ಬಳ್ಳಾರಿ :
ಜಿಲ್ಲೆಯ ಹೊಸಪೇಟೆಯಲ್ಲಿ ಒಂದೇ ಕುಟುಂಬದ ಮೂವರಲ್ಲಿ ಕೊರೊನಾ ಸೋಂಕು ಪಾಸಿಟಿವ್ ಬಂದಿದ್ದು, ಸ್ಥಳೀಯರಲ್ಲಿ ಹೆಚ್ಚಿನ ಭೀತಿ ಸೃಷ್ಟಿಸಿದೆ.
ರಾಜ್ಯದ್ಯಂತ ಮಾರಕ ಕೊರೊನಾ ಸೋಂಕು ಜನತೆಯನ್ನು ತಲ್ಲಣಗೊಳಿಸಿದೆ. ರಾಜ್ಯದಲ್ಲಿ ಸೋಂಕು ಪೀಡಿತರ ಸಂಖ್ಯೆ 83ಕ್ಕೆ ಏರಿಕೆಯಾಗಿದ್ದು, ಜನತೆ ಆತಂಕಗೊಂಡಿದ್ದಾರೆ. ಈ ನಡುವೆ ಹೊಸಪೇಟೆಯ ಎಸ್.ಆರ್.ನಗರದಲ್ಲಿ ಒಂದೇ ಕುಟುಂಬದ ಮೂವರಿಗೆ ಮಾರಕ ಕೊರೊನಾ ಪಾಸಿಟಿವ್ ಬಂದಿದ್ದು, ಕುಟುಂಬದಲ್ಲಿ ಇನ್ನುಳಿದ ಇಬ್ಬರು ಸದಸ್ಯರು ಸೇರಿದಂತೆ ಸೋಂಕಿತರ ಸಂಪರ್ಕದಲ್ಲಿದ್ದ ಒಟ್ಟು ಏಳು ಜನರನ್ನು ವಶಕ್ಕೆ ಪಡೆದು ವೈದ್ಯಾಧಿಕಾರಿಗಳು ಪರೀಕ್ಷೆಗೆ ಒಳಪಡಿಸಿದ್ದು, ಅವರ ರಕ್ತದ ಮಾದರಿ ಹಾಗೂ ಗಂಟಲು ದ್ರವನನ್ನು ಪರೀಕ್ಷೆಗೆ ರವಾನಿಸಲಾಗಿದೆ.
ವೈದ್ಯರು ಇವರೆಲ್ಲರ ವೈದ್ಯಕೀಯ ವರದಿಗಾಗಿ ಎದುರು ನೋಡುತ್ತಿದ್ದಾರೆ. ಸದ್ಯಕ್ಕೆ ಹೊಸಪೇಟೆಯ ಎಸ್.ಆರ್.ನಗರವನ್ನ ಸಂಪೂರ್ಣ ವಶಕ್ಕೆ ಪಡೆದಿರುವ ಜಿಲ್ಲಾಡಳಿತ ಇಲ್ಲಿಗೆ ಸಂಪರ್ಕಿಸುವ ಎಲ್ಲ ರಸ್ತೆಗಳನ್ನು ಬಂದ್ ಮಾಡಿದೆ. ಅಲ್ಲದೇ, ಬೇರೆ ಪ್ರದೇಶದ ನಿವಾಸಿಗಳು ಈ ಪ್ರದೇಶ ಸಂಪರ್ಕಿಸದಂತೆ ಮುನ್ನೆಚ್ಚರಿಕೆ ವಹಿಸಿದ್ದು, ಈ ಸೋಂಕು ಮತ್ತಷ್ಟು ಜನರಲ್ಲಿ ಹೆಚ್ಚುವ ಸಾಧ್ಯತೆ ಇದೆ ಎನ್ನಲಾಗಿದೆ.
ಪೊಲೀಸರು ಈ ಪ್ರದೇಶಾದ್ಯಂತ ಕಟ್ಟುನಿಟ್ಟಿನ ಎಚ್ಚರಿಕೆ ವಹಿಸಿದ್ದು, ವ್ಯಾಪಕ ಕಟ್ಟೆಚ್ಚರ ವಹಿಸಿದ್ದಾರೆ. ಅಲ್ಲದೇ ಅನಾವಶ್ಯಕವಾಗಿ ಯಾರೋ ಮನೆಯಿಂದ ಹೊರಬಂದರೂ ಅಂತವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/03/corona-possitive.gif)