ದುನಿಯಾ ವಿಜಿ ವಿರುದ್ಧ ಕಿಡ್ನಾಪ್-ಹಲ್ಲೆ ಪ್ರಕರಣ : ಫುಲ್ ಡೀಟೇಲ್ಸ್..!

 ಬೆಂಗಳೂರು:

      ದುನಿಯಾ ವಿಜಯ್ ಮತ್ತು ತಂಡದವರು, ಜಿಮ್ ಟ್ರೈನರ್ ಮಾರುತಿಗೌಡರನ್ನು ಕಿಡ್ನಾಪ್ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಲನಚಿತ್ರ ನಟ ದುನಿಯಾ ವಿಜಿ ಅವರನ್ನು ಬೆಂಗಳೂರಿನ ಹೈಗ್ರೌಂಡ್ ಪೊಲೀಸರು ಇಂದು ಬಂಧಿಸಿದ್ದಾರೆ.

      ಬೆಂಗಳೂರಿನ ಪಾನಿಪುರಿ ಕಿಟ್ಟಿ ಅವರ ಅಣ್ಣನ ಮಗ ಜಿಮ್ ಪ್ರಸಾದ್ ಅವರನ್ನು ಸೆಪ್ಟೆಂಬರ್ 22 ರಂದು ಅಪಹರಿಸಿ,ಹಲ್ಲೆ ನಡೆಸಿದ್ದರ ಹಿನ್ನೆಲೆಯಲ್ಲಿ ಪಾನಿಪುರಿ ಕಿಟ್ಟಿ ದೂರು ನೀಡಿರುವ ಮೇರೆಗೆ ಬೆಂಗಳೂರಿನ ಹೈಗ್ರೌಂಡ್ ಪೊಲೀಸರು ದುನಿಯಾ ವಿಜಿ ಅವರನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

      ಈ ಹಿಂದೆ ಪ್ರಕರಣ ದಾಖಲಾದ ಸಂದರ್ಭದಲ್ಲಿ ಪೊಲೀಸರು ಎಷ್ಟೇ ಬುದ್ಧಿ ಹೇಳಿದರೂ ಕೂಡಾ ತನ್ನ ತಪ್ಪನ್ನು ತಿದ್ದಿಕೊಳ್ಳದ ದುನಿಯಾ ವಿಜಿ ಅವರು, ಮತ್ತೆ ಹಲ್ಲೆ ಮತ್ತು ಕಿಡ್ನಾಪ್ ಪ್ರಕರಣದಲ್ಲಿ ಭಾಗಿಯಾಗಿದ್ದು, ಈ ಕಾರಣದಿಂದಾಗಿ ಸಂಘಟಿತ ಅಪರಾಧ ವಿಭಾಗದ ಅಧಿಕಾರಿಗಳು, 2015ರ ದುನಿಯಾ ವಿಜಿ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿದ್ದಾರೆ.

ಪ್ರಕರಣದ ಹಿನ್ನೆಲೆ..?

      ನಿನ್ನೆ ತಡರಾತ್ರಿ ವಸಂತನಗರದ ಅಂಬೇಡ್ಕರ್​ ಭವನದಲ್ಲಿ ನಡೆಯುತ್ತಿದ್ದ ಬಾಡಿ ಬಿಲ್ಡಿಂಗ್​ ಕಾಂಪಿಟೇಷನ್​ ವೇಳೆ ಜಿಮ್​ ಟ್ರೈನರ್​ ಮಾರುತಿ ಗೌಡ ಹಾಗೂ ದುನಿಯಾ ವಿಜಿ ಟೀಂ ನಡುವೆ ಜಗಳ ಶುರುವಾಗಿದೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಇದರಿಂದ ಕೋಪಗೊಂಡ ವಿಜಯ್​ ಹಾಗೂ ಮಣಿಪ್ರಸಾದ್​, ಪಾನಿಪುರಿ ಕಿಟ್ಟಿಯ ಅಣ್ಣನ ಮಗ ಮಾರುತಿಯನ್ನ ಕಿಡ್ನಾಪ್​ ಮಾಡಿ ಕಾರಿನಲ್ಲಿ ಕರೆದೊಯ್ದಿದ್ದಾರೆ. ಬಳಿಕ ಮಾರುತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಡ್ರಗ್ಸ್ ಸೇವಿಸಿದ್ದರೆ ಮತ್ತೊಂದು ಕೇಸ್..!

      ವಿಜಯ್​ ಮಾದಕ ದ್ರವ್ಯ ಸೇವನೆ ಮಾಡಿದ್ದಾರೆಂಬ ಅನುಮಾನ ಮೂಡಿದೆ. ಈ ಹಿನ್ನೆಲೆಯಲ್ಲಿ ವಿಜಯ್​ ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದಾರೆ. ಈ ಗಾಗಲೇ ವಿಜಯ್​ ಅವರ ರಕ್ತದ ಮಾದರಿಯನ್ನು ಎಫ್​ಎಸ್​ಎಲ್​ಗೆ ಕಳುಹಿಸಲಾಗಿದೆ. ಒಂದು ವೇಳೆ ಡ್ರಗ್ಸ್ ಸೇವನೆ ಆರೋಪ ಸಾಬೀತಾದ್ರೆ ಮತ್ತೊಂದು ಕೇಸ್ ದಾಖಲಾಗುವ ಸಾಧ್ಯತೆ ಇದೆ. 

