ನನಗೆ ಡ್ರಗ್ಸ್‌ ನೀಡಿ ಕರೆ ತಂದಿದ್ದಾರೆ : ಪೊಲೀಸ್‌ ವಿಚಾರಣೆ ವೇಳೆ ಸೋನಂ ಹೈಡ್ರಾಮಾ!

ನವದೆಹಲಿ: 

     ಸುಮಾರು ಒಂದು ವಾರಗಳ ಕಾಲ ನಡೆದ ಇಂದೋರ್ ಮೂಲದ ನವ ದಂಪತಿಯ ನಾಪತ್ತೆ  ಪ್ರಕರಣವನ್ನು ಇದೀಗ ಪೊಲೀಸರು ಭೇದಿಸಿದ್ದಾರೆ. ಪತ್ನಿ ಸೋನಮ್ ರಘುವಂಶಿಯೇ ಪತಿ ರಾಜಾ ರಘುವಂಶಿಯನ್ನು  ಕೊಂದಿರುವ ಶಂಕೆ ವ್ಯಕ್ತವಾಗಿರುವುದರಿಂದ ಆಕೆಯನ್ನು ಬಂಧಿಸಲಾಗಿದೆ. ಇದರಲ್ಲಿ ಆಕೆಯ ಸ್ನೇಹಿತ ರಾಜ್ ಕುಶ್ವಾಹ ಕೂಡ ಭಾಗಿಯಾಗಿರುವ ಶಂಕೆ ಇದ್ದುದರಿಂದ ಅತನನ್ನೂ ಬಂಧಿಸಲಾಗಿದೆ

    ಮೇಘಾಲಯಕ್ಕೆ ಹನಿಮೂನ್ ಗೆ ತೆರಳಿ ಮೇ 23 ರಂದು ನಾಪತ್ತೆಯಾಗಿದ್ದ ರಾಜಾ ರಘುವಂಶಿ ಮತ್ತು ಸೋನಮ್ ರಘುವಂಶಿಯ ಪತ್ತೆಗೆ ಪೊಲೀಸರು, ಭದ್ರತಾ ಸಿಬ್ಬಂದಿಗಳು ಅವಿರತವಾಗಿ ಶ್ರಮಿಸಿದ್ದಾರೆ. ನಾಪತ್ತೆಯಾದ ಒಂಬತ್ತು ದಿನಗಳ ಬಳಿಕ ರಾಜಾ ರಘುವಂಶಿ ಮೃತದೇಹ ಜೂನ್ 2 ರಂದು ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯ ಸೊಹ್ರಾ ಪ್ರದೇಶದ ಜಲಪಾತದ ಬಳಿಯ ಕಂದಕದಲ್ಲಿ ಪತ್ತೆಯಾಗಿತ್ತು. ಆದರೆ ಸೋನಂ ನಾಪತ್ತೆಯಾಗಿದ್ದು, ಆಕೆಯನ್ನು ಅಪಹರಣ ಮಾಡಿರುವ ಶಂಕೆ ವ್ಯಕ್ತವಾಗಿತ್ತು.

    ಘಟನೆಯ ಮಹತ್ವದ ಬೆಳವಣಿಗೆ ಅಂಶವಾಗಿ ಸೋನಮ್ ಉತ್ತರ ಪ್ರದೇಶದ ಘಾಜಿಪುರದಲ್ಲಿ ಪೊಲೀಸರಿಗೆ ಶರಣಾಗಿದ್ದು, ಇದು ಹಲವಾರು ರೋಮಾಂಚಕಾರಿ ಮಾಹಿತಿಗಳನ್ನು ಬಹಿರಂಗಪಡಿಸಿತು. ಈ ಕುರಿತು ಮಾಹಿತಿ ನೀಡಿರುವ ಯುಪಿ ಪೊಲೀಸರ ಹೆಚ್ಚುವರಿ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಅಮಿತಾಭ್ ಯಶ್, ಸೋನಮ್ ಮೊದಲು ತನ್ನನ್ನು ತಾನು ನಿರಪರಾಧಿ ಎಂದು ಬಹಿರಂಗಪಡಿಸಲು ಯತ್ನಿಸಿದಳು. ಇದಕ್ಕಾಗಿ ತನಗೆ ಮಾದಕ ದ್ರವ್ಯ ನೀಡಿ ಘಾಜಿಪುರಕ್ಕೆ ಕರೆತರಲಾಗಿದೆ ಎಂದು ಹೇಳಿದ್ದಳು. ಹೀಗಾಗಿ ತಾನು ಪ್ರಕರಣದ ಬಲಿಪಶು ಎಂದುತೋರ್ಪಡಿಸಿದ್ದಾಳೆ ಎಂದು ಹೇಳಿದ್ದಾರೆ.

    ಪೊಲೀಸರು ಆಕೆಯನ್ನು ಪತ್ತೆ ಹೆಚ್ಚಿದ್ದಾರೆ ಎಂದು ತಿಳಿದ ತಕ್ಷಣ ಆಕೆ ತನ್ನ ಕುಟುಂಬವನ್ನು ಸಂಪರ್ಕಿಸಿದ್ದಾಳೆ. ಸೋಮವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ತಾನು ಘಾಜಿಪುರ- ವಾರಣಾಸಿ ರಸ್ತೆಯಲ್ಲಿರುವ ಡಾಬಾದಲ್ಲಿದ್ದೇನೆ ಎಂದು ಕುಟುಂಬಕ್ಕೆ ಮಾಹಿತಿ ನೀಡಿದ್ದಾಳೆ. ಇದರಿಂದ ಆಕೆಯ ಕುಟುಂಬವು ತಕ್ಷಣ ಮಧ್ಯಪ್ರದೇಶ ಪೊಲೀಸರನ್ನು ಸಂಪರ್ಕಿಸಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದರು. ಆ ಬಳಿಕ ಆಕೆಯನ್ನು ಬಂಧಿಸಲಾಯಿತು.

   ಆಕೆಯ ವೈದ್ಯಕೀಯ ತಪಾಸಣೆ ನಡೆಸಿ ಅನಂತರ ಒನ್-ಸ್ಟಾಪ್ ಸೆಂಟರ್‌ಗೆ ಕಳುಹಿಸಲಾಯಿತು. ಮೇಘಾಲಯ ಪೊಲೀಸರು ಈಗ ಆಕೆಯನ್ನು ವಿಚಾರಣೆ ನಡೆಸುತ್ತಿದ್ದು, ಕಾನೂನು ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತಿದ್ದಾರೆ ಎಂದು ಯಶ್ ಹೇಳಿದರು. 

   ಸುಮಾರು ಎರಡು ವಾರಗಳ ನಾಪತ್ತೆ ಪ್ರಕರಣಕ್ಕೆ ಘಾಜಿಪುರದ ಲಿಂಕ್ ಸಿಕ್ಕಾಗ ಪೊಲೀಸರು ಬಹುತೇಕ ಯಶಸ್ವಿಯಾದರು. ಯಾಕೆಂದರೆ ಇದು ರಾಜಾ ಹತ್ಯೆಗೆ ಕಾರಣವಾದ ವಿವಾಹೇತರ ಸಂಬಂಧದ ಸುಳಿವನ್ನು ಅವರಿಗೆ ನೀಡಿತ್ತು. ತನ್ನ ಗೆಳೆಯ ರಾಜ್ ಕುಶ್ವಾಹ ಜೊತೆಗೂಡಿ ಆಕೆ ಈ ಕೊಲೆ ಯೋಜನೆಯನ್ನು ರೂಪಿಸಿಕೊಂಡಿದ್ದಳು. ತೀವ್ರ ಒತ್ತಡದ ಬಳಿಕ ಆಕೆ ಜೂನ್ 8 ರಂದು ಶರಣಾಗಿದ್ದರಿಂದ ಬಳಿಕ ಆಕೆಯ ಗೆಳೆಯನನ್ನು ಬಂಧಿಸಲಾಯಿತು ಎಂದು ಅವರು ಹೇಳಿದ್ದಾರೆ. 

   ಸೋನಮ್ ಯೋಜನೆ ತುಂಬಾ ಕಳಪೆಯಾಗಿತ್ತು. ಆಕೆಗೆ ಪೊಲೀಸ್ ಕಾರ್ಯವಿಧಾನಗಳ ಬಗ್ಗೆ ಜ್ಞಾನವಿರಲಿಲ್ಲ. ಮೊದಲು ತಾನು ಸಂತ್ರಸ್ತೆಯಂತೆ ನಟಿಸಿ ತಪ್ಪಿಸಿಕೊಳ್ಳಬಹುದು ಎಂದು ಕೊಂಡಿದ್ದಳು. ಆದರೆ ಅದರಲ್ಲಿ ವಿಫಲಳಾದಳು. ಮೇಘಾಲಯ ಪೊಲೀಸರು ಅತ್ಯುತ್ತಮ ಕೆಲಸ ಮಾಡಿದ್ದಾರೆ ಮತ್ತು ಪ್ರಸ್ತುತ ಪ್ರಕರಣವನ್ನು ನಿರ್ವಹಿಸುತ್ತಿದ್ದಾರೆ. ಅವರು ಸಹಾಯವನ್ನು ಕೋರಿದರೆ ನಾವು ಒದಗಿಸುವುದಾಗಿ ಯಶ್ ತಿಳಿಸಿದ್ದಾರೆ.

