ನಾಯಕನಹಟ್ಟಿ :
ರಾಜ್ಯಕ್ಕೆ 2025 26 ನೇ ಸಾಲಿನ ಮುಂಗಾರು ಮಳೆ ಪ್ರವೇಶವಾಗಿದೆ ಹಾಗಾಗಿ ಜೂನ್ 2 ರಿಂದ ರೈತ ಸಂಪರ್ಕ ಕೇಂದ್ರದಲ್ಲಿ ಬೀಜ ವಿತರಿಸಲಾಗುವುದು ಎಂದು ಕೃಷಿ ಅಧಿಕಾರಿ ಮಂಜುನಾಥ್ ಪಿ ಹೇಳಿದರು.
ನಂತರ ಮಾಧ್ಯಮದರೊಂದಿಗೆ ಮಾತನಾಡಿದ ಅವರು ನಾಯಕನಹಟ್ಟಿ ಹೋಬಳಿ ಸುಮಾರು 25 ಸಾವಿರ ಹೆಕ್ಟರ್ ಬಿತ್ತನೆ ಪ್ರದೇಶವಿದೆ. ಇದರಲ್ಲಿ 19 ಸಾವಿರ ಹೆಕ್ಟರ್ ಶೇಂಗಾ ಬಿತ್ತನೆ ಮಾಡಲಾಗುತ್ತದೆ, ಈ ಭಾಗದ ಪ್ರಮುಖ ಬೆಳೆ ಶೇಂಗಾ. ನಂತರದಲ್ಲಿ ತೊಗರಿ, ನವಣೆ ಮಳೆ ಆಶ್ರಿತ ಬೆಳೆಗಳು ಮೆಕ್ಕೆಜೋಳವನ್ನು ನೀರಾವರಿಯಲ್ಲಿ ಬೆಳೆಯುತ್ತಾರೆ.
ರೈತರಿಗೆ ರೀತಿಯಲ್ಲಿ ಕೊರತೆ ಆಗಬಾರದು ಎಂಬ ಉದ್ದೇಶದಿಂದ ಅಗತ್ಯವಿರುವಷ್ಟು ಬಿತ್ತನೆ ಬೀಜವನ್ನು ಈಗಾಗಲೇ ದಾಸ್ತಾನು ಮಾಡಲಾಗಿದೆ. ಬಿತ್ತನೆ ಬೀಜ ಕಡಿಮೆಯಾಗುವ ಸಂಭವ ಉದ್ಭವಿಸಿದರೆ ಹೆಚ್ಚಿನ ಬೀಜ ತರಿಸಲಾಗುವುದು. ಈ ವರ್ಷ ಮುಂಗಾರು ಹಂಗಾಮು ಆಶಾದಾಯಕವಾಗಿದ್ದು, ಈ ಮುಂಗಾರು ಚೆನ್ನಾಗಿ ಆಗಬೇಕು ಎಂದರೆ ತಮ್ಮ ರೀತಿಯಲ್ಲಿ ಬಿತ್ತನೆ ಬೀಜಗಳನ್ನು ಸರಿಯಾದ ಸಮಯಕ್ಕೆ ಕೊಡಲಿಕ್ಕೆ ಸಕಲ ಸಿದ್ಧತೆಗಳನ್ನು ಕೃಷಿ ಇಲಾಖೆ ವತಿಯಿಂದ ನಾವುಗಳು ಮಾಡಿಕೊಂಡಿದ್ದೇವೆ ಎಂದು ಹೇಳಿದರು.
ಶೇಂಗಾ ಬಿತ್ತನೆ ಬೀಜಕ್ಕೆ ತುಂಬಾ ಬೇಡಿಕೆ ಇದೆ. ಬಿತ್ತನೆ ಬೀಜವನ್ನು ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು ವಿತರಣೆ ಮಾಡಲಾಗುವುದು. ಪ್ರತಿ ಸೋಮವಾರ ನಾಯಕನಹಟ್ಟಿ ಹಾಗೂ ಗೌಡಗೆರೆ ಮತ್ತು ನೆಲಗೇತನಹಟ್ಟಿ, ಅದೇ ರೀತಿಯಾಗಿ ಪ್ರತಿ ಬುಧವಾರ ತಿಮ್ಮಪ್ಪಯ್ಯನಹಳ್ಳಿ ಹಾಗೂ ನೇರಲಗುಂಟೆ ಮತ್ತು ಎನ್ ದೇವರಹಳ್ಳಿ, ಪ್ರತಿ ಶುಕ್ರವಾರದಂದು ಅಬ್ಬೇನಹಳ್ಳಿ ಹಾಗೂ ಮಲ್ಲೂರಹಳ್ಳಿ ಮತ್ತು ಎನ್ ಮಹದೇವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರಿಗೆ ವಿತರಿಸಲಾಗುವುದು.
TMV-2TL ತಳಿಯ ಶೇಂಗಾ ಬೀಜದ ಒಂದು ಪಾಕೆಟೆಗೆ ಸಾಮಾನ್ಯ ವರ್ಗದ ರೈತರಿಗೆ 2130, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದ ರೈತರಿಗೆ 1920 ರಂತೆ ಹಾಗೂ K6-TL ತಳಿಯ ಶೇಂಗಾ ಬೀಜದ ಒಂದು ಸಾಮಾನ್ಯ ವರ್ಗದ ರೈತರಿಗೆ 2340, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದ ರೈತರಿಗೆ 2130 ರಂತೆ ಮತ್ತು K6-CS ತಳಿಯ ಶೇಂಗಾ ಬೀಜದ ಒಂದು ಪಾಕೆಟ್ ಗೆ ಸಾಮಾನ್ಯ ವರ್ಗದ ರೈತರಿಗೆ 2550, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದ ರೈತರಿಗೆ 2325 ರಂತೆ ಪ್ರತಿ ಎಕರೆಗೆ 1 ಚೀಲದಂತೆ 5 ಎಕರೆವರೆಗೆ 5 ಚೀಲ ವಿತರಿಸಲಾಗುವುದು.5 ಎಕರೆಗಿಂತ ಹೆಚ್ಚು ಆಸ್ತಿ ಹೊಂದಿರುವ ರೈತರಿಗೆ 5 ಚೀಲ ಬಿತ್ತನೆ ಬೀಜ ವಿತರಿಸಲಾಗುವುದು. ಸಮಸ್ತ ಹೋಬಳಿ ರೈತ ಬಾಂಧವರು ಈ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.
