ಬೆಂಗಳೂರು:
ಪ್ರಾಂಶುಪಾಲರ ಕಿರುಕುಳ ಸಹಿಸಿಕೊಳ್ಳಲು ಆಗದೇ ವಿದ್ಯಾರ್ಥಿಯೊಬ್ಬ ಏಳನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಸವನಹಳ್ಳಿ ಬಳಿಯಿರುವ ಖಾಸಗಿ ಕಾಲೇಜಿನಲ್ಲಿ ನಡೆದಿದೆ.
ಶ್ರೀಹರ್ಷ ಕಾಲೇಜಿನಲ್ಲಿ ಪ್ರಿನ್ಸಿಪಾಲ್ ಟಾರ್ಚರ್ ಸಹಿಸಿಕೊಳ್ಳಲು ಆಗದೇ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಮೂಲತಃ ಆಂಧ್ರ ಪ್ರದೇಶದವನಾಗಿದ್ದ ಶ್ರೀ ಹರ್ಷ ಎಂಜಿನಿಯರಿಂಗ್ ಓದುತ್ತಿದ್ದನು.
ಶ್ರೀ ಹರ್ಷ ಕಾಲೇಜಿನ ಹಾಸ್ಟಲ್ ನಲ್ಲಿ ಊಟದ ವ್ಯವಸ್ಥೆ ಸರಿಯಿಲ್ಲ ಮತ್ತು ಸರಿಯಾಗಿ ನೀರು ಬರುತ್ತಿಲ್ಲ ಎಂದು ಆರೋಪಿಸಿ ಒಂದು ತಿಂಗಳ ಹಿಂದೆಯೇ ಕಾಲೇಜಿನಲ್ಲಿ ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆಯಲ್ಲಿ ಸಾಕಷ್ಟು ಸಂಖ್ಯೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದೇ ಕಾರಣಕ್ಕೆ ಕಾಲೇಜಿನ ಆಡಳಿತ ಮಂಡಳಿ ಶ್ರೀ ಹರ್ಷ ಸೇರಿದಂತೆ 20 ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಸಸ್ಪೆಂಡ್ ಮಾಡಿತ್ತು.
ಈ ನಡುವೆ ಮೊದಲೇ ಕ್ಯಾಂಪಸ್ ಸೆಲೆಕ್ಷನ್ ಆಗಿ ನೌಕರಿ ಗಿಟ್ಟಿಸಿದ್ದ ಶ್ರೀ ಹರ್ಷ ಅವರಿಗೆ ಕಂಪೆನಿಯೊಂದು ವಾರ್ಷಿಕ 14 ಲಕ್ಷ ಸಂಬಳ ಅಫರ್ ಮಾಡಿತ್ತು. ಅಲ್ಲದೆ, ಇಂದು ಆಫರ್ ಲೆಟರ್ ಅನ್ನು ಕಾಲೇಜಿನ ವಿಳಾಸಕ್ಕೆ ಕಳುಹಿಸಿದೆ. ಆದರೆ, ಶ್ರಿ ಹರ್ಷ ಸಸ್ಪೆಂಡ್ ಆಗಿದ್ದಾನೆ ಎಂಬ ಕಾರಣಕ್ಕೆ ಪ್ರಾಂಶುಪಾಲ “ನೀನು ಸಸ್ಪೆಂಡ್ ಆಗಿದ್ದೀಯ” ಎಂದು ನಿಂದಿಸಿ ಅವರ ಆಫರ್ ಲೆಟರ್ ಅನ್ನು ಹರಿದು ಹಾಕಿದ್ದಾರೆ.
ಇದರಿಂದಾಗಿ ಬೇಸರಗೊಂಡ ವಿದ್ಯಾರ್ಥಿ ಶ್ರೀ ಹರ್ಷ, ಇಂದು ಬೆಳಗ್ಗೆ ಕಾಲೇಜಿನ 7ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.