   ಈ ಪ್ರಕರಣವನ್ನು ಮೇಘಾಲಯ ಪೊಲೀಸರೇ ತನಿಖೆ ನಡೆಸುತ್ತಿದ್ದಾರೆ. ಪ್ರಕರಣದ ಶಂಕಿತ ಮಹಿಳೆ ಘಾಜಿಪುರಕ್ಕೆ ಒಬ್ಬಂಟಿಯಾಗಿ ಬಂದಿದ್ದಾಳೆ ಎಂದು ಯುಪಿಯ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದರು. ಇದಕ್ಕೆ ಸಂಬಂಧಿಸಿ ಸಿಸಿಟಿವಿ ದೃಶ್ಯಾವಳಿ ಮತ್ತು ಇತರ ಪುರಾವೆಗಳನ್ನು ಪರಿಶೀಲಿಸಲಾಗುತ್ತಿದೆ ಮತ್ತು ಸತ್ಯವು ಶೀಘ್ರದಲ್ಲೇ ಹೊರಬರಲಿದೆ ಎಂದು ಅವರು ಹೇಳಿದರು.

   ರಾಜಾ ರಘುವಂಶಿ ಅವರ ಶವವನ್ನು ಮೇಘಾಲಯಕ್ಕೆ ತೆಗೆದುಕೊಂಡು ಹೋಗಿ ಕಂದಕದಲ್ಲಿ ಎಸೆಯುವ ಮೂಲಕ ತನಿಖೆಯ ದಾರಿ ತಪ್ಪಿಸಲು ಆರೋಪಿಗಳು ಯತ್ನಿಸಿದರು. ಆದರೆ ಇದು ಪೂರ್ವಯೋಜಿತ ಕಾರ್ಯವಾಗಿದೆ. ಆದರೂ ಅವರ ಈ ಯೋಜನೆ ವಿಫಲವಾಗಿದೆ ಎಂದು ಯಶ್ ತಿಳಿಸಿದ್ದಾರೆ. ಸೋನಮ್ ಗೆಳೆಯ ರಾಜ್ ಕುಶ್ವಾಹ ಒಟ್ಟಿಗೆ ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಸೋನಮ್ ಕುಟುಂಬ ಪೊಲೀಸರಿಗೆ ತಿಳಿಸಿದೆ. ಅವರಿಬ್ಬರು ಫೋನ್‌ನಲ್ಲಿ ಬಹಳಷ್ಟು ಮಾತನಾಡುತ್ತಿದ್ದರು ಎಂದು ರಾಜಾ ರಘುವಂಶಿಯ ಸಹೋದರ ವಿಪುಲ್ ರಘುವಂಶಿ ತಿಳಿಸಿದ್ದು,ಆದರೆ ಆತನನ್ನು ನಾನು ಎಂದಿಗೂ ನೋಡಿಲ್ಲ. ಆತನ ಹೆಸರು ಮಾತ್ರ ಕೇಳಿದ್ದೆ ಎಂದು ಹೇಳಿದ್ದಾರೆ. 

   ಸದ್ಯ ಸೋನಮ್ ಮೇಲೆ ಕೊಲೆ ಆರೋಪವಿದ್ದರೂ ಆಕೆಯನ್ನು ಪ್ರಮುಖ ಆರೋಪಿ ಎಂದು ಹೇಳಲಾಗುವುದಿಲ್ಲ. ಇದರಲ್ಲಿ ರಾಜ್ ಕುಶ್ವಾಹ ಭಾಗಿಯಾಗಿದ್ದರೆ ಅದು ಕೊಲೆ ಪ್ರಕರಣವಾಗಿ ಪರಿಗಣಿಸಲಾಗುತ್ತದೆ ಎಂದು ತಿಳಿಸಿದರು. ಈ ಪ್ರಕರಣವನ್ನು ಭೇದಿಸುವಲ್ಲಿ ಪ್ರಮುಖ ಪಾತ್ರವಹಿಸಿರುವ ಪೊಲೀಸ್ ಅಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ವಿವೇಕ್ ಸೈಮ್, ಸೋನಮ್ ಮತ್ತು ರಾಜ್ ಕುಶ್ವಾಹ ಅವರ ಸಂಬಂಧದ ಬಗ್ಗೆ ಸಾಕಷ್ಟು ಪುರಾವೆಗಳಿವೆ ಎಂದು ತಿಳಿಸಿದ್ದಾರೆ.

Recent Articles

spot_img

Related Stories

Share via
Copy link