ಬೆಂಗಳೂರು:
ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ನೂತನ ಸಚಿವರಾಗಿ ಅಧಿಕಾರ ವಹಿಸಿಕೊಂಡವರಿಗೆ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ. ಕಾಂಗ್ರೆಸ್ ನಿಂದ ಸಚಿವರಾದವರಿಗೆ ನೀಡಲಾಗಿರುವ ಖಾತೆಗಳ ವಿವರ ಇಂತಿದೆ.
ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಬಳಿಯಿದ್ದ ಗೃಹ ಖಾತೆಯನ್ನು ನೂತನ ಸಚಿವರಾಗಿ ಇತ್ತೀಚೆಗೆ ಪ್ರಮಾಣ ಸ್ವೀಕರಿಸಿದ ಎಂ.ಬಿ.ಪಾಟೀಲ್ ಅವರಿಗೆ ನೀಡಲಾಗಿದೆ. ಸದ್ಯ ಪರಮೇಶ್ವರ್ ಬಳಿ ಡಿಸಿಎಂ ಅಲ್ಲದೆ ಬೆಂಗಳೂರು ನಗರಾಭಿವೃದ್ಧಿ, ಕಾನೂನು ಸಂಸದೀಯ ವ್ಯವಹಾರ ಮತ್ತು ಮಾನವ ಹಕ್ಕು, ಐಟಿ-ಬಿಟಿ ಹಾಗೂ ವಿಜ್ಞಾನ-ತಂತ್ರಜ್ಞಾನ ಖಾತೆ ಇವೆ.
ಡಿ.ಕೆ. ಶಿವಕುಮಾರ್ ಅವರಿಗೆ ಜಲ ಸಂಪನ್ಮೂಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹೊಣೆ ನೀಡಲಾಗಿದೆ.
ಆರ್.ವಿ. ದೇಶಪಾಂಡೆ ಅವರಿಗೆ ಕಂದಾಯ, ಕೆ.ಜೆ. ಜಾರ್ಜ್ ಅವರಿಗೆ ಸಣ್ಣ ಮತ್ತು ಮಧ್ಯಮ ಕೈಗಾರಿಕೆ, ಕೃಷ್ಣಭೈರೇಗೌಡ ಅವರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಜವಾಬ್ದಾರಿ ನೀಡಲಾಗಿದೆ.
ಯು.ಟಿ. ಖಾದರ್ ಅವರಿಗೆ ನಗರಾಭಿವೃದ್ಧಿ, ಜಯಮಾಲಾ ಅವರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಎಂ.ಬಿ. ಪಾಟೀಲ್ ಅವರಿಗೆ ಗೃಹ, ಸತೀಶ್ ಜಾರಕಿಹೊಳಿ ಅವರಿಗೆ ಅರಣ್ಯ ಖಾತೆಯ ಜವಾಬ್ದಾರಿ ವಹಿಸಲಾಗಿದೆ. ಸಿ.ಎಸ್. ಶಿವಳ್ಳಿ ಅವರಿಗೆ ಪೌರಾಡಳಿತ, ಎಂ.ಟಿ.ಬಿ. ನಾಗರಾಜ್ ಅವರಿಗೆ ವಸತಿ. ಇ.ತುಕಾರಾಂ ಅವರಿಗೆ ವೈದ್ಯಕೀಯ ಶಿಕ್ಷಣ, ಶಿವಶಂಕರ ರೆಡ್ಡಿ ಅವರಿಗೆ ಕೃಷಿ, ಪ್ರಿಯಾಂಕ್ ಖರ್ಗೆಗೆ ಸಮಾಜ ಕಲ್ಯಾಣ ಇಲಾಖೆ ಜವಾಬ್ದಾರಿ ನೀಡಲಾಗಿದೆ.
ಜಮೀರ್ ಅಹಮದ್ ಖಾನ್ ಗೆ ಆಹಾರ ಮತ್ತು ನಾಗರಿಕ ಇಲಾಖೆ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಜವಾಬ್ದಾರಿ ನೀಡಲಾಗಿದೆ. ಶಿವಾನಂದ ಪಾಟೀಲರಿಗೆ ಆರೋಗ್ಯ, ರಾಜಶೇಖರ್ ಪಾಟೀಲ್ ಅವರಿಗೆ ಗಣಿ, ಸಿ. ಪುಟ್ಟರಂಗಶೆಟ್ಟಿ ಅವರಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪಿ.ಟಿ. ಪರಮೇಶ್ವರ ನಾಯ್ಕ್ ಅವರಿಗೆ ಮುಜರಾಯಿ, ಕೌಶಲ್ಯ ಅಭಿವೃದ್ಧಿ ಖಾತೆ, ರಹೀಂ ಖಾನ್ ಅವರಿಗೆ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ, ಆರ್.ಬಿ. ತಿಮ್ಮಾಪುರ ಅವರಿಗೆ ಬಂದರು ಒಳನಾಡು ಸಾರಿಗೆ ಇಲಾಖೆ ಹೊಣೆ ನೀಡಲಾಗಿದೆ.
ಈ ಬಗ್ಗೆ ಕೆಪಿಸಿಸಿ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಖಾತೆ ಮರುಹಂಚಿಕೆ ಕುರಿತಂತೆ ಮುಖ್ಯಮಂತ್ರಿಗೆ ಪಟ್ಟಿಯೊಂದನ್ನು ಸಲ್ಲಿಸಿದ್ದಾರೆ. ಅಧಿಕೃತ ಖಾತೆ ಹಂಚಿಕೆಯನ್ನು ಮುಖ್ಯಮಂತ್ರಿ ಇನ್ನಷ್ಟೇ ಪ್ರಕಟಿಸಬೇಕಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2018/12/unnamed-file-e1545977645921.gif)