ಹಸಿರು ತುಮಕೂರು ಮಾಡುವ ಹಸಿರೀಕರಣ

ತುಮಕೂರು
ವಿಶೇಷ ವರದಿ :ರಾಕೇಶ್.ವಿ.

      ನಗರದಲ್ಲಿನ ವಿವಿಧ ಪಾರ್ಕುಗಳನ್ನು ಮಹಾನಗರ ಪಾಲಿಕೆಯಿಂದ ಅಭಿವೃದ್ಧಿ ಪಡಿಸಿದರಾದರೂ ಅವುಗಳಲ್ಲಿ ಇನ್ನಷ್ಟು ಅಭಿವೃದ್ಧಿ ಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಹಾಗೂ ತುಮಕೂರು ನಗರವನ್ನು ಹಸಿರು ನಗರವನ್ನಾಗಿ ಮಾಡುವ ಉದ್ದೇಶವಿಟ್ಟುಕೊಂಡು ಸ್ಮಾರ್ಟ್ ಸಿಟಿ ವತಿಯಿಂದ ಬರೊಬ್ಬರಿ 25 ಕೋಟಿ ರೂ ವರೆಗೆ ಖರ್ಚು ಮಾಡಲಾಗುತ್ತಿದೆ.
      ನೆರೆಹೊರೆಯ ನಿವಾಸಿಗಳಿಗೆ ಪರಸ್ಪರ ಸಂವಹನ ನಡೆಸಲು ಮತ್ತು ಹೊಸ ಜನರನ್ನು ಭೇಟಿ ಮಾಡಲು ಉದ್ಯಾನವನಗಳು ಅವಕಾಶ ಕಲ್ಪಿಸುತ್ತವೆ. ಉದ್ಯಾನವನಗಳು ಜನರಿಗೆ ಮತ್ತು ಮಕ್ಕಳಿಗೆ ಮನರಂಜನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಹ ಉತ್ತಮ ಸ್ಥಳಗಳಾಗಿದ್ದು, ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಮಹಾನಗರ ಪಾಲಿಕೆಯು ತೋರ್ಪಡಿಸಿದ ಉದ್ಯಾನವನಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ.
     ನಗರದಲ್ಲಿನ ಉದ್ಯಾನವನಗಳಲ್ಲಿ ಆಯ್ದ ಉದ್ಯಾನವನಗಳಿಗೆ ಹರಾಜು ಮಾಡುವ ಮೂಲಕ ಒಂದೊಂದು ಉದ್ಯಾನವನಕ್ಕೆ ಸ್ಥಳ, ಮಾಡಬೇಕಾದ ಅಭಿವೃದ್ಧಿ, ಹಾಗೂ ಅಳವಡಿಸುವ ಘಟಕಗಳ ಆಧಾರದ ಮೇಲೆ ಇಂತಿಷ್ಟು ಹಣ ನಿರ್ಧಾರ ಮಾಡಿ, ನಿಗಧಿತ ಸಮಯದೊಳಗೆ ಪೂರ್ಣಗೊಳಿಸಲಾಗುತ್ತಿದೆ. ಈಗಾಗಲೇ ಮೂರು ಉದ್ಯಾನವನಗಳಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿದ್ದು, 10 ಉದ್ಯಾನವನಗಳಿಗೆ ಟೆಂಡರ್ ಮಾಡಲಾಗಿದೆ.     
ಮೂರು ಉದ್ಯಾನವನಗಳ ಅಭಿವೃದ್ಧಿ
    ಕುವೆಂಪುನಗರ, ಸೋಮೇಶ್ವರಪುರಂ, ಆದರ್ಶನಗರದಲ್ಲಿ ಈಗಾಗಲೇ ಉದ್ಯಾನವನಗಳ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ.  ಶಿವರಾಮ್ ಕನ್ಸಟ್ರಕ್ಷನ್ಸ್‍ನವರು ಆದರ್ಶನಗರದ ಉದ್ಯಾನವನ್ನು 79.5 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸುತ್ತಿದ್ದಾರೆ. ಆರ್‍ಎಸ್ ಇನ್‍ಫ್ರಾಸ್ಟಕ್ಚರ್‍ನವರು 37 ಲಕ್ಷ ರೂ.ನಲ್ಲಿ ಕುವೆಂಪುನಗರದ ಉದ್ಯಾನವನ ಹಾಗೂ 29.05 ಲಕ್ಷ ರೂನಲ್ಲಿ ಸೋಮೇಶ್ವರ ಪುರಂನ ಉದ್ಯಾನವನವನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ.
