ಬೆಂಗಳೂರು:
ಕನ್ನಡ ಚಿತ್ರರಂಗದ ಖ್ಯಾತ ನಟ ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ್ ವಿರುದ್ಧ ಕುಮಾರಸ್ವಾಮಿ ಗರಂ ಆಗಿದ್ದಾರೆ.
ಮಾಜಿ ಶಾಸಕ ಪ್ರಕಾಶ್ ನಿಧನದ ಹಿನ್ನೆಲೆಯಲ್ಲಿ ಅಂತಿಮ ದರ್ಶನಕ್ಕಾಗಿ ಹಾಸನಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಅನಿರುದ್ಧ್ ಅವರ ಹೇಳಿಕೆಯಿಂದ ನನಗೆ ನೋವಾಗಿದೆ ಎಂದರು.
ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಸ್ಮಾರಕ ನಿರ್ಮಾಣ ಮಾಡಲಿ ಅಂತಾ ಅನಿರುದ್ಧ್ ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿವೆ. ಪದ ಬಳಕೆ ಮಾಡುವಾಗ ಪದಗಳ ಗಾಂಭೀರ್ಯತೆಯನ್ನು ಅರ್ಥ ಮಾಡಿಕೊಳ್ಳಬೇಕು. ಕಲಾವಿದರು ಮಾಡಿದ ಕೆಲಸಕ್ಕೆ ಸರ್ಕಾರ ಗೌರವ ಕೊಟ್ಟಿದ್ದೇವೆ ಎಂದು ಸಿಎಂ ಕಿಡಿಕಾರಿದರು.
ವಿಷ್ಣುವರ್ಧನ್ ನಿಧನರಾದ ಸಂದರ್ಭದಲ್ಲಿ ನಾನು ಮುಖ್ಯಮಂತ್ರಿಯಾಗಿರಲಿಲ್ಲ. ಆದರೂ ಸ್ಮಾರಕ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಂಬರೀಶ್ ಅವರ ಜೊತೆ ಮಾತನಾಡಿದ್ದೆ ಎಂದು ಹೇಳಿದ ಕುಮಾರಸ್ವಾಮಿಯವರು, ಈ ವಿಚಾರದಲ್ಲಿ ರಾಜಕೀಯ ಮಾಡುವ ಮೂಲಕ ದಬ್ಬಾಳಿಕೆ ಮಾಡುವುದು ಬೇಡ. ಎಲ್ಲರೊಂದಿಗೆ ಚರ್ಚಿಸಿ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಭಾರತಿ ಕ್ಷಮೆ :
ಅಳಿಯನ ಹೇಳಿಕೆ ವಿವಾದಕ್ಕೆ ಗುರಿಯಾದ ಬೆನ್ನಲ್ಲೇ ಭಾರತಿ ವಿಷ್ಣುವರ್ಧನ್ ಅವರು ಮಾಧ್ಯಮವೊಂದರಲ್ಲಿ ಅಳಿಯನ ಪರವಾಗಿ ಸಿಎಂ ಎಚ್ಡಿಕೆಯವರ ಕ್ಷಮೆ ಯಾಚಿಸಿದ್ದಾರೆ. ಮಾತ್ರವಲ್ಲದೆ ವಿಷ್ಣು ಸ್ಮಾರಕ ಮೈಸೂರಿನಲ್ಲೇ ಆಗಬೇಕು. ರಾಜ್ಕುಮಾರ್ ಮತ್ತು ಅಂಬರೀಷ್ ಅವರ ಸ್ಮಾರಕದ ಜೊತೆಯಲ್ಲಿ ಬೇಡ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
