ಬೆಂಗಳೂರು :
ಈ ಬಾರಿ ಬಿಬಿಎಂಪಿ ಬಿಜೆಪಿ ತೆಕ್ಕೆಗೆ ಜಾರಲಿದೆ ಎಂಬ ಸುಳಿವನ್ನು ರಾಜರಾಜೇಶ್ವರಿ ನಗರ ಅನರ್ಹ ಶಾಸಕ ಮುನಿರತ್ನ ನೀಡಿದ್ದಾರೆ.
ಸೆಪ್ಟೆಂಬರ್ 28 ಕ್ಕೆ ಈಗಿನ ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಅಧಿಕಾರವಧಿ ಮುಗಿಯಲಿದ್ದು, ಮುಂದಿನ ಅವಧಿಗೆ ಮೇಯರ್ ಯಾರು ಎಂಬ ಬಗ್ಗೆ ಈಗಾಗಲೇ ಮೂರು ಪಕ್ಷಗಳಲ್ಲಿಯೂ ಭರ್ಜರಿ ಸಿದ್ಧತೆ ಆರಂಭವಾಗಿದೆ.
ಈ ಹಿನ್ನೆಲೆಯಲ್ಲಿ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಗಿಂತ ಹೆಚ್ಚಾಗಿಯೇ ತಾಲೀಮು ನಡೆಸುತ್ತಿದೆ. ಈಗಾಗಲೇ ಬಿಬಿಎಂಪಿ ಬಜೆಟ್ ಗೆ ತಡೆ ನೀಡಿದ್ದು, ಬೆಂಗಳೂರಿನಲ್ಲಿ ಹಿಂದಿನ ಸರ್ಕಾರದಲ್ಲಿ ನಡೆದಿರುವ ಕೆಲವು ಟೆಂಡರ್ ಗಳು ರಸ್ತೆ ವೈಟ್ ಟ್ಯಾಪಿಂಗ್ ಹಗರಣ ಸಂಬಂಧ ತನಿಖೆ ನಡೆಸುವುದಾಗಿಯೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಸದ್ಯ ಬಜೆಟ್ ತಡೆ ನೀಡಿ ಮುಂದೆ ತಮ್ಮ ಪಕ್ಷದ ಅಭ್ಯರ್ಥಿಯನ್ನು ಮೇಯರ್ ಆಗಿಸಿ ಮತ್ತೆ ಬಜೆಟ್ ಮಂಡಿಸುವ ಯೋಜನೆ ಬಿಜೆಪಿಯದ್ದಾಗಿದೆ. ಹೀಗಾಗಿ ಬಿಜೆಪಿ ಮೇಯರ್ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿಯ ಹುಡುಕಾಟ ನಡೆಸುತ್ತಿದೆ.
ಈ ಮಧ್ಯೆ ಬಿಜೆಪಿಯ ಅಭ್ಯರ್ಥಿಯೇ ಈ ಬಾರಿ ಬಿಬಿಎಂಪಿ ಮೇಯರ್ ಆಗಲಿದ್ದಾರೆ ಎಂಬ ಸುಳಿವನ್ನು ಮುನಿರತ್ನ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿಯಲ್ಲಿ ಸಂಖ್ಯಾಬಲ ಇರುವವರೇ ಮೇಯರ್ ಆಗುತ್ತಾರೆ.
ನಾಲ್ಕು ವರ್ಷದ ಹಿಂದೆನೇ ಬಿಜೆಪಿಯವರೇ ಮೇಯರ್ ಆಗಬೇಕಿತ್ತು. ಬಿಬಿಎಂಪಿ ಯಲ್ಲಿ ನಾಲ್ಕು ವರ್ಷದ ಹಿಂದೆಯೇ ಆಪರೇಷನ್ ಕಮಲ ನಡೆದಿತ್ತು ಎಂದರು. ಆಪರೇಷನ್ ಕಮಲಕ್ಕೆ ಸಹಕರಿಸಿ ಪಕ್ಷ ಮತ್ತು ಶಾಸಕ ಸ್ಥಾನದಿಂದ ಗೋಪಾಲಯ್ಯ ಅನರ್ಹರಾಗಿದ್ದಾರೆ. ಗೋಪಾಲಯ್ಯ ಪತ್ನಿ ಹೇಮಲತಾ ಸದ್ಯ ಬಿಬಿಎಂಪಿ ಆರ್ಥಿಕಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದು, ಪತಿ ಹಿಡಿದ ಹಾದಿಯನ್ನೇ ಹೇಮಲತಾ ತುಳಿಯಲಿದ್ದಾರೆ. ಮೇಯರ್ ಸ್ಥಾನದ ಮೇಲೆ ಕಣ್ಣಿಟ್ಟಿರುವ ಹೇಮಲತಾ ಬಿಜೆಪಿ ಸೇರುವ ಸಾಧ್ಯತೆ ಇದೆ ಎಂದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2018/09/BBMP_elections_2.gif)