ಬೆಂಗಳೂರು:
ಕನ್ನಡದ ಮೇರು ಸಾಹಿತಿ, ಕಾದಂಬರಿಕಾರ ಡಾ.ಎಸ್.ಎಲ್.ಭೈರಪ್ಪ ಅವರ ಹೆಸರಿನ ಪ್ರತಿಷ್ಠಾನ ಜೂನ್ 14ರಂದು ಬೆಂಗಳೂರಿನಲ್ಲಿ ಉದ್ಘಾಟನೆಯಾಗಲಿದೆ. ಭೈರಪ್ಪನವರ ಸಮಾಜಮುಖಿ ಕಾರ್ಯಗಳ ಹಾಗೂ ಯೋಜನೆಗಳನ್ನು ಜಾರಿಗೆ ತರಲು ಸ್ಥಾಪಿಸಲಾಗುತ್ತಿರುವ ʼಡಾ. ಎಸ್. ಎಲ್. ಭೈರಪ್ಪ ಪ್ರತಿಷ್ಠಾನ (ರಿ)ʼದ ಉದ್ಘಾಟನೆ ಜೂನ್ 14 ಶನಿವಾರ ನೆರವೇರಲಿದೆ ಎಂದು ಪ್ರತಿಷ್ಠಾನದ ಪ್ರಮುಖರಲ್ಲಿ ಒಬ್ಬರಾದ ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ತಿಳಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಶತಾವಧಾನಿ ಆರ್. ಗಣೇಶ ಅವರು ಈ ಕಾರ್ಯಕ್ರಮವನ್ನು ನೆರವೇರಿಸಲಿದ್ದಾರೆ.
ʼಇನ್ನೆರಡು ತಿಂಗಳು ಕಳೆದರೆ, ಡಾ.ಎಸ್.ಎಲ್.ಭೈರಪ್ಪನವರಿಗೆ ತೊಂಬತ್ತೈದು ತುಂಬುತ್ತದೆ. ಈ ವಯಸ್ಸಿನಲ್ಲೂ ಅವರ ಉತ್ಸಾಹ ಬತ್ತಿಲ್ಲ. ದಿನವೂ ಓದುತ್ತಾರೆ, ಓಡಾಡುತ್ತಾರೆ, ಬರೆಯುತ್ತಾರೆ. ತಾನು ಉಪಕಾರ ಪಡೆದ ಈ ಸಮಾಜಕ್ಕಾಗಿ ಏನಾದರೂ ಮಾಡಬೇಕು ಎಂಬ ತುಡಿತ. ಅದಕ್ಕಾಗಿ ಹತ್ತಾರು ಕನಸುಗಳನ್ನು ಕಾಣುತ್ತಿರುತ್ತಾರೆ. ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ.ʼ
ʼಇವೆಲ್ಲವನ್ನೂ ಕಾರ್ಯರೂಪಕ್ಕೆ ತರಲು, ಅವರ ಕೋರಿಕೆಯ ಮೇರೆಗೆ, ನಾವು ಅವರ ಹೆಸರಿನಲ್ಲಿ “ಡಾ.ಎಸ್.ಎಲ್.ಭೈರಪ್ಪ ಪ್ರತಿಷ್ಠಾನ (ರಿ)”ವನ್ನು ಸ್ಥಾಪಿಸಿದ್ದೇವೆ. ಈ ಪ್ರತಿಷ್ಠಾನದ ಉದ್ಘಾಟನೆ ಶನಿವಾರ, 14 ಜೂನ್ ರಂದು ನೆರವೇರಲಿದೆ. ಮಾಜಿ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಮತ್ತು ಶ್ರೀ ಶತಾವಧಾನಿ ಗಣೇಶ ಅವರು ಅಂದು ಈ ಕಾರ್ಯಕ್ರಮವನ್ನು ನೆರವೇರಿಸಲಿದ್ದಾರೆ. ವಿಶೇಷವೆಂದರೆ, ಡಾ.ಎಸ್.ಎಲ್.ಭೈರಪ್ಪನವರು ಕೂಡ ಅಂದು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ದಯವಿಟ್ಟು ನೀವು ಸಹ ಅಂದು ನಮ್ಮೊಂದಿಗೆ ಇರಬೇಕು ಎಂದು ಕೋರುತ್ತೇನೆ.ʼ
ಜೂನ್ 14ರಂದು ಸಂಜೆ 5 ಗಂಟೆಗೆ ಬೆಂಗಳೂರಿನ ಬಸವನಗುಡಿ ರಸ್ತೆಯ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಅಧ್ಯಕ್ಷತೆಯನ್ನು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಹಿಸಲಿದ್ದು, ಸಹನಾ ವಿಜಯಕುಮಾರ್ ಪ್ರಸ್ತಾವನೆ ಮಾಡಲಿದ್ದಾರೆ. ಭೈರಪ್ಪನವರ ಕೃತಿಗಳಲ್ಲಿ ಮೌಲ್ಯಮೀಮಾಂಸೆ ಬಗ್ಗೆ ಶತಾವಧಾನಿ ಗಣೇಶ್ ಉಪನ್ಯಾಸ ನೀಡಲಿದ್ದಾರೆ. ಎಸ್ಎಲ್ ಭೈರಪ್ಪ, ತೇಜಸ್ವಿನಿ ಅನಂತಕುಮಾರ್, ವಿಶ್ವೇಶ್ವರ ಭಟ್, ಕೃಷ್ಣಪ್ರಸಾದ್ ಹಾಗೂ ಅರುಣ ಉಪಸ್ಥಿತರಿರುತ್ತಾರೆ.
