ಬೆಂಗಳೂರು :
75 ವರ್ಷದ ಮಿತಿಯಂತೆ ಮೋದಿ, ಅಮಿತ್ ಶಾ ಕೈಗೊಳ್ಳುವ ತೀರ್ಮಾನಕ್ಕೆ ನಾನು ಬದ್ದನಿದ್ದೇನೆ, ಸ್ಥಾನಮಾನ ಇರಲಿ ಬಿಡಲಿ ನಾನು ಪಕ್ಷದ ಕೆಲಸ ಮಾಡಿಕೊಂಡಿರುತ್ತೇನೆ, ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಪ್ರೆಸ್ ಕ್ಲಬ್ ಮತ್ತು ವರದಿಗಾರರ ಕೂಟ ಆಯೋಜಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಡ್ವಾಣಿ, ಮುರುಳೀ ಮನೋಹರ್ ಜೋಷಿ ಅವರನ್ನು ಪಕ್ಷದಲ್ಲಿ ಮೂಲೆಗುಂಪು ಮಾಡಲು ಸಾಧ್ಯವಿಲ್ಲ. ಅವರು ನಮಗೆ ಮಾರ್ಗದರ್ಶನ ಮಾಡಲಿದ್ದಾರೆ. ನಾಳೆ ಯಡಿಯೂರಪ್ಪ ಅವರಿಗೂ ವಯಸ್ಸಾಗಲಿದೆ, ನಾನು ರಾಷ್ಟ್ರೀಯ ಪಕ್ಷದ ಕಾರ್ಯಕರ್ತ, ಮೋದಿ, ಶಾ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ದನಾಗಿರಲಿದ್ದೇನೆ. ಹಿಂದೆ ರಾಜ್ಯದ ಉದ್ದಗಲಕ್ಕೆ ಓಡಾಡಿ ಕೆಲಸ ಮಾಡಿದ್ದೆ ಆಗ ಯಾವುದೇ ಸ್ಥಾನ ಇರಲಿಲ್ಲ, ಈಗ ಸ್ಥಾನಮಾನ ಇದೆ, ಮುಂದೆಯೂ ಯಾವುದೇ ಸ್ಥಾನಮಾನ ಇರಲಿ ಬಿಡಲಿ ನಾನು ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ ರಾಜ್ಯದ ಉದ್ದಗಲಕ್ಕೆ ಪ್ರವಾಸ ಮಾಡಲಿದ್ದೇನೆ ಎಂದರು.
ಯಾರೂ ರಾಜಕಾರಣದಲ್ಲಿ ಶಾಶ್ವತ ಅಲ್ಲ, ಅಟಲ್ ಬಿಹಾರಿ ವಾಜಪೇಯಿ ಬಳಿಕ ಯಾರೂ ಉತ್ತರಾಧಿಕಾರಿ ಇರಲಿಲ್ಲ, ಗುಜರಾತ್ ಸಿಎಂ ಆಗಿದ್ದ ಮೋದಿ ಬಂದರು. ಇಲ್ಲಿಯೂ ಅಷ್ಟೇ ನನ್ನ ಬಳಿಕ ಯಾರೂ ಉತ್ತರಾಧಿಕಾರಿ ಆಗಲ್ಲ, ಸಂದರ್ಭಕ್ಕೆ ತಕ್ಕಂತೆ ಯಾರೋ ಒಬ್ಬರು ಬರುತ್ತಾರೆ, ನಮ್ಮದು ರಾಷ್ಟ್ರೀಯ ಪಕ್ಷ. ಯಾರಾದರೂ ಬರುತ್ತಾರೆ ಪಕ್ಷವನ್ನು ಮುನ್ನಡೆಸಿಕೊಂಡು ಹೋಗುತ್ತಾರೆ ಎಂದರು.
ಅಡ್ವಾಣಿ ನಮ್ಮ ಅಗ್ರಗಣ್ಯ ನಾಯಕ, ಅವರ ಹೇಳಿಕೆಗೆ ನಮ್ಮ ಸಂಪೂರ್ಣ ಬೆಂಬಲ ಸಹಮತ ಇದೆ ಎಂದು ಮೋದಿ ಹೇಳಿದ್ದಾರೆ, ನಮ್ಮೆಲ್ಲರಿಗೂ ಮುಂದಿನ ಮಾರ್ಗದರ್ಶನ ಮಾಡುವ ಮಾತನ್ನು ಅಡ್ವಾಣಿ ಹೇಳಿದ್ದಾರೆ ಅದನ್ನು ಒಪ್ಪುತ್ತೇವೆ ಎಂದು ಅಡ್ವಾಣಿ ಬ್ಲಾಗ್ ನಲ್ಲಿ ಬರೆದುಕೊಂಡಿರುವುದನ್ನು ಸಮರ್ಥಿಸಿಕೊಂಡರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