ಬೆಂಗಳೂರು:
ಮೈತ್ರಿ ಸರ್ಕಾರದ ಉಳಿವಿಗಾಗಿ ಮುಂಬೈನಲ್ಲಿರುವ ಅತೃಪ್ತ ಶಾಸಕರ ಭೇಟಿಗೆ ಯತ್ನಿಸಿದ್ದ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಎಐಸಿಸಿ ಮುಖಂಡರಾದ ಗುಲಾಂ ನಬಿ ಆಜಾದ್, ಜೆಡಿಎಸ್ ವರಿಷ್ಟ ದೇವೇಗೌಡ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅತೃಪ್ತರ ಮನವೊಲಿಕೆಗೆ ಮುಂಬೈಗೆ ತೆರಳದಿರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಈಗಾಗಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈ ಸೇರಿರುವ 13 ಶಾಸಕರು ಸುತಾರಾಂ ರಾಜೀನಾಮೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಅವರ ಮನವೊಲಿಸಲು ಡಿಕೆಶಿ ಮಾಡಿದ ಪ್ರಯತ್ನ ವ್ಯರ್ಥವಾಗಿದ್ದು, ಇಂದು ದೋಸ್ತಿ ಪಕ್ಷಗಳ ಟಾಪ್ ನಾಯಕರಾದ ಮನವೊಲಿಕೆಗೆ ಖರ್ಗೆ, ಗುಲಾಂ ನಬಿ ಆಜಾದ್ ಹಾಗೂ ದೊಡ್ಡ ಗೌಡರು ಆಗಮಿಸುವ ಮಾಹಿತಿ ಲಭ್ಯವಾಗಿತ್ತು.
ಆದರೆ, ಕಾಂಗ್ರೆಸ್ ನ ಹಿರಿಯ ಮುಖಂಡರು ತಮ್ಮ ಭೇಟಿಗೆ ಬರುತ್ತಿದ್ದು, ತಮಗೆ ಅಪಾಯದ ಭೀತಿ ಎಂದು ಅತೃಪ್ತ ಶಾಸಕರು ಮುಂಬೈ ಪೊಲೀಸರಿಗೆ ದೂರು ನೀಡಿದ್ದರು. ಜೊತೆಗೆ ಪೊಲೀಸರು ರಕ್ಷಣೆ ನೀಡದಿದ್ದಲ್ಲಿ ಸುಪ್ರೀಂಕೋರ್ಟ್ ಮೊರೆ ಹೋಗಲು ಅತೃಪ್ತ ಶಾಸಕರು ನಿರ್ಧರಿಸಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರು ಅತೃಪ್ತ ಶಾಸಕರ ಭೇಟಿ ಯತ್ನವನ್ನು ಕೈ ಬಿಟ್ಟಿದ್ದಾರೆ.
ಈ ಮೂಲಕ ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳುವ ಕೊನೇ ಕಸರತ್ತನ್ನೂ ಕಾಂಗ್ರೆಸ್ ನಾಯಕರು ಕೈ ಬಿಟ್ಟಿದ್ದಾರೆ ಎನ್ನಲಾಗಿದೆ. ಕರ್ನಾಟಕ ರಾಜಕೀಯ ತೂಗುಯ್ಯಾಲೆ ಮೇಲಿದ್ದು ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು ಎಂಬ ಸ್ಥಿತಿ ನಿರ್ಮಾಣವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2019/07/congress-rebels.gif)