ಮೈಸೂರು :

‘ಲಾಟರಿಯಿಂದ ಬಂದವರು ಲಾಟರಿಯಿಂದಲೇ ಹೋಗುತ್ತಾರೆ’ ಎನ್ನುವ ಮೂಲಕ ಸಿಎಂ ಕುಮಾರಸ್ವಾಮಿ ಯವರ ಮೈತ್ರಿ ಸರ್ಕಾರವನ್ನು ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಟರಿ ಬಂದಂತೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರೆ, ಅವರು ಎಷ್ಟು ದಿನ ಮುಖ್ಯಮಂತ್ರಿಯಾಗಿರಲು ಸಾಧ್ಯ. ಲಾಟರಿಯಿಂದ ಬಂದವರು ಲಾಟರಿಯಿಂದಲೇ ಹೋಗುತ್ತಾರೆ. ಇದೊಂದು ಅಪವಿತ್ರ ಮೈತ್ರಿಯಾಗಿದ್ದು, ಖಾಯಿಲೆ ಒಳಗಾಗಿರುವ ಸರ್ಕಾರಕ್ಕೆ ಆಪರೇಷನ್ ಅವಶ್ಯಕವಾಗಿ ಆಗಲೇಬೇಕಿದೆ ಎಂದರು.
ರಾಜ್ಯದಲ್ಲಿ ಅಸ್ಥಿರ ಸರ್ಕಾರ ಅಸ್ತಿತ್ವದಲ್ಲಿದ್ದು, ಈ ಸರ್ಕಾರದ ಬಗ್ಗೆ ಯಾರಿಗೂ ನಿರೀಕ್ಷೆಗಳಿಲ್ಲ. ಆನಂದ್ ಸಿಂಗ್ ರಾಜೀನಾಮೆ ನೀಡುವ ಮೂಲಕ ಸರ್ಕಾರ ಪತನದ ಪ್ರಾರಂಭವಾಗಿದ್ದು, ಇದು ಯಾವ ಹಂತ ಮುಟ್ಟುತ್ತದೆ ಎಂಬುದನ್ನು ಕಾದು ನೋಡಬೇಕಿದೆ ಎಂದು ಅಶೋಕ್ ಭವಿಷ್ಯ ನುಡಿದಿದ್ದಾರೆ.
” ಈ ಸರ್ಕಾರದ ಬಗ್ಗೆ ಮೈತ್ರಿ ನಾಯಕರಿಗೆ ಬೇಸರವಿದೆ. ಸಿಎಂ ಕುಮಾರಸ್ವಾಮಿ ಹಾಗೂ ಸಚಿವ ಡಿ.ಕೆ. ಶಿವಕುಮಾರ್ ಬಿಟ್ಟು ಬೇರೆ ಯಾರಿಗೂ ಈ ರಾಜ್ಯ ಸರ್ಕಾರ ಬೇಕಾಗಿಲ್ಲ. ಅವರ ಒಳ ಬೇಗುದಿಗಳಿಂದಲೇ ಸರ್ಕಾರ ಬಿದ್ದು ಹೋಗಲಿದೆ. ಈ ಸರ್ಕಾರ ಉಳಿಯಲಿದೆ ಎಂಬ ಯಾವ ಭರವಸೆಗಳು ಜನರಲ್ಲಿ ಈಗ ಉಳಿದಿಲ್ಲ” ಎಂದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








