ಪಟಾಕಿ ಸಿಡಿತದ ಅನಾಹುತಗಳಲ್ಲಿ ಗಣನೀಯ ಇಳಿಕೆ

ಬೆಂಗಳೂರು:

       ದೀಪಗಳ ಹಬ್ಬ ದೀಪಾವಳಿಯನ್ನು ಎರಡನೇ ದಿನವೂ ಉತ್ಸಾಹ ಉಲ್ಲಾಸದಿಂದ ಪರಿಸರ ಸ್ನೇಹಿಯಾಗಿ ಆಚರಿಸಲಾಗುತ್ತಿದ್ದು, ಪಟಾಕಿ ಸಿಡಿತದಿಂದ ಉಂಟಾಗುತ್ತಿದ್ದ ಅನಾಹುತಗಳಲ್ಲಿ ಗಣನೀಯವಾಗಿ ಕಡಿಮೆಯಾಗಿದೆ.

       ಬೆಂಗಳೂರಿನ ಮಿಂಟೋ ಆಸ್ಪತ್ರೆಯಲ್ಲಿ ಕಳೆದ ವರ್ಷ 60ಕ್ಕೂ ಹೆಚ್ಚು ಸುಟ್ಟ ಗಾಯ ಮತ್ತು ಕಣ್ಣಿಗೆ ಹಾನಿಯಾದ ಪ್ರಕರಣಗಳು ವರದಿಯಾಗಿತ್ತು. ಈವರೆಗೆ ಕೇವಲ 6 ಪ್ರಕರಣಗಳು ಮಾತ್ರ ವರದಿಯಾಗಿವೆ. ಅದರಲ್ಲಿ ಒಂದು ಚಿಕ್ಕ ಮಗು ಹೂವಿನ ಕುಂಡ ಹಚ್ಚಲು ಹೋಗಿ ತನ್ನ ಒಂದು ಕಣ್ಣು ಕಳೆದುಕೊಂಡಿದೆ. ಮತ್ತೊಂದು ಮಗುವಿಗೆ ಸಣ್ಣ ಪ್ರಮಾಣದಲ್ಲಿ ಗಾಯವಾಗಿದ್ದು, ಉಳಿದ ನಾಲ್ಕು ಪ್ರಕರಣಗಳು ಅಷ್ಟೇನು ಗಂಭೀರವಾಗಿಲ್ಲ ಎಂದು ಮಿಂಟೋ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

       ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಭಾರೀ ಶಬ್ದದ ಪಟಾಕಿ ಸದ್ದು ಅಡಗಿದೆ. ರಾಜ್ಯದ ಎಲ್ಲಾ ಭಾಗಗಳಲ್ಲು ಹೆಚ್ಚಿನ ಪ್ರಮಾಣದಲ್ಲಿ ಪಟಾಕಿಯಿಂದ ದೂರವಿದ್ದು, ದೀಪದ ಹಣತೆಗಳನ್ನು ಬೆಳಗುವ ಮೂಲಕ ಪರಿಸರ ಸಂರಕ್ಷಣೆಗೆ ಒತ್ತು ನೀಡಿರುವುದು ಕಂಡು ಬಂದಿದೆ.

        ಅಲ್ಲದೇ ಪಟಾಕಿ ಸಿಡಿಸಲು ಸಮಯದ ನಿರ್ಬಂಧ ಇರುವುದರಿಂದ, ಜೊತೆಗೆ ಪಟಾಕಿಯಿಂದಾಗುವ ವಾಯುಮಾಲಿನ್ಯ ಹಾಗೂ ಜನ-ಜಾನುವಾರುಗಳಿಗೆ ಆಗುವ ತೊಂದರೆ ಬಗ್ಗೆ ಜನತೆಯಲ್ಲಿ ವಿಶೇಷವಾಗಿ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಸಾಕಷ್ಟು ಪರಿಣಾಮ ಬೀರಿದ್ದು, ಈ ಬಾರಿ ಪಟಾಕಿ ವ್ಯಾಪಾರ ಇಳಿಮುಖವಾಗಿರುವುದಾಗಿ ವರದಿಯಾಗಿದೆ.

       ಇಂದು ಮತ್ತು ನಾಳೆ ರಾತ್ರಿ 8 ರಿಂದ 10 ಗಂಟೆ ವರಗೆ ಮಾತ್ರ ಪಟಾಕಿ ಹಚ್ಚಲು ಅವಕಾಶವಿದೆ. ಈ ಆದೇಶ ಪಾಲನೆಯ ಬಗ್ಗೆ ಕಟ್ಟುನಿಟ್ಟಿನ ನಿಗಾ ಇಡುವಂತೆ ಪೊಲೀಸ್ ಇಲಾಖೆಗೆ ಸರ್ಕಾರ ಸೂಚನೆ ನೀಡಿದೆ.

      ಸುಪ್ರೀಂ ಕೋರ್ಟ್ ಆದೇಶ ಪಾಲನೆಗೆ ರಾಜ್ಯದ ಎಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ತಾಂತ್ರಿಕ ಅಧಿಕಾರಿ ಮಹೇಶ್ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link