣಪತಿ ಮೂರ್ತಿಯ ಪ್ರತಿಷ್ಠಾಪನೆಗೆ ಟ್ರಾಲಿಯನ್ನು ಮಂಗಳವಾರ ಲೋಕಾರ್ಪಣೆಗೊಳಿಸಲಾಯಿತು.
ನಗರದ ಶ್ರೀ ಭೂತೇಶ್ವರ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕ ವಿನಾಯಕ ಶೆಟ್ಟಿ ತಮ್ಮ ತಂದೆ ಹಾಗೂ ಸಹಕಾರಿ ಸಂಘದ ಸಂಸ್ಥಾಪಕ ದಿ.ವಸಂತ ಶೆಟ್ಟಿಯವರ ನೆನಪಿನಲ್ಲಿ ೧ ಲಕ್ಷ ರೂ ದೇಣಿಗೆ ನೀಡಿದ್ದು, ಅದನ್ನು ವಿದ್ಯುಕ್ತವಾಗಿ ಪೂಜೆ ಮಾಡಿ ಬಳಕೆಗೆ ಅನುಕೂಲ ಮಾಡಿಕೊಡಲಾಯಿತು.
ಕಳೆದ ವರ್ಷ 13 ಅಡಿ ಎತ್ತರದ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಜಿಲ್ಲೆಯಲ್ಲೇ ಅತಿ ಎತ್ತರದ ಮೂರ್ತಿ ಮಾಡಿದ್ದ ಅಯ್ಯಪ್ಪ ನಗರದ ಶಿರಸಿ ಕಾ ಮಹಾರಾಜ್ ಶ್ರೀ ಗಜಾನನೋತ್ಸವ ಸಮಿತಿಯಿಂದ ಈ ಬಾರಿ 15 ಅಡಿ ಎತ್ತರದ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ಅದಕ್ಕೆ ಟ್ರಾಲಿಯನ್ನೂ ಸಹ ನಿರ್ಮಾಣ ಮಾಡಲಾಗಿದೆ. ಅದನ್ನು ಮೊದಲಿಗೆ ಅಯ್ಯಪ್ಪ ನಗರದಲ್ಲಿ ಪೂಜೆ ಮಾಡಿ ಬಳಿಕ ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಯಿತು. ಈ ವೇಳೆ ಶಿರಸಿ ಕಾ ಮಹಾರಾಜ್ ಶ್ರೀ ಗಜಾನನೋತ್ಸವ ಸಮಿತಿಯ ಅಧ್ಯಕ್ಷ ಭಾಸ್ಕರ ಮಡಗಾಂವಕರ, ಭೂತೇಶ್ವರ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕ ವಿನಾಯಕ ಶೆಟ್ಟಿ ಸೇರಿದಂತೆ ಪ್ರಮುಖರು ಇದ್ದರು.








