ದಾವಣಗೆರೆ :

ತನಗೆ ಸಿಮ್ ಕೊಡಿಸಿ ಎಂದು ಕೇಳಿದ್ದಕ್ಕೆ ಮಗಳನ್ನೇ ತಂದೆಯೊಬ್ಬ ಕೊಲೆ ಮಾಡಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಬಿಸ್ತುವಳ್ಳಿ ಗ್ರಾಮದಲ್ಲಿ ನಡೆದಿದೆ.
ಅನಿತಾ ಕೊಲೆಯಾದ ಯುವತಿ. ಕಲ್ಲೇಶಪ್ಪ ಮಗಳನ್ನೇ ಕೊಂದ ತಂದೆ. ಅನಿತಾ ಅನ್ಯ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದು, ಇದು ಆಕೆಯ ತಂದೆಯ ವಿರೋಧವೂ ಇತ್ತು ಎನ್ನಲಾಗಿದೆ. ಮಗಳು ತನ್ನ ಪ್ರಿಯಕರನೊಟ್ಟಿಗೆ ಮಾತನಾಡುವುದಕ್ಕೆ ಸಿಮ್ ಕೇಳಿದ್ದಾಳೆ ಎಂದು ಭಾವಿಸಿ ತಂದೆ ಮಗಳನ್ನು ಕೊಲೆ ಮಾಡಿದ್ದಾನೆ ಎಂಬ ಅನುಮಾನ ವ್ಯಕ್ತವಾಗಿದೆ.

ಅನಿತಾ ಫೋನಿನಲ್ಲಿ ಮಾತನಾಡಲು ಸಿಮ್ ಬೇಕು ಎಂದು ತನ್ನ ತಂದೆಯ ಬಳಿ ಕೇಳಿದ್ದಾಳೆ. ಇದಕ್ಕೆ ತಂದೆ ವಿರೋಧ ವ್ಯಕ್ತಪಡಿಸಿದ್ದಾರೆ. ಆಗ ಅವರಿಬ್ಬರ ನಡುವೆ ಜಗಳ ನಡೆದಿದೆ. ಕೊನೆಗೆ ತಂದೆ ಸಿಮ್ ಕೊಡಿಸುವುದಾಗಿ ಹೇಳಿ ಮಗಳನ್ನು ಕರೆದುಕೊಂಡು ಹೋಗಿ ಅಡಕೆ ಹೊಲದಲ್ಲಿ ವೇಲ್ ನಿಂದ ಅನಿತಾಳ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ.
ಕೊಲೆಯಾದ ಅನಿತಾಳ ಚಿಕ್ಕಪ್ಪನೇ ಜಗಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








