ಬೆಂಗಳೂರು :
ಜೂಜು ಅಡ್ಡೆ ಮೇಲೆ ದಾಳಿ ನಡೆಸಿ, ಜೂಜಾಟದಲ್ಲಿ ತೊಡಗಿದ್ದ 65 ಜನರನ್ನ ಸಿಸಿಬಿ ಪೊಲೀಸರು ಬಂಧಿಸಿ, 80 ಲಕ್ಷಕ್ಕೂ ಅಧಿಕ ನಗದು ಹಣವನ್ನ ಜಪ್ತಿ ಮಾಡಿದ್ದಾರೆ.
ಆಂಧ್ರ ಪ್ರದೇಶ ವ್ಯಕ್ತಿಯ ಮಾಲಿಕತ್ವದ ಪ್ರತಿಷ್ಠಿತ ಹೋಟೆಲ್ ಒಂದರಲ್ಲಿ ಆಂಧ್ರಪ್ರದೇಶ ದಿಂದ ಬಂದಿದ್ದ ಸುಮಾರು 65ಕ್ಕೂ ಹೆಚ್ಚು ಜನರ ಗುಂಪು ಮಹದೇವಪುರ ಬಳಿಯ ಖಾಸಗಿ ಹೊಟೇಲ್ ನಲ್ಲಿ ಜೂಜಾಟದಲ್ಲಿ ತೊಡಗಿದ್ದರು.
ಜೂಜಾಟ ನಡೆಯುವ ಖಚಿತ ಮಾಹಿತಿ ಪಡೆದ ಸಿಸಿಬಿ ಡಿಸಿಪಿ ರವಿಕುಮಾರ್ ನೇತೃತ್ವದ ತಂಡ ದಾಳಿ ನಡೆಸಿದ್ದಾರೆ.
ಹೋಟೆಲ್ ಬಳಿ ಜಮಾಯಿಸಿ ಗ್ಯಾಂಬ್ಲಿಂಗ್ ಅಡ್ಡೆ ಶುರುವಾಗುವುದನ್ನೆ ಕಾದು ಕುಳಿತಿದ್ದರು. ಗ್ಯಾಂಬ್ಲಿಂಗ್ ಶುರುವಾಗುತ್ತಿದ್ದಂತೆ ಸಿಸಿಬಿ ಪೊಲೀಸರ ಒಂದು ತಂಡ ಸುಮಾರು ಐದು ಲಕ್ಷ ರೂಪಾಯಿ ಹಣದೊಂದಿಗೆ ಜೂಜು ಆಡುವ ನೆಪದಲ್ಲಿ ಹೋಟೆಲ್ ಪ್ರವೇಶಿಸಿದರು. ಗ್ಯಾಂಬ್ಲಿಂಗ್ ಆಡಲು ಐದು ಲಕ್ಷ ಮುಂಗಡ ಹಣ ಕಟ್ಟಬೇಕಿದ್ದು, ಪೊಲೀಸರು ಸಹ ಅದರಂತೆ ಹಣ ಸಿದ್ದಪಡಿಸಿಕೊಂಡು ಜೂಜು ಆಡ್ಡೆಗೆ ಎಂಟ್ರಿಯಾಗಿದ್ದರು.
ಜೂಜು ಅಡ್ಡೆ ಆರಂಭವಾಗುತ್ತಿದ್ದಂತೆ ಹೊಟೇಲ್ ಒಳಗಡೆಯಿಂದ ಹೊರಗಡೆ ಇದ್ದ ಸಿಸಿಬಿ ಪೊಲೀಸರಿಗೆ ಮಾಹಿತಿ ರವಾನೆಯಾಗಿದೆ. ಕೂಡಲೇ ಸಿಸಿಬಿ ಡಿಸಿಪಿ ರವಿಕುಮಾರ್ ನೇತೃತ್ವದ ಸುಮಾರು 30 ಸಿಸಿಬಿ ಪೊಲೀಸರ ತಂಡ ಹೋಟೆಲ್ ಮೇಲೆ ದಾಳಿ ನಡೆಸಿ ಶೋಧ ಕೈಗೊಂಡಿದ್ದಾರೆ. ಈ ವೇಳೆ ಪ್ರತಿಯೊಬ್ಬರ ಬಳಿ ಲಕ್ಷ ಲಕ್ಷ ಹಣ ಪತ್ತೆಯಾಗಿದೆ.
ಸದ್ಯ ಸಿಸಿಬಿ ಪೊಲೀಸರು 65 ಜನರನ್ನ ಬಂಧಿಸಿ 80 ಲಕ್ಷ ನಗದು ಹಣವನ್ನ ಜಪ್ತಿ ಮಾಡಿದ್ದಾರೆ.ಅಲ್ಲದೆ ಇನ್ನೂ ಪರಿಶೀಲನೆ ಮುಂದುವರೆದಿದ್ದು ಮತ್ತಷ್ಟು ಹಣ ಪತ್ತೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/10/Juju-df.jpg)