ವಿಷಯಾಧಾರಿತ ಉದ್ಯಾನವನಗಳು
     ನಗರದಲ್ಲಿ ಅಭಿವೃದ್ಧಿ ಮಾಡಲಾಗುತ್ತಿರುವ ಉದ್ಯಾನವನಗಳನ್ನು ವಿಷಯಾಧಾರಿತವಾಗಿ ಮಾಡುತ್ತಿದ್ದು, ಮಹಿಳಾ ಸಂಬಂಧಿತ ಉದ್ಯಾನವನ, ವಿಜ್ಞಾನ ಸಂಬಂಧಿತ ಉದ್ಯಾನವನ, ಶಿಲ್ಪಿಗಳ ಉದ್ಯಾನವನ, ಫಿಟ್ನೆಸ್‍ಗೆ ಸಂಬಂಧಿತ ಉದ್ಯಾನವನ, ವಿವಿಧ ಹೂಗಳ ಉದ್ಯಾನವನ, ಸಾಮಾಜಿಕ ಜಾಲತಾಣಗಳ ಸಂಬಂಧಿತ ಉದ್ಯಾನವನ, ಹಸಿರು ಉದ್ಯಾನವನ, ವಾಟರ್ ಪಾರ್ಕ್ ಹೀಗೆ ವಿವಿಧ ವಿಷಯಾಧಾರಿತ ಉದ್ಯಾನವನಗಳನ್ನಾಗಿ ಮಾರ್ಪಡಿಸಲಾಗುವುದು.
ಟೆಂಡರ್ ಆಗಿರುವ ಉದ್ಯಾನವನಗಳು
     ವಿವಿಧ ಉದ್ಯಾನವನಗಳ ಅಭಿವೃದ್ಧಿಗೆ ಟೆಂಡರ್ ಪೂರ್ಣಗೊಂಡಿದ್ದು ಅದರಲ್ಲಿ ಅಮರಜ್ಯೋತಿನಗರದ ಉದ್ಯಾನವನ, ಜಯನಗರದ ಉದ್ಯಾನವನ, ಸಪ್ತಗಿರಿ ಬಡಾವಣೆ, ಗೋಕುಲ ಬಡಾವಣೆಯಲ್ಲಿ ಮಂದಾರ ಉದ್ಯಾನವನ, ಮಹಾಲಕ್ಷ್ಮೀ ನಗರದ ಉದ್ಯಾನವನದ ಪಾರ್ಕ್‍ಗಳಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ.                                                                                                                 
ಟೆಂಡರ್ ಆಗಬೇಕಾದ ಉದ್ಯಾನವನಗಳು
       ದೇವರಾಯಪಟ್ಟಣದ ಉದ್ಯಾನವನ, ಗೋಕುಲಬಡಾವಣೆಯಲ್ಲಿ ಒಂದು ಉದ್ಯಾನವನ, ಮಂಜುನಾಥ ನಗರ, ಮರಳೇನಹಳ್ಳಿ, ಶಿವರಾಮಕಾರಂತ ಉದ್ಯಾನವನ, ಎಸ್‍ಎಸ್‍ಪುರಂ, ಸುಕೃತ ಆಸ್ಪತ್ರೆ ಹಿಂಭಾಗದ ಉದ್ಯಾನವನ, ಗಂಗೋತ್ರಿ ರಸ್ತೆಯಲ್ಲಿರುವ ಉದ್ಯಾನವನ, ಗಂಗಸಂದ್ರದ ಜಿಎಸ್‍ಬಿ ಉದ್ಯಾನವನ ಹಾಗೂ ಸದಾಶಿವನಗರದ ಉದ್ಯಾನವನಗಳನ್ನು ಅಭಿವೃದ್ಧಿಗೊಳಿಸಲು ಆಯ್ಕೆ ಮಾಡಲಾಗಿದ್ದು, ಅವುಗಳಿಗೆ ಟೆಂಡರ್ ಮಾಡಬೇಕಿದೆ.
ಮಹಿಳಾ ಸಂಬಂಧಿತ ಉದ್ಯಾನವನಗಳು
