ಬೆಂಗಳೂರು:
ಕತಾರ್ ಸ್ಪೋರ್ಟ್ಸ್ ಮ್ಯೂಸಿಯಂ ಮಾದರಿಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ವಿಶ್ವ ದರ್ಜೆಯ ಕ್ರೀಡಾ ಮ್ಯೂಸಿಯಂ ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ವಸ್ತುಸಂಗ್ರಹಾಲಯವು ಅಂತರಾಷ್ಟ್ರೀಯ ಮತ್ತು ದೇಸಿ ಕ್ರೀಡೆಗಳು ಹಾಗೂ ಆಟಗಳನ್ನು ಪ್ರದರ್ಶಿಸುತ್ತದೆ.
ಈ ಉಪಕ್ರಮದ ಮೂಲಕ ಯುವಕರನ್ನು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸುವುದು ಸರ್ಕಾರದ ಉದ್ದೇಶವಾಗಿದೆ. ಉದ್ದೇಶಿತ ವಸ್ತುಸಂಗ್ರಹಾಲಯವನ್ನು ವಿಠಲ ಮಲ್ಯ ರಸ್ತೆಯಲ್ಲಿರುವ ಕಂಠೀರವ ಕ್ರೀಡಾಂಗಣದಲ್ಲಿ ಸ್ಥಾಪಿಸುವ ಸಾಧ್ಯತೆಯಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಕೊನೆಯ ಬಜೆಟ್ನಲ್ಲಿ ಮ್ಯೂಸಿಯಂ ಸ್ಥಾಪಿಸುವುದಾಗಿ ಘೋಷಿಸಿದ್ದು, ಇದಕ್ಕಾಗಿ 5 ಕೋಟಿ ರೂ. ಹಣ ಮೀಸಲಿಟ್ಟಿದ್ದರೂ ಆ ನಿಟ್ಟಿನಲ್ಲಿ ಯಾವುದೇ ಪ್ರಗತಿಯಾಗಿಲ್ಲ.
ಇತ್ತೀಚೆಗೆ, ಕ್ರೀಡೆ ಮತ್ತು ಯುವಜನ ಸೇವಾ ಇಲಾಖೆಯು ವಸ್ತುಸಂಗ್ರಹಾಲಯ ಸ್ಥಾಪನೆಗೆ ಯೋಜನಾ ನಿರ್ವಹಣೆ ಮತ್ತು ಸಲಹಾ ಸೇವೆಗಳಿಗೆ ಟೆಂಡರ್ ಕರೆದಿದೆ. ಈ ಉಪಕ್ರಮವು ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ಮತ್ತು PHIBA ಏಷ್ಯಾ-ಭಾರತ ಬಾಸ್ಕೆಟ್ಬಾಲ್ ಫೆಡರೇಶನ್ ಮುಖ್ಯಸ್ಥರಾಗಿರುವ ಕಾಂಗ್ರೆಸ್ ಎಂಎಲ್ಸಿ ಕೆ ಗೋವಿಂದರಾಜು ಅವರ ಪರಿಕಲ್ಪನೆ ಎಂದು ಹೇಳಲಾಗುತ್ತಿದೆ.
ಇದು ದೇಶದಲ್ಲಿಯೇ ಮೊದಲನೆಯ ಕ್ರೀಡಾ ಮ್ಯೂಸಿಯಂ ಆಗಿದ್ದು, ದೇಸಿ ಆಟಗಳು ಸೇರಿದಂತೆ ಕ್ರೀಡೆಗೆ ಸಂಬಂಧಿಸಿದ ಎಲ್ಲವನ್ನೂ ಇಲ್ಲಿ ನೋಡಬಹುದು ಎಂದು ಕ್ರೀಡೆ ಮತ್ತು ಯುವಜನ ಸೇವೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಅವರು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ಗೆ ತಿಳಿಸಿದರು.
ಕರ್ನಾಟಕದ ಹೆಸರಾಂತ ಕ್ರೀಡಾಪಟುಗಳು ಬಳಸುವ ಕ್ರೀಡಾ ವಸ್ತುಗಳನ್ನು ಪ್ರದರ್ಶಿಸುವ ಯೋಜನೆಯನ್ನು ನಾವು ಹೊಂದಿದ್ದೇವೆ. ಗ್ಯಾಲರಿ, ಲೈಬ್ರರಿ ಹೀಗೆ ಹಲವು ವ್ಯವಸ್ಥೆ ಈ ಮ್ಯೂಸಿಯಂನಲ್ಲಿ ಇರಲಿದೆ’ ಎಂದು ಅವರು ತಿಳಿಸಿದ್ದಾರೆ.
“ನಾವು ಇದಕ್ಕೆ ಅಂತರರಾಷ್ಟ್ರೀಯ ನೋಟ ನೀಡಲು ಬಯಸುತ್ತೇವೆ. ಜನ, ವಿಶೇಷವಾಗಿ ಚಿಕ್ಕ ಮಕ್ಕಳು, ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಬೇಕು ಮತ್ತು ಸ್ಫೂರ್ತಿ ಪಡೆಯಬೇಕೆಂದು ನಾವು ಬಯಸುತ್ತೇವೆ. ಆದ್ದರಿಂದ, ನಾವು ಇದನ್ನು ಕತಾರ್ ಒಲಿಂಪಿಕ್ ಮತ್ತು ಸ್ಪೋರ್ಟ್ಸ್ ಮ್ಯೂಸಿಯಂ ಮಾದರಿಯಲ್ಲಿ ಅಭಿವೃದ್ಧಿಪಡಿಸುತ್ತಿದ್ದೇವೆ ಎಂದು ಮಂಜುನಾಥ್ ಅವರು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ
