ನವದೆಹಲಿ :
ಆರ್ಥಿಕ ಅಪರಾಧಗಳ ಹಿನ್ನೆಲೆಯಲ್ಲಿ ಬಂಧನಕ್ಕೊಳಗಾಗಿರುವ ಡಿ.ಕೆ.ಶಿವಕುಮಾರ್ ರವರನ್ನು ಚಿಕಿತ್ಸೆಗಾಗಿ ನವದೆಹಲಿಯಲ್ಲಿರುವ ಆರ್ ಎಂ ಎಲ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಡಿ.ಕೆ.ಶಿವಕುಮಾರ್ ಅವರನ್ನು ತುಘಲಕ್ ರಸ್ತೆಯ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿತ್ತು. ಹತ್ತು ದಿನಗಳ ವಿಚಾರಣೆ ಬಳಿಕ ನಿನ್ನೆ ಶಿವಕುಮಾರ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಮತ್ತೆ ನಾಲ್ಕು ದಿನಗಳ ಕಾಲ ಇಡಿ ಕಸ್ಟಡಿಗೆ ನೀಡಲಾಗಿದೆ. ಇಂದು ಬೆಳಗ್ಗೆ ಪೊಲೀಸ್ ಠಾಣೆಯಿಂದ ಲೋಕನಾಯಕ ಭವನದಲ್ಲಿರುವ ಜಾರಿನಿರ್ದೇಶನಾಲಯದ ಕಚೇರಿಗಾಗಿ ಕರೆದೊಯ್ಯಲಾಯಿತು. ಆದರೆ, ಈ ಸಂದರ್ಭದಲ್ಲಿ ಅವರ ರಕ್ತದೊತ್ತಡ ಹೆಚ್ಚಾಗಿದ್ದು, ಕೆಲ ಕಾಲ ವಿಶ್ರಾಂತಿ ಬಳಿಕವೂ ಏರಿಳಿತ ಕಂಡುಬಂದಿದ್ದು, ರಾಮಮನೋಹರ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಯಿತು.
ಡಿ.ಕೆ ಶಿವಕುಮಾರ್ ಅವರ ಆರೋಗ್ಯದಲ್ಲಿ ಕಳೆದ ಮೂರು ನಾಲ್ಕು ದಿವಸದಿಂದ ಏರುಪೇರು ಉಂಟಾಗುತ್ತಿದ್ದು, ಅವರ ರಕ್ತದೊತ್ತಡದಲ್ಲಿ ಸಾಕಷ್ಟು ಏರುಪೇರು ಉಂಟಾಗುತ್ತಿದೆ ಎನ್ನಲಾಗಿದೆ.
ಸದ್ಯ ಡಿ.ಕೆ.ಶಿವಕುಮಾರ್ ಅವರು ಇನ್ನೂ ಮೂರು ದಿವಸಗಳ ಕಾಲ ಇಡಿ ವಶದಲ್ಲಿ ಇರಬೇಕಾಗಿದ್ದು, ಅವರ ಆರೋಗ್ಯದಲ್ಲಿ ದಿನದಿಂದ ದಿನಕ್ಕೆ ಏರುಪೇರು ಉಂಟಾಗುತ್ತಿರುವ ಹಿನ್ನಲೆಯಲ್ಲಿ ಕುಟುಂಬಸ್ಥರು ಆತಂಕಕ್ಕೀಡಾಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