ಪೊಲೀಸ್ ಠಾಣೆಯ ಬಳಿ ವಿಜಿ ಹಾರಾಟ: ವಾರ್ನಿಂಗ್ ಕೊಟ್ಟ ಎಜಿಪಿ 

      ಪ್ರಕರಣಕ್ಕೆ ಸಂಬಂಧಪಟ್ಟಂತೆ ಪಾನಿಪುರಿ ಕಿಟ್ಟಿ ನಿನ್ನೆ ರಾತ್ರಿ 11.30ರ ಸುಮಾರಿಗೆ ದುನಿಯಾ ವಿಜಿ ವಿರುದ್ಧ ಹೈಗ್ರೌಂಡ್ ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ದುನಿಯಾ ವಿಜಯ್​ಗೆ ಕರೆ ಮಾಡಿ ವಿಚಾರಿಸಿದ್ದರು. ಈ ವೇಳೆ ನಟ ದುನಿಯಾ ವಿಜಯ್​ ಅವಾಜ್​ ಹಾಕಿದರು ಎನ್ನಲಾಗಿದೆ. ಬಳಿಕ ಪೊಲೀಸರು ಖಡಕ್​ ಆಗಿ ಸೂಚಿಸಿದ 30 ನಿಮಿಷದ ಬಳಿಕ ಕಿಡ್ನಾಪ್ ಮಾಡಿದ್ದಾರೆನ್ನಲಾದ ಮಾರುತಿಗೌಡರೊಂದಿಗೆ ಪೊಲೀಸ್ ಠಾಣೆ ಬಳಿ ತನ್ನ ರೇಂಜ್ ರೋವರ್ ಕಾರಿನಲ್ಲಿ ಪ್ರತ್ಯಕ್ಷರಾಗಿದ್ದಾರೆ.

      ಠಾಣೆಯ ಹತ್ತಿರ ಮತ್ತೆ ಪಾನಿಪುರಿ ಕಿಟ್ಟಿ ಹಾಗೂ ಹುಡುಗರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ದರ್ಪ ತೋರಿದ್ದರು ಎಂದು ತಿಳಿದುಬಂದಿದೆ. ಈ ವೇಳೆ ದುನಿಯಾ ವಿಜಯ್​ ಹಾಗೂ ಪಾನಿಪುರಿ ಕಿಟ್ಟಿ ನಡುವೆ ಮಾತಿನ ಚಕಮಕಿ ನಡೆದಿದೆ.

      ಪಾನಿಪುರಿ ಕಿಟ್ಟಿ ಗ್ಯಾಂಗ್​ ದುನಿಯಾ ವಿಜಯ್​ ಅವರ ಕಾರನ್ನು ಹೊಡೆದು ಆಕ್ರೋಶ ವ್ಯಕ್ತಪಡಿಸಿದೆ. ಈ ವೇಳೆ ಹೈಗ್ರೌಂಡ್ ಪೊಲೀಸ್ ಠಾಣೆ ಬಳಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಪರಿಸ್ಥಿತಿ ನಿಯಂತ್ರಿಸಲು ಕೆಎಸ್​​ಆರ್​​​ಪಿ ತುಕಡಿಯನ್ನು ನಿಯೋಜಿಸಲಾಯಿತು. ಪೊಲೀಸ್ ಠಾಣೆ ಬಳಿಯೂ ದರ್ಪ ಮೆರೆಯುತ್ತಿದ್ದ ವಿಜಿಗೆ ಎಸಿಪಿ ರವಿಶಂಕರ್​​ ವಾರ್ನಿಂಗ್ ನೀಡಿದ್ದಾರೆ. ಬಳಿಕ ವಿಜಯ್​ ಹಾಗೂ ಅವರ ಸಹಚರರನ್ನು ಬಂಧಿಸಲಾಗಿದೆ.

ಆರೋಪ ಸಾಬೀತಾದ್ರೆ ಮುಂದೇನು…?

      ಒಂದು ವೇಳೆ ಸೆಕ್ಷನ್ 363-ಕಿಡ್ನ್ಯಾಪ್ ಆರೋಪ ಸಾಬೀತಾದರೆ ದುನಿಯಾ ವಿಜಯ್​​ಗೆ 7 ವರ್ಷ ಜೈಲು ಶಿಕ್ಷೆ ಜೊತೆಗೆ ದಂಡ ವಿಧಿಸುವ  ಸಾಧ್ಯತೆ ಇದೆ. ಅಲ್ಲದೆ ಇದು ಜಾಮೀನು ರಹಿತ ಅಪರಾಧ.

      ಇನ್ನು 323, ಸಾಮೂಹಿಕ ಹಲ್ಲೆ ಆರೋಪ ಸಾಬೀತಾದರೆ ಗರಿಷ್ಟ ಒಂದು ವರ್ಷ ಶಿಕ್ಷೆ ಹಾಗೂ ಒಂದು ಸಾವಿರ ರೂ. ದಂಡ. ಹಾಗೇ 506, ಕೊಲೆ ಬೆದರಿಕೆ ಆರೋಪ ಸಾಬೀತಾದರೆ ಗರಿಷ್ಠ 7 ವರ್ಷ ಶಿಕ್ಷೆಯಾಗುವ ಸಾಧ್ಯತೆ ಇದೆ. ಎಂದು ಹೇಳಲಾಗುತ್ತಿದೆ.

            ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link