ಬಿಹಾರ್ ಮೂಲದ ನಾಲ್ವರು ಸರಗಳ್ಳರ ಬಂಧನ!!

ದಾವಣಗೆರೆ :

      ಸರಗಳ್ಳ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ಮೂಲದ ನಾಲ್ವರನ್ನು ಬಂಧಿಸಿರುವ ಹೊನ್ನಾಳ್ಳಿ ಮತ್ತು ನ್ಯಾಮತಿ ಪೊಲೀಸರು, ಗ್ರಾಮಾಂತರ ಉಪ ವಿಭಾಗದ ವ್ಯಾಪ್ತಿಯ ಐದು ಪ್ರಕರಣಗಳನ್ನು ಪತ್ತೆ ಹಚ್ಚಿ, 2.36 ಲಕ್ಷ ರೂ. ಮೌಲ್ಯದ 78 ಗ್ರಾಂ ಬಂಗಾರ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್.ಆರ್ ತಿಳಿಸಿದರು.

      ಶನಿವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಹಾರ್ ಮೂಲದ ಅಶೋಕಕುಮಾರ್, ಸುಭೋದ್ ಕುಮಾರ್, ಮನೋಜ್‍ಕುಮಾರ್ ಹಾಗೂ ರೋಹಿತ್‍ಕುಮಾರ್ ಬಂಧಿತ ಆರೋಪಿಗಳಾಗಿದ್ದಾರೆ. ಇವರೆಲ್ಲರೂ ಚಿನ್ನ ಬಂಗಾರ ಪಾಲೀಶ್ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.

      ಜಿಲ್ಲೆಯಲ್ಲಿ ಸರಗಳ್ಳ ಪ್ರಕರಣ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಅವರುಗಳ ಪತ್ತೆಗೆ ಹಾಗೂ ಆರೋಪಿಗಳ ಬಂಧನಕ್ಕಾಗಿ ಗ್ರಾಮಾಂತರ ಡಿವೈಎಸ್‍ಪಿ ಮಂಜುನಾಥ್ ಕೆ. ಗಂಗಲ್ ಉಸ್ತುವಾರಿಯಲ್ಲಿ, ಹೊನ್ನಾಳಿ ಸಿಪಿಐ ಬ್ರಿಜೇಷ್ ಮ್ಯಾಥ್ಯು ಹಾಗೂ ಪಿಎಸ್‍ಐಗಳಾದ ತಿಪ್ಪೇಸ್ವಾಮಿ ಮತ್ತು ಹನುಮಂತಪ್ಪ ಶಿರೀಹಳ್ಳಿ ಅವರುಗಳನ್ನೊಳಗೊಂಡ ತಂಡ ರಚಿಸಲಾಗಿತ್ತು.

      ಈ ತಂಡದಲ್ಲಿದ್ದ ಹೊನ್ನಾಳಿ ಪಿಎಸ್‍ಐ ತಿಪ್ಪೇಸ್ವಾಮಿ ಹಾಗೂ ಸಿಬ್ಬಂದಿಗಳಾದ ಫೈರೋಜ್ ಖಾನ್, ವೆಂಕಟರಮಣ, ಕರಿಬಸಪ್ಪ, ಉಮೇಶ್, ರಾಘವೇಂದ್ರ ಮತ್ತು ಚೇತನ್ ಕುಮಾರ್ ಅವರು ಗಸ್ತುನಲ್ಲಿದ್ದ ಸಂದರ್ಭದಲ್ಲಿ ಹೊನ್ನಾಳ್ಳಿಯಲ್ಲಿ ಅನುಮಾನಸ್ಪದವಾಗಿ ತಿರುಗಾಡುತ್ತಿದ್ದ ಅಶೋಕಕುಮಾರ್ ಹಾಗೂ ಸುಭೋದ್ ಕುಮಾರ್‍ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ತಾವು ಹಲವೆಡೆ ಸರಗಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಅಲ್ಲದೇ ತಮ್ಮ ತಂಡದಲ್ಲಿದ್ದ ಇನ್ನಿಬ್ಬರ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ
ಹರಿಹರದ ಲಾಡ್ಜ್‍ನಲ್ಲಿ ರೂಂ ಬಾಡಿಗೆ ಪಡೆದು ತಂಗಿದ್ದ ಮನೋಜ್‍ಕುಮಾರ್ ಹಾಗೂ ರೋಹಿತ್ ಕುಮಾರ್ ಅವರನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.

      ವಾರದ ಹಿಂದೆ ಹೊನ್ನಾಳ್ಳಿ ನಗರದಲ್ಲಿ ಮಹಿಳೆಯೊಬ್ಬರ ಸರ ಕಿತ್ತುಕೊಂಡು ಹೋಗಿದ್ದು, 7 ತಿಂಗಳ ಹಿಂದೆ ಹರಿಹರ ನಗರದಲ್ಲಿ ಸರ ಕಿತ್ತುಕೊಂಡಿರುವುದು, ಮಾರ್ಚ್‍ನಲ್ಲಿ ಲಕ್ಕಮುತ್ತೇನಹಳ್ಳಿ ಗ್ರಾಮದಲ್ಲಿ, ಏಪ್ರಿಲ್‍ನಲ್ಲಿ ಆನಗೋಡ ಗ್ರಾಮದಲ್ಲಿ ಹಾಗೂ 8 ತಿಂಗಳ ಹಿಂದೆ ದಾವಣಗೆರೆ ತಾಲೂಕಿನ ಗೋಣಿವಾಡ ಗ್ರಾಮದಲ್ಲಿ ತಾಳಿಸರವನ್ನು ಬೈಕ್‍ನಲ್ಲಿ ಬಂದು ಕಿತ್ತುಕೊಂಡು ಹೋಗಿದ್ದೇವೆಂದು ವಿಚಾರಣೆಯ ವೇಳೆಯಲ್ಲಿ ಆರೋಪಿಗಳು ಒಪ್ಪಿಕೊಂಡಿದ್ದಾರೆಂದು ಅವರು ವಿವರಿಸಿದರು.

      ಸರಗಳ್ಳತನ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ತಂಡದಲ್ಲಿದ್ದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕಾರ್ಯವನ್ನು ಶ್ಲಾಘಿಸಿ, ಪ್ರಶಂಸಿಸಿ ಬಹುಮಾನ ಘೋಷಿಸಿದರು.

      ಈ ಸಂದರ್ಭದಲ್ಲಿ ಗ್ರಾಮಾಂತರ ಡಿವೈಎಸ್‍ಪಿ ಮಂಜುನಾಥ್ ಕೆ. ಗಂಗಲ್, ಹೊನ್ನಾಳಿ ಸಿಪಿಐ ಬ್ರಿಜೇಷ್ ಮ್ಯಾಥ್ಯು ಹಾಗೂ ಪಿಎಸ್‍ಐಗಳಾದ ತಿಪ್ಪೇಸ್ವಾಮಿ ಮತ್ತು ಹನುಮಂತಪ್ಪ ಶಿರೀಹಳ್ಳಿ ಹಾಗೂ ಸಿಬ್ಬಂದಿಗಳು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link