ಮುಂಬೈ:
ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ 4 ಮಂದಿ ಆಟಗಾರರನ್ನು ಭ್ರಷ್ಟಚಾರ ಆರೋಪದ ಹಿನ್ನೆಲೆ ಶುಕ್ರವಾರ ಅಸ್ಸಾಂ ಕ್ರಿಕೆಟ್ ಅಸೋಸಿಯೇಷನ್ ಅಮಾನತುಗೊಳಿಸಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI) ಭ್ರಷ್ಟಾಚಾರ ನಿಗ್ರಹ ಮತ್ತು ಭದ್ರತಾ ಘಟಕ ಈ ಕುರಿತು ಈಗಾಗಲೇ ತನಿಖೆ ಕೈಗೆತ್ತಿಕೊಂಡಿದೆ. ತನಿಖೆ ಸಂಪೂರ್ಣವಾಗಿ ಮುಗಿಯುವವರೆಗೆ ಕ್ರಿಕೆಟ್ಗೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳಿಂದ ಅವರನ್ನು ಅಮಾನತುಗೊಳಿಸಲಾಗಿದೆ. ಭ್ರಷ್ಟಾಚಾರದಲ್ಲಿ ಭಾಗಿಯಾದ ಮಾಹಿತಿ ಬಂದ ಕೂಡಲೇ ಅಸ್ಸಾಂ ಕ್ರಿಕೆಟ್ ಅಸೋಸಿಯೇಷನ್ ಅಮಿತ್ ಸಿನ್ಹಾ, ಇಶಾನ್ ಅಹ್ಮದ್, ಅಮನ್ ತ್ರಿಪಾಠಿ ಮತ್ತು ಅಭಿಷೇಕ್ ಠಾಕೂರಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ.
ಅಮಾನತುಗೊಂಡಿರುವ ಈ ಆಟಗಾರರು ವಿವಿಧ ಹಂತಗಳಲ್ಲಿ ಅಸ್ಸಾಂ ತಂಡವನ್ನು ಪ್ರತಿನಿಧಿಸಿದ್ದು, ಲಖನೌದಲ್ಲಿ ನವೆಂಬರ್ 26ರಿಂದ ಡಿಸೆಂಬರ್ 8ರವರೆಗೆ ನಡೆದ ಈ ಬಾರಿಯ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ವೇಳೆ ಅಸ್ಸಾಂ ತಂಡದ ಆಟಗಾರರನ್ನು ಮ್ಯಾಚ್ ಫಿಕ್ಸಿಂಗ್ನಲ್ಲಿ ತೊಡಗಿಸಿಕೊಳ್ಳಲು ಪ್ರಚೋಧನೆ ನೀಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಈ ಕುರಿತು ಅಸ್ಸಾಂ ಕ್ರಿಕೆಟ್ ಅಸೋಸಿಯೇಷನ್ ಕಾರ್ಯದರ್ಶಿ ಸನಾತನ್ ದಾಸ್ ಮಾತನಾಡಿ, “ಆರೋಪಗಳು ಬೆಳಕಿಗೆ ಬಂದ ನಂತರ, ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಮತ್ತು ಭದ್ರತಾ ಘಟಕವು ತನಿಖೆ ನಡೆಸಿತು. ಎಸಿಎ ಕ್ರಿಮಿನಲ್ ಮೊಕದ್ದಮೆಗಳನ್ನು ಸಹ ಪ್ರಾರಂಭಿಸಿದೆ. ಪ್ರಾಥಮಿಕವಾಗಿ, ಕ್ರೀಡೆಯ ಸಮಗ್ರತೆಯ ಮೇಲೆ ಪರಿಣಾಮ ಬೀರುವ ಗಂಭೀರ ದುಷ್ಕೃತ್ಯದಲ್ಲಿ ಅವರು ಭಾಗಿಯಾಗಿರುವುದು ಕಂಡುಬರುತ್ತದೆ. ಪರಿಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆಯನ್ನು ಕಡಿಮೆ ಮಾಡಲು ಅವರನ್ನು ಅಮಾನತುಗೊಳಿಸಲಾಗಿದೆ. ತನಿಖೆಯ ಅಂತಿಮ ವರದಿ ಅಥವಾ ಸಂಸ್ಥೆಯ ಯಾವುದೇ ಮುಂದಿನ ನಿರ್ಧಾರದವರೆಗೆ ಅಮಾನತು ಮುಂದುವರಿಯುತ್ತದೆ. ಎಲ್ಲಾ ಜಿಲ್ಲಾ ಸಂಸ್ಥೆಗಳು ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಎಸಿಎ ನಿರ್ಧಾರವನ್ನು ತಮ್ಮ ವ್ಯಾಪ್ತಿಯಲ್ಲಿರುವ ಕ್ಲಬ್ಗಳು ಮತ್ತು ಅಕಾಡೆಮಿಗಳಿಗೆ ತಿಳಿಸಲು ನಿರ್ದೇಶಿಸಲಾಗಿದೆ,” ಎಂದು ಹೇಳಿದರು.
ಅಮಾನತುಗೊಂಡ ಆಟಗಾರರು ಈಗ ಎಸಿಎ, ಅದರ ಜಿಲ್ಲಾ ಘಟಕಗಳು ಅಥವಾ ಅಂಗಸಂಸ್ಥೆ ಕ್ಲಬ್ಗಳು ನಿರ್ವಹಿಸುವ ಯಾವುದೇ ರಾಜ್ಯ ಮಟ್ಟದ ಟೂರ್ನಿಗಳು ಅಥವಾ ಪಂದ್ಯಗಳಲ್ಲಿ ಭಾಗವಹಿಸುವುದನ್ನು ನಿಷೇಧಿಸಲಾಗಿದೆ. ಈ ನಿರ್ಬಂಧವು ಪ್ರಸ್ತುತ ಅಮಾನತು ಅವಧಿಯಲ್ಲಿ ಮ್ಯಾಚ್ ರೆಫರಿ, ಕೋಚ್ ಅಥವಾ ಅಂಪೈರ್ ಪಾತ್ರಗಳು ಸೇರಿದಂತೆ ಯಾವುದೇ ಕ್ರಿಕೆಟ್ ಸಂಬಂಧಿತ ಚಟುವಟಿಕೆಗಳಿಗೆ ವಿಸ್ತರಿಸುತ್ತದೆ. ಎಸಿಎಯ ನಿರ್ಧಾರವು ಆಟದ ಮಾನದಂಡಗಳಿಗೆ ಮತ್ತಷ್ಟು ಅಡ್ಡಿ ಅಥವಾ ರಾಜಿ ಮಾಡಿಕೊಳ್ಳುವುದನ್ನು ತಡೆಯುವ ಗುರಿಯನ್ನು ಹೊಂದಿದೆ.
ಇನ್ನು ಲಖನೌದಲ್ಲಿ ಲೀಗ್ ಹಂತದ ಪಂದ್ಯಗಳನ್ನು ಪೂರ್ಣಗೊಳಿಸಿದ ಅಸ್ಸಾಂ ತಂಡ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಸೂಪರ್ ಲೀಗ್ ಹಂತಕ್ಕೆ ಅರ್ಹತೆ ಪಡೆಯುವಲ್ಲಿ ವಿಫಲವಾಯಿತು.








