ಚಾಮರಾಜನಗರ:
ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಗುಂಡ್ಲುಪೇಟೆ ಪಟ್ಟಣದ ಜಾಕೀರ್ ಹುಸೇನ್ ನಗರದಲ್ಲಿ ನಡೆದಿದೆ.
ರಂಜಾನ್ ಮುಗಿದ ಬಳಿಕ ಮಂಗಳವಾರ ರಾತ್ರಿ 10 ಗಂಟೆ ವೇಳೆಗೆ ನಡೆದ ಗಲಾಟೆಯಲ್ಲಿ ಇದ್ರಿಸ್ (30), ಕೈಸರ್ (30), ಜಕ್ಕಾವುಲ್ಲಾ (35) ಮತ್ತು ನಸ್ರುಲ್ಲಾ ಕೊಲೆಗೀಡಾದ ದುರ್ದೈವಿಗಳೆಂದು ತಿಳಿದು ಬಂದಿದೆ. ಮೃತರು ಪಟ್ಟಣದ ಪುರಸಭೆ ಸದಸ್ಯ ನೂರುಲ್ಲಾ ಗುಂಪಿನವರಾಗಿದ್ದರು.
ಮೂಲಗಳ ಪ್ರಕಾರ ಪಟ್ಟಣದ ಪುರಸಭೆ ಸದಸ್ಯ ನೂರುಲ್ಲಾ ಗುಂಪಿನ ಮತ್ತು ಮತ್ತೊಂದು ಗುಂಪಿನ ನಡುವೆ ಹಿಂದೆಯೂ ಘರ್ಷಣೆ ನಡೆದಿತ್ತು. ಆಗ ಕೆಲ ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಹೀಗಾಗಿ ಎರಡು ಗುಂಪುಗಳ ನಡುವೆ ವೈಷಮ್ಯ ಜೋರಾಗಿಯೇ ವಿತ್ತು. ಇದೇ ವಿಚಾರವಾಗಿ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡಿಕೊಂಡು ಮತ್ತೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆದಾಡಿಕೊಂಡಿದ್ದಾರೆ ಎನ್ನಲಾಗಿದೆ.
ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆಯ ಬಳಿಕ ಇಡೀ ಬಡಾವಣೆ ಪ್ರಕ್ಷುಬ್ಧಗೊಂಡಿದ್ದು, ಸ್ಥಳೀಯ ನಿವಾಸಿಗರು ಆತಂಕಗೊಂಡಿದ್ದಾರೆ. ಬಡಾವಣೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/05/Murder.gif)