ದಾವಣಗೆರೆ :
ವಿದ್ಯುತ್ ಕಂಬ ಏರಿ ಲೈನ್ ದುರಸ್ತಿ ಮಾಡುತ್ತಿದ್ದ ವೇಳೆ ಕರೆಂಟ್ ಶಾಕ್ ಹೊಡೆದು ಗುತ್ತಿಗೆ ಕಾರ್ಮಿಕ ಕಂಬದ ಮೇಲೆಯೇ ಪ್ರಾಣ ಬಿಟ್ಟ ದಾರುಣ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಬೆಸ್ಕಾಂನ ಗುತ್ತಿಗೆ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಇಬ್ಬರು ಲೈನ್ ಮ್ಯಾನ್ಗಳು ಭಾನುವಾರ ಹರಿಹರದ ಪಟೇಲ್ ಬಡವಾಣೆಯ ಸಾಯಿಬಾಬ ಮಂದಿರದ ಬಳಿ ವಿದ್ಯುತ್ ತಂತಿ ದುರಸ್ಥಿ ಮಾಡುತ್ತಿದ್ದರು. ಈ ವೇಳೆ ಲೈನ್ ಮ್ಯಾನ್ ಕರೆಂಟ್ ತೆಗೆದಿದ್ದಾಗಿ ಹೇಳಿದ್ದ ಹಿನ್ನೆಲೆಯಲ್ಲಿ ವಿದ್ಯುತ್ ಲೈನ್ ದುರಸ್ತಿಗೆಂದು ಇಬ್ಬರು ಯುವಕರು ವಿದ್ಯುತ್ ಕಂಬ ಏರಿ ರಿಪೇರಿ ಆರಂಭಿಸಿದ್ದಾರೆ. ಆದರೆ ಏಕಾಏಕಿ ವಿದ್ಯುತ್ ಪ್ರವಹಿಸಲು ಆರಂಭವಾಗಿದೆ. ಕಂಬದ ಮೇಲಿಂದ ಕರೆಂಟ್ ತೆಗೆಯುವಂತೆ ಕೂಗಿಕೊಂಡರೂ ಲೈನ್ ಮ್ಯಾನ್ ಗೆ ಕರೆಂಟ್ ತೆಗೆಯಲು ಸಾಧ್ಯವಾಗಿಲ್ಲ ಎನ್ನಲಾಗಿದೆ.
ಈ ವೇಳೆ ಅಚಾನಕ್ಕಾಗಿ ತಂತಿಯಲ್ಲಿ ವಿದ್ಯುತ್ ಹರಿದಿದೆ. ಇದರಿಂದಾಗಿ ಮಾರುತಿ (24) ಹೆಸರಿನ ಲೈನ್ ಮ್ಯಾನ್ ಮೃತಪಟ್ಟಿದ್ದು, ಮಹೇಶ್ (34) ಸ್ಥಿತಿ ಗಂಭೀರವಾಗಿದೆ. ಇವರಿಬ್ಬರು ಹರಿಹರ ತಾಲೂಕಿನ ಬೆಳ್ಳೂಡಿ ಗ್ರಾಮದ ನಿವಾಸಿಗಳು.
ಗಂಭೀರವಾಗಿ ಗಾಯಗೊಂಡಿರುವ ಮಹೇಶ್ ಜೀವನ್ಮರಣದ ನಡುವೆ ಹೋರಾಡುತ್ತಿದ್ದು, ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿಯಿಂದಲೇ ಈ ಘಟನೆ ನಡೆದಿರಬಹುದಾದ ಶಂಕೆ ವ್ಯಕ್ತವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