     ನಗರದಲ್ಲಿ ಕೆಲ ಉದ್ಯಾನವನಗಳನ್ನು ವುಮೆನ್ಸ್ ಥೀಮ್ ಪಾರ್ಕ್ ಎಂದು ಯೋಜನೆ ರೂಪಿಸಲಾಗಿದ್ದು, ಇದರ ಅಡಿಯಲ್ಲಿ ಅಭಿವೃದ್ಧಿ ಪಡಿಸಲಾಗುವ ಉದ್ಯಾನವನಗಳಲ್ಲಿ ಮಹಿಳಾ ಹೋರಾಟಗಾರರ ಭಾವಚಿತ್ರ ಹಾಗೂ ಅವರಿಗೆ ಸಂಬಂಧಿಸಿದ ಮಾಹಿತಿ ಪ್ರದರ್ಶನವಾಗುವಂತೆ ಇರುತ್ತದೆ. ಜಿಲ್ಲೆಯ ಹಾಗೂ ರಾಜ್ಯದ ಮಹಿಳಾ ಕವಿಯಿತ್ರಿ ಸೇರಿದಂತೆ ಕರ್ನಾಟಕದ ಮಹಾರಾಣಿಯರು ಮುಂತಾದವರ ಬಗ್ಗೆ ಮಾಹಿತಿ ಪ್ರಚುರ ಪಡಿಸಲಾಗುತ್ತದೆ.
ಫಿಟ್‍ನೆಸ್ ಥೀಮ್ ಪಾರ್ಕ್
     ಕೆಲ ಉದ್ಯಾನವನಗಳಲ್ಲಿ ಫಿಟ್‍ನೆಸ್ ಥೀಮ್ ಪಾರ್ಕ್ ಆಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಈ ಉದ್ಯಾನವನಗಳಲ್ಲಿ ಜಿಮ್‍ಗೆ ಸಂಬಂಧಿಸಿದ ಉಪಕರಣಗಳನ್ನು ಅಳವಡಿಸಲಾಗುವುದು. ಖಾಸಗಿ ಜಿಮ್ ಟ್ರೈನಿಂಗ್ ಸೆಂಟರ್‍ಗಳಲ್ಲಿ ಹಣ ಕೊಟ್ಟು ಹೋಗುವುದರ ಬದಲಾಗಿ ಈ ಉದ್ಯಾನವನಗಳಲ್ಲಿ ಉಚಿತವಾಗಿ ಜಿಮ್ ಮಾಡಬಹುದಾಗಿದೆ. 
ಸೈನ್ಸ್ ಹಾಗೂ ಆರ್ಕಿಟೆಕ್ಚರ್ ಥೀಮ್ ಪಾರ್ಕ್
      ಕೆಲ ಪಾರ್ಕ್‍ಗಳಲ್ಲಿ ಸೈನ್ಸ್ ಥೀಮ್ ಎಂದರೆ ವಿಜ್ಞಾನಕ್ಕೆ ಸಂಬಂಧಿಸಿದ ಉಪಕರಣಗಳನ್ನು ಅಳವಡಿಸುವುದು. ಭೌತಶಾಸ್ತ್ರದ ಪ್ರಯೋಗಗಳ ವಸ್ತುಗಳನ್ನು ಪ್ರದರ್ಶನ ಮಾಡುವುದು ಸೇರಿದಂತೆ ಮಕ್ಕಳಿಗೆ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವ ರೀತಿಯಲ್ಲಿ ಅಭಿವದ್ಧಿ ಪಡಿಸಲಾಗುವುದು. ಅದೇ ರೀತಿ ನಮ್ಮ ರಾಜ್ಯದ ವಿವಿಧ ಶಿಲೆಗಳನ್ನು ಅಳವಡಿಸುವ ಮೂಲಕ ಶಿಲೆಗಳನ್ನೇ ವಿಷಯವಸ್ತುವನ್ನಾಗಿರಿಸಿಕೊಂಡು ಅಭಿವೃದ್ಧಿ ಮಾಡಲಾಗುವುದು.
ಹೂಗಳ ಉದ್ಯಾನವನ
     ಹೂಗಳ ಉದ್ಯಾನವನದಲ್ಲಿ ವಿವಿಧ ರೀತಿಯ ಹೂವಿನ ಗಿಡಗಳನ್ನು ಬೆಳೆಸುವ ಮೂಲಕ ಉದ್ಯಾನವನದ ತುಂಬಾ ವಿಶಿಷ್ಠವಾದ ಹೂಗಳನ್ನು ಪ್ರದರ್ಶಿಸಲಾಗುವುದು. ಬೆಂಗಳೂರಿನ ಲಾಲ್‍ಬಾಗ್‍ನಲ್ಲಿ ಕಂಡು ಬರುವಂತೆ ತುಮಕೂರಿನ ಉದ್ಯಾನವನವನ್ನು ಅಭಿವೃದ್ಧಿ ಮಾಡಲಾಗುವುದು 

Recent Articles

spot_img

Related Stories

Share via
Copy link
Powered by Social Snap