ಮೈಸೂರು:
ಇತ್ತೀಚಿಗಷ್ಟೇ ಸಚಿವ ಸಿ ಎಸ್ ಪುಟ್ಟರಾಜು ಮನೆಯ ಮೇಲೆ ದಾಳಿ ಮಾಡಿದ್ದ ಆದಾಳ ತೆರಿಗೆ ಇಲಾಖೆ ಅಧಿಕಾರಿಗಳು ಇಂದೂ ಕೂಡ ಸಚಿವರ ಮನೆಯ ತ್ಮೇತೇಲೆ ಐಟಿ ದಾಳಿ ನಡೆಸಿದ್ದಾರೆ
ಮೈಸೂರಿನ ಯಾದವಗಿರಿಯಲ್ಲಿರುವ ಪುಟ್ಟರಾಜು ನಿವಾಸದ ಮೇಲೆ ಐಟಿ ದಾಳಿ ನಡೆಸಿದ್ದು, ಅಪಾರ್ಟ್ ಮೆಂಟ್ ಮೇಲೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು, ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿದ್ದಾರೆ. ಮನೆಯಲ್ಲಿದ್ದ ಅಡುಗೆ ಭಟ್ಟನ ಸಮ್ಮುಖದಲ್ಲಿಯೇ ಮನೆಯಲ್ಲಿನ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಸಚಿವ ಸಿ ಎಸ್ ಪುಟ್ಟರಾಜು, ದ್ವೇಷ ರಾಜಕಾರಣ ಪರಿಣಾಮ ಮತ್ತೆ ಐಟಿ ದಾಳಿ ನಡೆದಿದೆ. ನಾನು ಹಾಗೂ ಪುತ್ರ ಇಬ್ಬರು ಮಂಡ್ಯದ ಚುನಾವಣಾ ಪ್ರಚಾರದಲ್ಲಿ ಇದ್ದೇವೆ. ಆದರೆ ಈಗ ದಾಳಿ ನಡೆದಿರುವ ಬಗ್ಗೆ ಮಾಹಿತಿ ಲಭಿಸಿದೆ. ಮನೆಯಲ್ಲಿನ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸಿದ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿ ತೆರಳಿದ್ದಾರೆ ಎಂದರು.
ಐಟಿ ದಾಳಿಯ ಹಿಂದೆ ಬಿಜೆಪಿಯವರ ಕೈವಾಡವಿದೆ. ಬಿಜೆಪಿಯವರೇ ಪದೇ ಪದೇ ಹೇಳಿ ದಾಳಿ ನಡೆಸುವಂತೆ ಪ್ರಚೋದನೆ ನೀಡುತ್ತಿದ್ದಾರೆ. ನಾವು ಇಂತಹ ಪೊಳ್ಳು ಬೆದರಿಕೆಗೆ ಜಗ್ಗುವುದಿಲ್ಲ. ನಮ್ಮನ್ನೂ ಏನೂ ಮಾಡೋಕೆ ಆಗೋದಿಲ್ಲ. ಇದಕ್ಕೆ ನಾವು ಹೆದರುವುದು ಇಲ್ಲ ಎಂದು ಪುಟ್ಟರಾಜು ಕಿಡಿಕಾರಿದರು.
ಕಳೆದ 20 ದಿನಗಳ ಹಿಂದೆ ಪುಟ್ಟರಾಜು ಅವರ ನಿವಾಸ ಹಾಗೂ ಸಂಬಂಧಿಕರ ಮನೆ ಮೇಲೆ ದಾಳಿ ನಡೆದಿತ್ತು. ಈ ವೇಳೆಯೂ ದಾಳಿಯ ಕುರಿತು ಕಿಡಿ ಕಾರಿದ್ದ ಅವರು ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
