ಕೋವಿಡ್ ನಿರ್ವಹಣೆಗೆ ಅಂತಿಮ ವರ್ಷದ ವಿದ್ಯಾರ್ಥಿಗಳ ನಿಯೋಜನೆ!!

ಬೆಂಗಳೂರು :

      ಕೋವಿಡ್ ಟೆಸ್ಟ್ ಗಳ ನಿಗದಿತ ಗುರಿ ತಲುಪಲು ಕೊರತೆಯಿರುವ ಸಿಬ್ಬಂದಿ ನೇಮಕಕ್ಕೆ ಪ್ರಕೃತಿ ವಿಕೋಪ ನಿರ್ವಹಣೆ ಅಧಿನಿಯಮದ ಅಡಿಯಲ್ಲಿ ಆದೇಶ ಹೊರಡಿಸಿ ನೇಮಕ ಮಾಡಿಕೊಳ್ಳುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

      ನೇರ ನೇಮಕದ ಜೊತೆಗೆ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಅಂತಿಮ ವರ್ಷದ ಪ್ರಯೋಗಾಲಯ ತಂತ್ರಜ್ಞ ಕೋರ್ಸ್ ವಿದ್ಯಾರ್ಥಿಗಳು, ವಿಜ್ಞಾನ ಪದವೀಧರರು ಮತ್ತು ಸ್ವಯಂ ಸೇವಕರನ್ನು ತರಬೇತಿ ನೀಡಿ ಬಳಸಿಕೊಳ್ಳಲು ತಕ್ಷಣ ಆದೇಶ ಹೊರಡಿಸುವಂತೆ ವಿಡಿಯೋ ಸಂವಾದದಲ್ಲಿ ಶುಕ್ರವಾರ ಅಧಿಕಾರಿಗಳಿಗೆ ಸೂಚಿಸಿದರು.

      ರಾಜಧಾನಿ ಬೆಂಗಳೂರಿನಲ್ಲಿ ಪ್ರತಿದಿನ ಕನಿಷ್ಟ 30 ಸಾವಿರ ಟೆಸ್ಟ್ ಮಾಡುವ ಗುರಿ ನೀಡಲಾಗಿದೆ. ಆದರೆ ಸಿಬ್ಬಂದಿ ಕೊರತೆಯಿಂದ ಗುರಿ ತಲುಪಲು ಆಗುತ್ತಿಲ್ಲ. ಈಗಾಗಲೇ ನಗರದಲ್ಲಿರುವ ಎಂಬತ್ತು ಖಾಸಗಿ ಲ್ಯಾಬ್‌ಗಳ ಸಿಬ್ಬಂದಿ, ಪೀವರ್ ಕ್ಲಿನಿಕ್‌ಗಳಲ್ಲಿರುವ ಸಿಬ್ಬಂದಿಗಳನ್ನು ಬಳಸಿಕೊಂಡರು ಗುರಿ ತಲುಪಲು ಸಾಧ್ಯವಾಗುತ್ತಿಲ್ಲ. ಸ್ಯಾಂಪಲ್ ಸಂಗ್ರಹಕ್ಕೆ ಸಂಚಾರಿ ವಾಹನಗಳಿದ್ದರೂ ಸಿಬ್ಬಂದಿ ಕೊರತೆಯಿಂದ ಅವುಗಳನ್ನು ಬಳಸಲಾಗುತ್ತಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ ಹಿನ್ನಲೆಯಲ್ಲಿ ತಕ್ಷಣವೇ ಸಿಬ್ಬಂದಿ ಕೊರತೆ ನೀಗಿಸಲು ನಿಯಮಗಳ ಅಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಆದೇಶಿಸಿದರು.

 ಮಾಹಿತಿ ಸಂಗ್ರಹ :

      ಸಮೀಕ್ಷೆಯಲ್ಲಿ ಸಂಗ್ರಹಿಸುವ ಮಾಹಿತಿಯನ್ನು ವಲಯವಾರು ಅಧಿಕಾರಿ ಮತ್ತು ಸಿಬ್ಬಂದಿಗೆ ಹಂಚಿಕೊಳ್ಳುವ ವ್ಯವಸ್ಥೆ ಸಮರ್ಪಕವಾಗಿ ಆಗುತ್ತಿಲ್ಲ. ಇದಕ್ಕಾಗಿ ಎಲ್ಲ ವಲಯಗಳಲ್ಲು ಸ್ಥಳೀಯ ಮಾಹಿತಿಗಳ ಡ್ಯಾಷ್‌ಬೋರ್ಡ್ ಸ್ಥಾಪನೆ ಮಾಡಿ ವಾರ್‌ರೂಮ್‌ಗೆ ಲಭ್ಯವಾಗುವ ಮಾಹಿತಿಗಳನ್ನು ಹಂಚಿಕೆ ಮಾಡಿಕೊಳ್ಳಬೇಕು. ಮಾಹಿತಿ ವಿಕೇಂದ್ರಿಕೃತಗೊಳ್ಳದಿದ್ದರೆ ಪ್ರಯೋಜನ ಆಗುವುದಿಲ್ಲ. ಇದಕ್ಕೆ ಪೂರಕವಾಗಿ ಡಾಟಾ ಎಂಟ್ರಿ ಆಪರೇಟರ್‌ಗಳನ್ನು ಕಿಯೋನಿಕ್ಸ್ ಮೂಲಕ ನೇಮಕ ಮಾಡಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

