ಬೆಳಗಾವಿ:
ರಾಜ್ಯ ಸರ್ಕಾರವನ್ನು ಪತನದ ಅಂಚಿಗೆ ತಂದು ನಿಲ್ಲಿಸಿದ್ದ ವಿವಾದಿತ ಬೆಳಗಾವಿಯ ಪಿಎಲ್ಡಿ ಬ್ಯಾಂಕ್ನ ಅಧ್ಯಕ್ಷ ಚುನಾವಣೆ ವೇಳೆ ಉಭಯ ಬಣಗಳ ರಾಜಿ ಸಂಧಾನದ ಅಧ್ಯಕ್ಷ ರಾಗಿದ್ದ ಮಹದೇವ ಪಾಟೀಲ್ ಸೋಮವಾರ ಬೆಳಗಾವಿಯ ಫೂಲ್ಬಾಗ್ ಗಲ್ಲಿ ನಿವಾಸದಲ್ಲಿ ಅವರು ನಿಧನರಾಗಿದ್ದಾರೆ.
82 ವರ್ಷದ ವಯಸ್ಸಿನ ಮಹದೇವ ಪಾಟೀಲ್ ತೀವ್ರ ಹೃದಯಾಘಾತಕ್ಕೊಳಗಾಗಿದ್ದರು.
ಜಾರಕಿಹೊಳಿ ಬ್ರದರ್ಸ್ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ನಡುವಣ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಚುನಾವಣೆ ಅದಾಗಿತ್ತು. ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ರಾಜ್ಯದ ಪ್ರಭಾವಿ ಸಚಿವ ರಮೇಶ್ ಜಾರಕಿಹೊಳಿ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿತ್ತು. ಬೆಳಗಾವಿ ಪಿಎಲ್ಡಿ ಬ್ಯಾಂಕ್ ಚುನಾವಣೆ ಇಡೀ ರಾಜ್ಯದ ಗಮನವನ್ನು ಸೆಳೆದಿತ್ತು.
ಮಹದೇವ ಪಾಟೀಲ್ ನಿಧನದಿಂದ ತೆರವಾದ ಅಧ್ಯಕ್ಷ ಹುದ್ದೆಗೆ ಮತ್ತೊಂದು ಚುನಾವಣೆ ನಡೆಯಬೇಕಾಗಿದ್ದು, ಇದರಿಂದ ಬೆಳಗಾವಿ ಕಾಂಗ್ರೆಸ್ನಲ್ಲಿ ಮತ್ತೊಮ್ಮೆ ಬಿರುಗಾಳಿಯೆದ್ದು, ರಾಜ್ಯ ರಾಜಕೀಯಕ್ಕೆ ಯಾವ ಹೊಸ ತಿರುವು ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
