ಚಿತ್ರದುರ್ಗ :
ನಗರದ ಗಾಂಧಿ ವೃತ್ತದ ಹಳೆ ಕಟ್ಟಡ ನೆಲಸಮಗೊಳಿಸಿದ ಖಾಲಿ ಜಾಗದಲ್ಲಿ ಗೂಡಾಂಗಡಿ ಮಾಲೀಕರು ವ್ಯಾಪಾರ ಮಾಡಲು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ತಾತ್ಕಾಲಿಕವಾಗಿ ಅವಕಾಶ ಮಾಡಿಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಭಾನುವಾರ ನೂರಾರು ಗೂಡಾಂಗಡಿಗಳನ್ನು ನಗರಸಭೆ ಅಧಿಕಾರಿಗಳು ಪೊಲೀಸರ ಸರ್ಪಗಾವಲಿನ ನಡುವೆ ತೆರವುಗೊಳಿಸಿದ್ದರು. ಕೈ ಮುಗಿದು ಬೇಡಿಕೊಂಡರೂ ಅಧಿಕಾರಿಗಳು ತೆರವು ಕಾರ್ಯಚರಣೆ ನಿಲ್ಲಿಸಲಿಲ್ಲ. ಅಂಗಡಿಗಳನ್ನು ಕಳೆದುಕೊಂಡ ನೂರಾರು ಜನರು ಪ್ರವಾಸಿಮಂದಿದರಲ್ಲಿ ಶಾಸಕರನ್ನು ಭೇಟಿ ಮಾಡಿ ತಮ್ಮ ಅಳಲು ತೋಡಿಕೊಂಡರು.
ಸ್ವಾಮಿ ಬೆಳಿಗ್ಗೆಯಿಂದ ಸಂಜೆವರೆಗೂ ಬೀದಿಯಲ್ಲಿ ವ್ಯಾಪಾರ ಮಾಡಿ ಬದುಕು ನಡೆಸುತ್ತಿದ್ದೇವು. ಏಕಾಏಕಿ ತೆರವುಗೊಳಿಸಿದ್ದರಿಂದ ಜೀವನಕ್ಕೆ ತೊಂದರೆಯಾಗಿದೆ. ನಿತ್ಯ ವ್ಯಾಪಾರ ಮಾಡಿ ಬದುಕು ನಡೆಸಬೇಕೆ ಹೊರತು ನಮ್ಮ ಬಳಿ ಯಾವುದೇ ಉಳಿತಾಯ ಹಣವಿಲ್ಲ. ದಯವಿಟ್ಟು ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.
ತಕ್ಷಣ ಪೌರಾಯುಕ್ತ ಸಿ.ಚಂದ್ರಪ್ಪ, ತಹಸೀಲ್ದಾರ್ ಕಾಂತರಾಜ್ ಅವರನ್ನು ಬರಮಾಡಿಕೊಂಡ ಶಾಸಕರು, ಇದರ ಬಗ್ಗೆ ಸಮಾಲೋಚನೆ ಮಾಡಿದರು. ಸೊಪ್ಪಿನ ಮಾರುಕಟ್ಟೆ ಬಳಿ ಹೊಸ ಸೂಪರ್ ಮಾರುಕಟ್ಟೆ ನಿರ್ಮಾಣ ಖಾಲಿ ಜಾಗದಲ್ಲಿ 20ಕ್ಕೂ ಹೆಚ್ಚು ಹಣ್ಣು ವ್ಯಾಪಾರಿಗಳಿಗೆ ತಾತ್ಜಾಲಿಕವಾಗಿ ಮಾರಾಟ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಸೂಚನೆ ನೀಡಿದರು.
ಕುಂಕುಮ, ನಿಂಬೆಹಣ್ಣು, ತರಕಾರಿ, ಫಾಸ್ಟ್ಪುಡ್, ಬಾಳೆಹಣ್ಣು ಹಾಗೂ ಇತರರಿಗೆ ಗಾಂಧಿವೃತ್ತದಲ್ಲಿ ಹಳೆ ಕಟ್ಟಡ ನೆಲಸಮಗೊಳಿಸಿದ ಖಾಲಿ ಜಾಗದಲ್ಲಿ ತಾತ್ಕಾಲಿಕವಾಗಿ ಅವಕಾಶ ಮಾಡಿಕೊಡಬೇಕು. ಯಾವುದೇ ಕಾರಣಕ್ಕೂ ಸಂಚಾರಕ್ಕೆ ಅಡ್ಡಿ ಮಾಡಬಾರದು. ನಗರಸಭೆ ಅಧಿಕಾರಿಗಳು ಯಾವಾಗ ತೆರವುಗೊಳಿಸಬೇಕೆಂದು ಹೇಳುತ್ತಾರೋ ಆಗ ಗಲಾಟೆ ಮಾಡದೆ ತೆರವುಗೊಳಿಸಬೇಕು ಎಂದು ಹೇಳಿದರು. ಇದಕ್ಕೆ ವ್ಯಾಪಾರಿಗಳು ಒಪ್ಪಿಕೊಂಡರು.
ಮೊದಲು ಮಹಿಳೆಯರಿಗೆ ಅವಕಾಶ ಮಾಡಿಕೊಟ್ಟು ನಂತರ ಇತರರಿಗೆ ಅಂಗಡಿ ಇಟ್ಟುಕೊಳ್ಳಲು ಜಾಗ ಮಾಡಿಕೊಡಿ. ಯಾರಾದರೂ ತಕರಾರು ಮಾಡಿದರೆ ಸುಮ್ಮನಿರುವುದಿಲ್ಲ. ಎಲ್ಲರೂ ಬಡವರು. ಬಡವರ ಕಷ್ಟ ಏನೆಂಬುದು ಗೊತ್ತಿದೆ. ಸುಮ್ಮನೆ ವ್ಯಾಪಾರ ಮಾಡಿಕೊಂಡು ಹೋಗಿ ರಸ್ತೆಯಲ್ಲಿ ಓಡಾಡುವರೆಗೆ ಅನುಕೂಲ ಮಾಡಿಕೊಡುವಂತೆ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