ಬೆಂಗಳೂರು :
ಕೊರೋನಾ ಸೋಂಕಿನ ಸಂಕಷ್ಟದ ನಡುವೆಯೂ ರಾಜ್ಯದಲ್ಲಿ ನವೆಂಬರ್ 17ರಿಂದ ಡಿಗ್ರಿ, ಇಂಜಿನಿಯರಿಂಗ್, ಡಿಪ್ಲೊಮಾ ಕಾಲೇಜು ತೆರೆಯಲು ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.
ಇಂದು ರಾಜ್ಯದಲ್ಲಿ ಕಾಲೇಜು ತೆರೆಯುವ ಸಂಬಂಧ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ತಜ್ಞರ ಮಹತ್ವದ ಸಭೆ ನಡೆಯಿತು. ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಈ ಕುರಿತು ಉಪ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿಎನ್.ಅಶ್ವತ್ಥ ನಾರಾಯಣ್ ಮಾಹಿತಿ ನೀಡಿದ್ದು, ರಾಜ್ಯಾದ್ಯಂತ ಡಿಗ್ರಿ ಕಾಲೇಜ್ ಆರಂಭಕ್ಕೆ ಇಂದಿನ ಸಿಎಂ ನೇತೃತ್ವದಲ್ಲಿ ನಡೆದಂತ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ರಾಜ್ಯದಲ್ಲಿ ನವೆಂಬರ್ 17 ರಿಂದ ಪದವಿ ಕಾಲೇಜು ಪುನಾರಂಭ ಮಾಡಲಾಗುವುದು. ಮೊದಲಿಗೆ ಡಿಗ್ರಿ ಕಾಲೇಜು, ಇಂಜಿನಿಯರಿಂಗ್, ಡಿಪ್ಲೋಮಾ ಕಾಲೇಜು ಗಳನ್ನು ಆರಂಭ ಮಾಡಲಾಗುವುದು ಎಂದು ತಿಳಿಸಿದರು.
ಹೈಬ್ರಿಡ್ ಮಾದರಿಯಲ್ಲಿ ರಾಜ್ಯದಲ್ಲಿ ಡಿಗ್ರಿ ಕಾಲೇಜ್ ತೆರೆಯಲು ತೀರ್ಮಾನಿಸಲಾಗಿದೆ. ತರಗತಿಗೆ ಹಾಜರಾಗಿಯಾದರೂ ಕಲಿಯಬಹುದು. ಇಲ್ಲವೇ ಆನ್ ಲೈನ್ ತರಗತಿಯಲ್ಲಿ ಹಾಜರಾಗಿಯಾದರೂ ವಿದ್ಯಾರ್ಥಿಗಳು ಕಲಿಕೆ ಮುಂದುವರೆಸಬಹುದು ಎಂಬುದಾಗಿ ತಿಳಿಸಿದರು. ಹೀಗಾಗಿ ರಾಜ್ಯದಲ್ಲಿ ಎಲ್ ಎಂ ಎಸ್ ಆಧಾರಿತವಾಗಿ ನವೆಂಬರ್ 17ರಿಂದ ಪದವಿ ಕಾಲೇಜು ಆರಂಭಿಸಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದರು.
ಪೋಷಕರು ರೈಟಿಂಗ್ ಮೂಲಕ ಒಪ್ಪಿಗೆ ಸೂಚಿಸಿದರಷ್ಟೇ ಕಾಲೇಜಿಗೆ ಬರಲು ವಿದ್ಯಾರ್ಥಿಗಳಿಗೆ ಅನುಮತಿ ನೀಡಲಾಗುತ್ತದೆ. ಯಾರಿಗೂ ಒತ್ತಾಯವಿಲ್ಲ. ಪೋಷಕರ ಅನುಮತಿ ಮೇರೆಗೆ ವಿದ್ಯಾರ್ಥಿಗಳು ಕಾಲೇಜಿಗೆ ಬರಬೇಕು. ಕಾಲೇಜಿಗೆ ಬರುವುದು-ಬಿಡುವುದು ವಿದ್ಯಾರ್ಥಿಗಳ ಆಯ್ಕೆ. ಆನ್ಲೈನ್ ಮುಖಾಂತರ ಬೇಕಾದರೂ ಕ್ಲಾಸ್ ತೆಗೆದುಕೊಳ್ಳಬಹುದು ಎಂದೂ ಅವರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/10/College-students.jpg)