ಬೆಂಗಳೂರು:
ವಿಧಾನಸಭೆಯಿಂದ ವಿಧಾನಪರಿತ್ತಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಹಿರಿಯರನ್ನು ಕಡೆಗಣಿಸಿ ಕಿರಿಯರಿಗೆ ಮಣೆ ಹಾಕಿರುವ ಬಗ್ಗೆ ಸ್ವತಃ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ತಮ್ಮ ಜೆಡಿಎಸ್ ಹೈಕಮಾಂಡ್ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.
ವಿದ್ಯಾರ್ಥಿ ಸಂಘದ ಮುಖಂಡ ರಮೇಶ್ ಗೌಡ ಅವರ ಆಯ್ಕೆ ಪಕ್ಷದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಈ ಆಯ್ಕೆಯ ಬಗ್ಗೆ ಹಿರಿಯರು ಮುನಿಸಿಕೊಂಡಿದ್ಧಾರೆ.
ಸ್ವತಃ ಎಚ್. ವಿಶ್ವನಾಥ್, ಪಕ್ಷದ ವಕ್ತಾರರಾದ ರಮೇಶ್ ಬಾಬು, ವೈಎಸ್ ವಿ ದತ್ತ ಅಥವಾ ಕೋನರೆಡ್ಡಿ ಅವರ ಪೈಕಿ ಒಬ್ಬರನ್ನು ಪರಿಗಣಿಸುವಂತೆ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಮತ್ತು ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ. ದೇವೇಗೌಡ ಅವರಲ್ಲಿ ಮನವಿ ಮಾಡಿದ್ದರು.
ಆದರೆ ತಾವು ಶಿಫಾರಸ್ಸು ಮಾಡಿದ ಅಭ್ಯರ್ಥಿಯ ಹೆಸರನ್ನು ವರಿಷ್ಠರು ಪರಿಗಣಿಸಿಲ್ಲ. ಪಕ್ಷದ ಹಿರಿಯರಿಗೂ ಅವಕಾಶ ಕಲ್ಪಿಸಿಲ್ಲ. ಪರಿಷತ್ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ನಮ್ಮನ್ನು ಕಡೆಗಣನೆ ಮಾಡಲಾಗಿದೆ. ಪಕ್ಷದ ರಾಜ್ಯಾಧ್ಯಕ್ಷನ ಮಾತಿಗೆ ಪಕ್ಷದಲ್ಲಿ ಬೆಲೆಯೇ ಇಲ್ಲ,” ಎಂದು ವಿಶ್ವನಾಥ್ ತಮ್ಮ ಆಪ್ತರ ಬಳಿ ಅಸಮಾಧಾನ ತೋಡಿಕೊಂಡಿದ್ದಾರೆ ಎನ್ನಲಾಗಿದೆ.
ಪಕ್ಷದ ಹಿರಿಯ ನಾಯಕರು. ಪರಿಷತ್ ನಲ್ಲಿ ಯಾವುದೇ ವಿಷಯದ ಮೇಲೆ ಸಮರ್ಥವಾಗಿ ಮಾತನಾಡುವ ಅರ್ಹತೆ ಹೊಂದಿದ್ದಾರೆ. ಹಿರಿಯಲ್ಲಿ ಯಾರಾದರೂ ಒಬ್ಬರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಬಹುದಿತ್ತು. ಪಕ್ಷದ ಹಲವು ನಾಯಕರೆಲ್ಲ ಸೇರಿ ಶಿಫಾರಸ್ಸು ಮಾಡಿದ್ದರೂ ಬೆಲೆ ಇಲ್ಲದಂತಾಯಿತು ಎಂದು ತಮ್ಮ ಅತೃಪ್ತಿ ಹೊರಹಾಕಿದ್ದಾರೆ.
ಜೆಡಿಎಸ್ ಪಾಲಿನ ಒಂದು ಸ್ಥಾನಕ್ಕಾಗಿ ಆರ್.ಪ್ರಕಾಶ್ ಮತ್ತು ಅಮರನಾಥ್ ಅವರು ಪ್ರಬಲ ಆಕಾಂಕ್ಷಿಗಳಾಗಿದ್ದರು. ಸೋಮವಾರದವರೆಗೂ ಯಾವ ಅಭ್ಯರ್ಥಿಯನ್ನು ಆಯ್ಕೆ ಮಾಡದ ಜೆಡಿಎಸ್ ವರಿಷ್ಠರು ಅಂತಿಮವಾಗಿ ರಮೇಶ್ ಗೌಡರಿಗೆ ಮಣೆ ಹಾಕಿದ್ದು ಅಚ್ಚರಿಗೆ ಕಾರಣವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2018/09/dc-Cover-93u440ja3j0gah6uc7.gif)