ಬೆಂಗಳೂರು :
ದೇಶಾದ್ಯಂತ 21 ದಿನ ಲಾಕ್ಡೌನ್ ಆದೇಶ ಹೊರಡಿಸಲಾಗಿದ್ದು, ಆದರೂ ಸಹಾ ಸುಖಾಸುಮ್ಮನೆ ಸುತ್ತಾಡುವವರಿಗೆ ಪೊಲೀಸರು ಲಾಠಿ ರುಚಿ ತೋರಿಸುತ್ತಿದ್ದಾರೆ. ಈ ಮಧ್ಯೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಲಾಠಿ ಬಿಟ್ಟು ಕರ್ತವ್ಯಕ್ಕೆ ಹಾಜರಾಗುವಂತೆ ಸಿಬ್ಬಂದಿಗೆ ಖಡಕ್ ಸೂಚನೆ ನೀಡಿದ್ದಾರೆ.
ತರಕಾರಿ ಮಾರುವವರು, ರಸ್ತೆಯಲ್ಲಿ ಅಗತ್ಯ ವಸ್ತುಗಳನ್ನು ತರಲು ಓಡಾಡುವವರಿಗೆ ಪೊಲೀಸರು ಲಾಠಿ ಏಟು ನೀಡುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿಬಂದಿತ್ತು, ಈ ಹಿನ್ನೆಲೆಯಲ್ಲಿ ಆಯುಕ್ತರು ಈ ಸೂಚನೆ ನೀಡಿರುವ ಪೊಲೀಸ್ ಆಯುಕ್ತರು, ಕೇವಲ ಕೆಎಸ್ಆರ್ಪಿ ಮಾತ್ರ ಲಾಠಿ ಹಿಡಿಯಬಹುದು, ಪೊಲೀಸರು ಹಾಗೂ ಸಂಚಾರ ಪೊಲೀಸರು ಕೂಡ ಲಾಠಿ ಹಿಡಿಯುವಂತಿಲ್ಲ ಎಂದು ಅವರು ಸೂಚಿಸಿದ್ದಾರೆ.
ಇನ್ನು, ಬೈಕ್ಗಳಲ್ಲಿ ಅನಗತ್ಯ ತಿರುಗಾಡಿದರೆ ತಿಳಿಹೇಳಬೇಕು ಎಂದಿರುವ ಭಾಸ್ಕರ್ ರಾವ್,“ಬೈಕ್ಗಳಲ್ಲಿ ಯಾರಾದರೂ ಸುಮ್ಮನೆ ತಿರುಗಾಡಿದರೆ ಅವರಿಗೆ ತಿಳಿ ಹೇಳಬೇಕು. ಯಾವ ಕಾರಣಕ್ಕೂ ಲಾಠಿ ಪ್ರಯೋಗ ಮಾಡಬಾರದು. ಪೇಪರ್ ಹಂಚುವವರಿಗೆ ತೊಂದರೆ ಕೊಡುವಂತಿಲ್ಲ, ಎಲ್ಲಾ ಪೊಲೀಸರು, ಸಾರ್ವಜನಿಕರು ಸ್ಯಾನಿಟೈಸರ್ ಹಾಗೂ ಮಾಸ್ಕ್ಗಳನ್ನು ಕಡ್ಡಾಯವಾಗಿ ಬಳಸಬೇಕು. ತರಕಾರಿ ಮಾರುವವರು ಅಂತರ ಕಾಯ್ದುಕೊಳ್ಳಬೇಕು ಎಂದು ತಿಳಿಸಿದ್ದಾರೆ.
ರಾಜ್ಯಾದ್ಯಂತ ಕೊರೊನಾ ಸೋಂಕಿತ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಈಗಾಗಲೇ ರಾಜ್ಯದಲ್ಲಿ 3 ಬಲಿ ಪಡೆದಿದೆ. ಪ್ರಧಾನಿ, ಮುಖ್ಯಮಂತ್ರಿ ಎಷ್ಟೇ ಹೇಳಿದರೂ ಜನರು ಮಾತ್ರ ರಸ್ತೆಯಲ್ಲಿ ಓಡಾಡುವುದನ್ನು ನಿಲ್ಲಿಸಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