      ಜನಪ್ರತಿನಿಧಿಗಳು ಮತ್ತು ಸ್ಥಳೀಯರನ್ನು ಕೋವಿಡ್‌ಗೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವಂತೆ ನೋಡಿಕೊಳ್ಳಬೇಕು. ಕೊರೋನಾ ಸೋಂಕಿತರು, ಕ್ವಾರಂಟೈನ್ ಮತ್ತು ಚಿಕಿತ್ಸೆಗೆ ಸಂಬಂಧಿಸಿದಂತೆ ಜನರಲ್ಲಿ ಅರಿವಿನ ಕೊರತೆಯಿದೆ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ಜಾಗೃತಿ ಆಂದೋಲನಕ್ಕೆ ಕ್ರಿಯಾಯೋಜನೆ ರೂಪಿಸಬೇಕು. ನೇರ ನೇಮಕಕ್ಕೆ ಉತ್ತಮ ಸ್ಪಂದನೆ ಸಿಕ್ಕದ ಕೆಲ ಹುದ್ದೆಗಳಿಗೆ ನಿಗದಿಗೊಳಿಸಿರುವ ವೇತನವನ್ನು ಹೆಚ್ಚಿಸಿ ಮತ್ತೆ ಮಾಧ್ಯಮಗಳ ಮೂಲಕ ಜಾಹಿರಾತು ನೀಡಲು ಸೂಚಿಸಿದರು.

       ಚಾಲನೆಗೆ ಸೂಚನೆ :

      ನಗರದಲ್ಲಿ 12 ಸಾವಿರಕ್ಕೂ ಹೆಚ್ಚು ಕಂಟೈನ್ಮೆಟ್ ಪ್ರದೇಶಗಳಿವೆ. ಇವುಗಳಲ್ಲಿ ಐಎಲ್‌ಐ, ಸಾರಿ ಮತ್ತು ಹಿರಿಯ ನಾಗರೀಕರ ಮನೆ ಮನೆ ಸಮೀಕ್ಷೆಯನ್ನು ಆದಷ್ಟು ತ್ವರಿತವಾಗಿ ಚಾಲನೆ ನೀಡಬೇಕು. ಅಲ್ಲಿ ಸಂಗ್ರಹ ಆಗುವ ಮಾಹಿತಿಯನ್ನು ವಲಯವಾರು ಅಧಿಕಾರಿಗಳ ಜತೆ ಹಂಚಿಕೊAಡು ಕೋವಿಡ್ ಕೇರ್ ಸೆಂಟರ್ ಮತ್ತು ಕೋವಿಡ್ ಆಸ್ಪತ್ರೆಗಳಿಗೆ ದಾಖಲು ಮಾಡುವ ನಿರ್ಣಯ ಕೈಗೊಳ್ಳಬೇಕು. ಆಂಬ್ಯುಲೆನ್ಸ್ ಒದಗಿಸುವ ಕೆಲಸಗಳನ್ನೂ ವಲಯ ಮಟ್ಟದ ತಂಡಗಳು ನಿರ್ವಹಿಸಬೇಕು. ಅದಕ್ಕೆ ಬೇಕಿರುವ ತರಬೇತಿ ಮತ್ತು ಸಿಬ್ಬಂದಿ ನಿಯೋಜನೆಗೂ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸಚಿವ ಸುಧಾಕರ್ ಸೂಚನೆ ನೀಡಿದರು.

     ವಿಡಿಯೋ ಸಂವಾದದಲ್ಲಿ ಹಿರಿಯ ಅಧಿಕಾರಿಗಳಾದ ಶಾಲಿನಿ ರಜನೀಶ್, ಅಜಯ್‌ಸೇಠ್, ಮಂಜುನಾಥ್ ಪ್ರಸಾದ್, ಮನೀಶ್ ಮುದ್ಗಿಲ್, ಸತ್ಯವತಿ, ಡಿ. ರಣದೀಪ್, ಅನ್ಬುಕುಮಾರ್, ಡಾ. ಮಂಜುಳ ಮತ್ತಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap